60 ಅಂತಸ್ತಿನ ಕಟ್ಟಡದಲ್ಲಿ ಭಾರಿ ಬೆಂಕಿ ಅನಾಹುತ: ಕೆಳಗೆ ಜಿಗಿದು ಸೆಕ್ಯುರಿಟಿ ಗಾರ್ಡ್ ಸಾವು

ಮುಂಬಯಿಯ ಕರ್ರಿ ರಸ್ತೆಯಲ್ಲಿರುವ 60 ಮಹಡಿ ಎತ್ತರದ ಐಷಾರಾಮಿ ವಸತಿ ಕಟ್ಟಡದಲ್ಲಿ ಶುಕ್ರವಾರ ಮಧ್ಯಾಹ್ನ ಭೀಕರ ಅಗ್ನಿ ಅನಾಹುತ ಉಂಟಾಗಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಭದ್ರತಾ ಕಾವಲುಗಾರ ಕಟ್ಟಡದಿಂದ ಜಿಗಿದು ಮೃತಪಟ್ಟಿದ್ದಾರೆ.

60 ಅಂತಸ್ತಿನ ಕಟ್ಟಡದಲ್ಲಿ ಭಾರಿ ಬೆಂಕಿ ಅನಾಹುತ: ಕೆಳಗೆ ಜಿಗಿದು ಸೆಕ್ಯುರಿಟಿ ಗಾರ್ಡ್ ಸಾವು
Linkup
ಮುಂಬಯಿ: ಮಹಾರಾಷ್ಟ್ರ ರಾಜಧಾನಿ ಮುಂಬಯಿಯ ಲಾಲ್‌ಬಾಗ್ ಪ್ರದೇಶದಲ್ಲಿನ 60 ಅಂತಸ್ತಿನ ವಸತಿ ಕಟ್ಟಡದಲ್ಲಿ ಭಾರಿ ಸಂಭವಿಸಿದೆ. ಕರ್ರಿ ರಸ್ತೆಯಲ್ಲಿರುವ ಅವಿಘ್ನ ಪಾರ್ಕ್ ಕಟ್ಟಡದಲ್ಲಿ ವಿಘ್ನ ಉಂಟಾಗಿದೆ. ಕಟ್ಟಡದಲ್ಲಿ ನಾಲ್ಕನೇ ಮಟ್ಟದ ಅಂದರೆ, ಗಂಭೀರ ಹಾಗೂ ಅಪಾಯಕಾರಿ ಸ್ವರೂಪದಲ್ಲಿ ಕಾಣಿಸಿಕೊಂಡಿದೆ. ಹದಿನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿರುವುದು ಖಚಿತವಾಗಿದೆ. ಕಟ್ಟಡದ ಒಳಗೆ ಸಿಲುಕಿರುವವರ ಪತ್ತೆ ಹಾಗೂ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಕರ್ರಿ ರಸ್ತೆಯಲ್ಲಿರುವ ಈ ಐಷಾರಾಮಿ ಕಟ್ಟಡದ 19ನೇ ಮಹಡಿಯಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಭಾರಿ ಪ್ರಮಾಣದಲ್ಲಿ ಬೆಂಕಿಯ ಜ್ವಾಲೆ ಹಾಗೂ ಹೊಗೆ ಸುತ್ತಮುತ್ತಲೂ ಆವರಿಸಿತ್ತು. ಕಟ್ಟಡದ 19ನೇ ಮಹಡಿ ಬೆಂಕಿಯಿಂದ ದಹಿಸುತ್ತಿರುವಾಗ ವ್ಯಕ್ತಿಯೊಬ್ಬ ಬೀಳುವುದು ವಿಡಿಯೋಗಳಲ್ಲಿ ಸೆರೆಯಾಗಿದೆ. ಮೃತ ವ್ಯಕ್ತಿಯನ್ನು 30 ವರ್ಷದ ಅರುಣ್ ತಿವಾರಿ ಎಂದು ಗುರುತಿಸಲಾಗಿದೆ. ಅವರನ್ನು ಮಧ್ಯಾಹ್ನ 12.45ರ ಸುಮಾರಿಗೆ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಅವರನ್ನು ದಾಖಲಿಸುವಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. 