Russia-Ukraine Crisis: ಕುವೈತ್ ಕಾರ್ಯಾಚರಣೆ ಮುಂದೆ ಇದೇನೂ ಅಲ್ಲ!: ಸರ್ಕಾರದ ನಡೆಗೆ ಯಶವಂತ್ ಸಿನ್ಹಾ ಟೀಕೆ

ಭಾರತ ಸರ್ಕಾರವು ಈ ಹಿಂದೆ ಮಾಡಿದ ಏರ್‌ಲಿಫ್ಟ್ ಕಾರ್ಯಾಚರಣೆಗಳಿಗೆ ಹೋಲಿಸಿದರೆ ಈ ಕಾರ್ಯಾಚರಣೆ ಅಷ್ಟೇನೂ ದೊಡ್ಡದಲ್ಲ ಎಂದು ಬಿಜೆಪಿಯ ಮಾಜಿ ನಾಯಕ ಯಶವಂತ್ ಸಿನ್ಹಾ ಹೇಳಿದ್ದಾರೆ. ಈ ಕಾರ್ಯಾಚರಣೆಯನ್ನು ಪ್ರಚಾರಕ್ಕೆ ಬಳಸಲಾಗುತ್ತಿದೆ ಎಂದು ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

Russia-Ukraine Crisis: ಕುವೈತ್ ಕಾರ್ಯಾಚರಣೆ ಮುಂದೆ ಇದೇನೂ ಅಲ್ಲ!: ಸರ್ಕಾರದ ನಡೆಗೆ ಯಶವಂತ್ ಸಿನ್ಹಾ ಟೀಕೆ
Linkup
ಹೊಸದಿಲ್ಲಿ: ಯುದ್ಧ ಪೀಡಿತ ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವ ಪ್ರಕ್ರಿಯೆ ನಿಧಾನಗತಿಯಲ್ಲಿದೆ ಎಂದು ವಿರೋಧಪಕ್ಷಗಳಾದ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಆರೋಪಿಸಿವೆ. ರಷ್ಯಾ ದಾಳಿಯಿಂದ ನಾಗರಿಕರನ್ನು ರಕ್ಷಿಸಿ ಕರೆತರಲು ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಅನುಸರಿಸುತ್ತಿಲ್ಲ ಮತ್ತು ಈ ಕಾರ್ಯದಲ್ಲಿ ಪ್ರಧಾನಿ ಅವರೇ ನಾಪತ್ತೆಯಾಗಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಉಕ್ರೇನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯಾಚರಣೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದು 1990ರ ಗಲ್ಫ್ ಯುದ್ಧದ ವೇಳೆ ನಡೆಸಿದ ರಕ್ಷಣಾ ಕಾರ್ಯಾಚರಣೆಗಿಂತ ದೊಡ್ಡದಾಗಿಲ್ಲ ಎಂದು ಬಿಜೆಪಿಯ ಮಾಜಿ ನಾಯಕ ಹಾಗೂ ಟಿಎಂಸಿ ಮುಖಂಡ ಹೇಳಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 18,000 ಇರಬಹುದು ಎಂದು ಅಂದಾಜಿಸಲಾಗಿದೆ. ಈ ಹಿಂದೆ ನಡೆಸಿದ ಏರ್‌ಲಿಫ್ಟ್‌ಗಳಿಗೆ ಹೋಲಿಸಿದರೆ ಇದು ಭಾರಿ ದೊಡ್ಡ ಸಂಖ್ಯೆಯೇನಲ್ಲ ಎಂದು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಸಿನ್ಹಾ, ಕೇಂದ್ರ ಸರ್ಕಾರದ ವಿರುದ್ಧ ತೀಕ್ಷ್ಣ ಟೀಕಾಪ್ರಹಾರ ನಡೆಸಿದ್ದಾರೆ. 