ಅಡ್ವೊಕೇಟ್ ಜನರಲ್‌ ರಾಜೀನಾಮೆ ಒಪ್ಪಿಕೊಳ್ಳದ ಪಂಜಾಬ್‌ ಸಿಎಂ, ಸಿಧುಗೆ ಚನ್ನಿ ಸಡ್ಡು?

ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಪಂಜಾಬ್‌ ಅಡ್ವೊಕೇಟ್‌ ಜನರಲ್‌ ಅಮರ್‌ಪ್ರೀತ್‌ ಸಿಂಗ್‌ ಡಿಯೋಲ್‌ ರಾಜೀನಾಮೆಯನ್ನು ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಒಪ್ಪಿಕೊಂಡಿಲ್ಲ. ಈ ಮೂಲಕ ಪಿಪಿಸಿಸಿ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧುಗೆ ಸಿಎಂ ಸಡ್ಡು ಹೊಡೆದಿದ್ದಾರೆ.

ಅಡ್ವೊಕೇಟ್ ಜನರಲ್‌ ರಾಜೀನಾಮೆ ಒಪ್ಪಿಕೊಳ್ಳದ ಪಂಜಾಬ್‌ ಸಿಎಂ, ಸಿಧುಗೆ ಚನ್ನಿ ಸಡ್ಡು?
Linkup
ಚಂಡೀಗಢ: ಕಾಂಗ್ರೆಸ್‌ನ ಬಿಕಟ್ಟು ಮುಗಿಯುವಂತೆ ಕಾಣಿಸುತ್ತಿಲ್ಲ. ಇನ್ನೇನು ಎಲ್ಲವೂ ಸರಿಯಾಗಲಿದೆ ಎನ್ನುವಾಗಲೇ ಹೊಸ ಹೊಸ ವಿವಾದಗಳು, ಘರ್ಷಣೆಗಳು ಹುಟ್ಟಿಕೊಳ್ಳುತ್ತಲೇ ಇದ್ದು, ಕದನ ವಿರಾಮ ಎನ್ನುವುದು ಪಂಜಾಬ್‌ ಕೈ ಪಾಳಯದಲ್ಲಿ ಮರೀಚಿಕೆಯಾಗಿದೆ. ಪಂಜಾಬ್‌ ಅಡ್ವೊಕೇಟ್‌ ಜನರಲ್‌ ಅಮರ್‌ಪ್ರೀತ್‌ ಸಿಂಗ್‌ ಡಿಯೋಲ್‌ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಇದನ್ನು ಮುಖ್ಯಮಂತ್ರಿ ಒಪ್ಪಿಕೊಂಡಿಲ್ಲ. ಈ ಮೂಲಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧುಗೆ ಸಿಎಂ ಸಡ್ಡು ಹೊಡೆದಿದ್ದಾರೆ. ಖ್ಯಾತ ಕ್ರಿಮಿನಲ್‌ ಲಾಯರ್‌ ಆಗಿರುವ ಡಿಯೋಲ್‌ ಅವರನ್ನು ಅಡ್ವೋಕೇಟ್‌ ಜನರಲ್‌ ಹುದ್ದೆಯಿಂದ ವಜಾಗೊಳಿಸಬೇಕು ಎಂದು ನವಜೋತ್‌ ಸಿಂಗ್‌ ಸಿಧು ಪಟ್ಟು ಹಿಡಿದು ಕೂತಿದ್ದರು. ಅದರಂತೆ ಸೋಮವಾರ ಡಿಯೋಲ್‌ ಮುಖ್ಯಮಂತ್ರಿಗಳಿಗೆ ತಮ್ಮ ರಾಜೀನಾಮೆಯನ್ನೂ ಸಲ್ಲಿಸಿದ್ದರು. ಆದರೆ ಈ ಪ್ರಕರಣದಲ್ಲೀಗ ಮಂಗಳವಾರ ಹೊಸ ಬೆಳವಣಿಗೆ ನಡೆದಿದೆ. ನವಜೋತ್‌ ಸಿಂಗ್‌ ಸಿಧು ನಡೆಯಿಂದ ಅಸಮಾಧಾನಗೊಂಡು ಸಿಎಂ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಸಿಧು ಸಾರ್ವಜನಿಕವಾಗಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದನ್ನು ಮುಂದುವರಿಸಿದ್ದಾರೆ. ಸೋಮವಾರವೂ ಅವರು ವಿದ್ಯುತ್‌ ದರ ಇಳಿಕೆ ಮಾಡುವ ರಾಜ್ಯ ಸರಕಾರದ ತೀರ್ಮಾನವನ್ನು ವಿರೋಧಿಸಿದ್ದರು. “ಅವರು (ರಾಜಕಾರಣಿಗಳು) ಲಾಲಿಪಪ್‌ಗಳನ್ನು ನೀಡುತ್ತಿದ್ದಾರೆ… ಇದು ಉಚಿತ, ಅದು ಉಚಿತ ಅಂತ. ಇದು ಕಳೆದ ಎರಡು ತಿಂಗಳುಗಳಿಂದ ನಡೆಯುತ್ತಿದೆ,” ಎಂದು ನವಜೋತ್‌ ಸಿಂಗ್‌ ಸಿಧು ಸಾರ್ವಜನಿಕ ಸಮಾವೇಶದಲ್ಲಿ ಕಿಡಿಕಾರಿದ್ದರು. ಜತೆಗೆ ಪಂಜಾಬ್‌ ಕಲ್ಯಾಣದ ಅಜೆಂಡಾದ ಮೇಲೆ ಮಾತ್ರವೇ ಮತ ನೀಡುವಂತೆ ಜನರನ್ನು ಆಗ್ರಹಿಸಿದ್ದರು. ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ನ ಹಿರಿಯ ವಕೀಲರಾಗಿರುವ ಡಿಯೋಲ್‌ ಅವರನ್ನು ಕಳೆದ ಸೆ.27ರಂದು ರಾಜ್ಯದ ಅಡ್ವೊಕೇಟ್‌ ಜನರಲ್‌ ಆಗಿ ಚರಣ್‌ಜಿತ್‌ ಸಿಂಗ್‌ ಚನ್ನಿ ಸರಕಾರ ನೇಮಕ ಮಾಡಿತ್ತು. ಜತೆಗೆ, ಇಕ್ಬಾಲ್‌ ಪ್ರೀತ್‌ ಸಿಂಗ್‌ ಸಹೋಟಾ ಅವರನ್ನು ಪೊಲೀಸ್‌ ಮಹಾನಿರ್ದೇಶಕರಾಗಿ ನೇಮಕ ಮಾಡಿತ್ತು. ಈ ನೇಮಕಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪಿಪಿಸಿಸಿ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಅವರು ಮರುದಿನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ವರಿಷ್ಠರನ್ನು ಭೇಟಿ ಮಾಡಿದಾಗಲೂ ತಮ್ಮ ಹಠಕ್ಕೆ ಅಂಟಿಕೊಂಡಿದ್ದ ಅವರು, ಈ ಇಬ್ಬರ ನೇಮಕಾತಿ ಆದೇಶ ಪಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದ್ದರು. ಗುರು ಗ್ರಂಥ ಸಾಹಿಬ್‌ಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ 2015ರ ಅ.14ರಂದು ಬೆಹಬಲ್‌ ಕಲಾನ್‌, ಕೊಟ್ಕಾಪುರಗಳಲ್ಲಿ ಪ್ರತಿಭಟನೆ ನಡೆದಿತ್ತು. ಪ್ರತಿಭಟನಾಕಾರರನ್ನು ನಿಯಂತ್ರಿಧಿಸಲು ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಒಟ್ಟು ನಾಲ್ವರು (ಎರಡೂ ಸ್ಥಳಗಳಲ್ಲಿ ತಲಾ ಇಬ್ಬರು) ಮೃತಪಟ್ಟಿದ್ದರು. ಅಂದಿನ ಡಿಜಿಪಿಯಾಗಿದ್ದ ಸುಮೇಧ್‌ ಸಿಂಗ್‌ ಸೈನಿ ಹಾಗೂ ಇತರ ಆರೋಪಿಗಳ ಪರವಾಗಿ ಡಿಯೋಲ್‌ ಅವರು ಹೈಕೋರ್ಟ್‌ನಲ್ಲಿ ವಾದಿಸಿದ್ದರು. ಅಲ್ಲದೇ, ಜಾಗೃತ ದಳವು 2020ರಲ್ಲಿ ಸೈನಿ ಅವರನ್ನು ಭ್ರಷ್ಟಾಚಾರ ಆರೋಪದಲ್ಲಿ ಬಂಧಿಸಿದಾಗ, ಅವರ ಪರ ವಾದಿಸಿ ಬಿಡುಗಡೆ ಮಾಡಿಸುವಲ್ಲಿಯೂ ಡಿಯೋಲ್‌ ಯಶಸ್ವಿಯಾಗಿದ್ದರು. ಇದೇ ಕಾರಣದಿಂದ ಅವರ ನೇಮಕವನ್ನು ಸಿಧು ವಿರೋಧಿಸಿದ್ದರು. ಕೆಲವು ಸಿಖ್‌ ಸಂಘಟನೆಗಳು ಸಹ ಡಿಯೋಲ್‌ ನೇಮಕ ಖಂಡಿಸಿದ್ದವು. ಈ ಎಲ್ಲಾ ಹಿನ್ನೆಲೆಯಲ್ಲಿ ಸೋಮವಾರ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರಿಗೆ ಡಿಯೋಲ್‌ ರಾಜೀನಾಮೆ ಪತ್ರ ಹಸ್ತಾಂತರಿಸಿದ್ದರು. ಆದರೆ ಈಗ ರಾಜೀನಾಮೆಯನ್ನೇ ಮುಖ್ಯಮಂತ್ರಿಗಳು ಅಂಗೀಕರಿಸಿಲ್ಲ. ಹೀಗಾಗಿ ಮುಂದೇನಾಗಲಿದೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.