19ನೇ ಮಹಡಿಯ ತುಂಬಾ ಬೆಂಕಿ ಆವರಿಸಿದ್ದರಿಂದ ಜೀವ ಉಳಿಸಿಕೊಳ್ಳವ ಹತಾಶೆಯ ಪ್ರಯತ್ನದೊಂದಿಗೆ ಅರುಣ್ ತಿವಾರಿ, ಬಾಲ್ಕನಿಯ ಅಂಚನ್ನು ಹಿಡಿದು ಕೆಳಕ್ಕಿಳಿಯುವ ಪ್ರಯತ್ನ ಮಾಡಿದ್ದರು. ಆದರೆ ಸರಳುಗಳಲ್ಲಿನ ಹಿಡಿತ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಅರುಣ್ ತಿವಾರಿ ಕೆಲಸ ಮಾಡುತ್ತಿದ್ದು, ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಕ್ಕಾಗಿ 19ನೇ ಮಹಡಿಗೆ ಧಾವಿಸಿದ್ದರು. ಆದರೆ ಬೆಂಕಿ ಜ್ವಾಲೆ ನಡುವೆ ಸಿಲುಕಿಕೊಂಡಿದ್ದರು. ಮುಂಬಾಗಿಲಿನ ಮೂಲಕ ಹೊರ ಬರಲು ಯಾವುದೇ ಅವಕಾಶ ಇರದಿದ್ದರಿಂದ ಅವರು ಬಾಲ್ಕನಿಯ ಸರಳುಗಳ ಮೇಲೆ ಕೆಲವು ನಿಮಿಷ ನೇತಾಡುತ್ತಾ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದ್ದರು. ಬೆಂಕಿಯ ತೀವ್ರತೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ. ಕಟ್ಟಡದಲ್ಲಿದ್ದ ಸುಮಾರು 26 ಮಂದಿಯನ್ನು ರಕ್ಷಿಸಲಾಗಿದೆ. ಬೆಂಕಿ ಅನಾಹುತಕ್ಕೆ ಕಾರಣ ತಿಳಿಯಲು ಅಗ್ನಿ ಸುರಕ್ಷತಾ ಅಧಿಕಾರಿಗಳು ಕಟ್ಟಡದ ಒಳಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಿಗ್ಗೆ 11.55ರ ವೇಳೆ ನಮಗೆ ಅಗ್ನಿ ಅನಾಹುತದ ಮಾಹಿತಿ ಬರುತ್ತಿದ್ದಂತೆಯೇ ನಮ್ಮ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಅಲ್ಲಿಗೆ ತೆರಳಿದ್ದರು. ಆ ವೇಳೆಗಾಗಲೇ ಬೆಂಕಿ 20ನೇ ಮಹಡಿಗೂ ಆವರಿಸಿತ್ತು. ಮಹಡಿಯಿಂದ ಜಿಗಿದ ವ್ಯಕ್ತಿ ಮೃತಪಟ್ಟಿದ್ದಾನೆ. ಕಟ್ಟಡದ ಒಳಗೆ ಇನ್ನೂ ಅನೇಕರಿದ್ದರು. ಅವರನ್ನು ರಕ್ಷಿಸಲಾಗಿದೆ ಎಂದು ಮುಂಬಯಿ ಮಹಾನಗರ ಪಾಲಿಕೆ ಆಯುಕ್ತ ಇಕ್ಬಾಲ್ ಚಾಹಲ್ ಹೇಳಿದ್ದಾರೆ. ವಿಪರ್ಯಾಸವೆಂದರೆ ಅಕ್ಟೋಬರ್ 1ರಂದು ಅವಿಘ್ನಾ ಪಾರ್ಕ್‌ನಲ್ಲಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಅನಾಹುತದ ಸಂದರ್ಭಗಳನ್ನು ಎದುರಿಸುವುದು ಹೇಗೆ ಎಂಬ ಅಣಕು ಕಾರ್ಯಾಚರಣೆ ನಡೆಸಿದ್ದರು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕಟ್ಟಡದಲ್ಲಿ ಬೆಂಕಿಯಿಂದ ರಕ್ಷಿಸುವ ಎಲ್ಲ ಅಗತ್ಯ ಸೌಕರ್ಯಗಳೂ ಇದ್ದವು ಎನ್ನಲಾಗಿದೆ.