1990ರ ಆಗಸ್ಟ್‌ ಮತ್ತು ಅಕ್ಟೋಬರ್ ತಿಂಗಳ ನಡುವೆ ಕುವೈತ್‌ನಿಂದ ಭಾರತ 1,70,000 ಜನರನ್ನು ಭಾರತ ಸ್ಥಳಾಂತರ ಮಾಡಿತ್ತು. ಆಗ ವಿದೇಶಾಂಗ ಸಚಿವರಾಗಿದ್ದ ಮಾಜಿ ಪ್ರಧಾನಿ ಇಂದ್ರ ಕುಮಾರ್ ಗುಜ್ರಾಲ್ ಅವರು ಇಡೀ ಕಾರ್ಯಾಚರಣೆಯ ಉಸ್ತುವಾರಿ ನಡೆಸಿದ್ದರು ಎಂದು ಸಿನ್ಹಾ ಹೇಳಿದ್ದಾರೆ. "ಉತ್ತರ ಪ್ರದೇಶದಲ್ಲಿ ಇನ್ನೂ ಚುನಾವಣೆ ನಡೆಯುತ್ತಿರುವ ವೇಳೆ, ಭಾರತ ಸರ್ಕಾರ ಅತ್ಯದ್ಭುತ ಕೆಲಸ ಮಾಡಿದೆ ಎಂದು ಪ್ರಚಾರ ಮಾಡಲು ಈ ಸನ್ನಿವೇಶವನ್ನು ಬಳಸಿಕೊಳ್ಳುತ್ತಿರುವುದು ದುರಂತದ ಪರಾಕಾಷ್ಠೆ. ಉತ್ತರ ಪ್ರದೇಶ ಚುನಾವಣಾ ಪ್ರಚಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮಾತನಾಡುತ್ತಿರುವುದು ಒಳ್ಳೆಯ ಸಂಗತಿಯಲ್ಲ. ಇದನ್ನು ಮಾಡುವುದು ಸರ್ಕಾರದ ಕೆಲಸ" ಎಂದು ವಾಗ್ದಾಳಿ ನಡೆಸಿದ್ದಾರೆ. ಸರ್ಕಾರಕ್ಕೆ ಬಿಕ್ಕಟ್ಟು ಬರಲಿದೆ ಎನ್ನುವುದು ತಿಳಿದಿತ್ತು. ಉಕ್ರೇನ್ ಮೇಲಿನ ವಾಯು ಪ್ರದೇಶ ವಿಮಾನ ಓಡಾಟಕ್ಕೆ ಮುಕ್ತವಾಗಿದ್ದ ಸಂದರ್ಭದಲ್ಲಿ ಅಲ್ಲಿಂದ ಹೊರ ಬರಲು ಬಯಸಿದ್ದವರಿಗೆ ಸೂಕ್ತ ವ್ಯವಸ್ಥೆಗಳನ್ನು ಆ ಕ್ಷಣಕ್ಕೆ ಮಾಡಬೇಕಿತ್ತು ಎಂದು ಅವರು ಹೇಳಿದ್ದಾರೆ. "ವಾಯು ಪ್ರದೇಶ ಮುಚ್ಚಿದ ಬಳಿಕವೂ ನಮ್ಮ ಉಕ್ರೇನ್‌ನಲ್ಲಿನ ನಮ್ಮ , ನೆರೆಯ ದೇಶಗಳಿಗೆ ಬಸ್‌ಗಳು ಅಥವಾ ಲಭ್ಯವಿರುವ ಯಾವುದೇ ಸಾರಿಗೆಗಳ ಮೂಲಕ ವಿದ್ಯಾರ್ಥಿಗಳು ಆದಷ್ಟು ಬೇಗನೆ ಅಲ್ಲಿಂದ ಹೊರಡುವಂತೆ ವ್ಯವಸ್ಥೆ ಮಾಡಬಹುದಾಗಿತ್ತು" ಎಂದು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರ ಮೊದಲೇ ಸೂಕ್ತ ಯೋಜನೆಯೊಂದಿಗೆ ಸಿದ್ಧವಾಗಿರಬೇಕಿತ್ತು. ಉಕ್ರೇನ್‌ ಗಡಿಯಲ್ಲಿರುವ ನಾಲ್ಕು ದೇಶಗಳಿಗೆ ನಾಲ್ವರು ಸಚಿವರನ್ನು ಕಳುಹಿಸಲಾಗಿದೆ. ಇದನ್ನು ಮೊದಲೇ ಮಾಡಬೇಕಿತ್ತು ಎಂದಿದ್ದಾರೆ.