ಸಾಕಷ್ಟು ಕನ್ನಡ ಸಿನಿಮಾಗಳು ರಿಲೀಸ್‌ಗೆ ರೆಡಿಯಿದ್ದರೂ ತೆರೆ ಮೇಲೆ ಅಬ್ಬರಿಸಲು ಅನಿಶ್ಚಿತತೆ!

ಕೊರೊನಾ ಅಲೆಗಳ ಮಧ್ಯದಲ್ಲಿ ಎಲ್ಲವೂ ಸರಿ ಹೋಗುತ್ತಿದೆ, ಶೇ. 100 ಸೀಟು ಭರ್ತಿಗೆ ಸರ್ಕಾರ ಅನುಮತಿ ನೀಡುತ್ತದೆ ಎಂದು ಭಾವಿಸಿದ್ದ ನಿರ್ಮಾಪಕರಿಗೆ ಈಗ ಮತ್ತೆ ಅತಂತ್ರ ಸ್ಥಿತಿ ಬಂದೊದಗಿದೆ.

ಸಾಕಷ್ಟು ಕನ್ನಡ ಸಿನಿಮಾಗಳು ರಿಲೀಸ್‌ಗೆ ರೆಡಿಯಿದ್ದರೂ ತೆರೆ ಮೇಲೆ ಅಬ್ಬರಿಸಲು ಅನಿಶ್ಚಿತತೆ!
Linkup
(ಪದ್ಮಾ ಶಿವಮೊಗ್ಗ) ಪ್ರತಿವರ್ಷ ಶ್ರಾವಣ ಮಾಸ ಶುರುವಾಗುತ್ತಿದ್ದಂತೆ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ಉತ್ಸಾಹದಿಂದ ಸಜ್ಜಾಗುತ್ತಿದ್ದರು. ಸಾಲಾಗಿ ಬರುವ ಹಬ್ಬಗಳಲ್ಲಿ 2-3 ದಿನ ಕಾಲೇಜು, ಕಚೇರಿಗಳಿಗೆ ರಜೆ ಇರುವುದರಿಂದ ಜನರು ರಿಲ್ಯಾಕ್ಸ್‌ ಮಾಡಲು ಬಯಸುವುದು ಸಾಮಾನ್ಯ. ಈ ಸಮಯ ಸಿನಿಮಾಗಳ ರಿಲೀಸ್‌ಗೆ ಸೂಕ್ತ ಎಂಬ ಭಾವನೆ. ಈ ವರ್ಷ ಕೊರೊನಾದಿಂದಾಗಿ ತಡೆಹಿಡಿಯಲಾಗಿದ್ದ ಸಿನಿಮಾಗಳನ್ನು ರಿಲೀಸ್‌ ಮಾಡಲು ನಿರ್ಮಾಪಕರು ಎಂದಿಗಿಂತ ಹೆಚ್ಚು ಕಾತರದಿಂದ ಕಾದಿದ್ದರು. ಎಲ್ಲವೂ ಸರಿ ಹೋಗುತ್ತಿದೆ, ಶೇ. 100 ಸೀಟು ಭರ್ತಿಗೆ ಸರ್ಕಾರ ಅನುಮತಿ ನೀಡುತ್ತದೆ ಎಂದು ಭಾವಿಸಿದ್ದ ನಿರ್ಮಾಪಕರಿಗೆ ಈಗ ಮತ್ತೆ ಅತಂತ್ರ ಸ್ಥಿತಿ ಬಂದೊದಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಚಿತ್ರರಂಗದ ಪ್ರತಿನಿಧಿಗಳು ಭೇಟಿಯಾದಾಗ ಶೇ. 100 ಸೀಟು ಭರ್ತಿ ಬಗ್ಗೆ ಸೆ. 2-3ರಂದು ಸ್ಪಷ್ಟ ಚಿತ್ರಣ ನೀಡುವುದಾಗಿ ಹೇಳಿದ್ದಾರೆ. ಇದರಿಂದ ವರಮಹಾಲಕ್ಷ್ಮಿ ಹಬ್ಬದಂದು ಶುಭಾರಂಭ ಮಾಡಲು ಸಜ್ಜಾಗಿದ್ದ 'ಸಲಗ' ಮತ್ತು 'ನಿನ್ನ ಸನಿಹಕೆ' ಚಿತ್ರಗಳನ್ನು ರಿಲೀಸ್‌ ಮಾಡಬೇಕಾ, ಬೇಡವಾ ಎಂಬ ಗೊಂದಲ ಉಂಟಾಗಿದೆ. ಶಿವರಾಜ್‌ ಕುಮಾರ್‌ ನಟನೆಯ 'ಭಜರಂಗಿ 2' ಚಿತ್ರದ ಬಗ್ಗೆಯೂ ನಿರ್ಮಾಪಕರಿಗೆ ಅನಿಶ್ಚಿತತೆ ಎದುರಾಗಿದೆ. ನೈಟ್‌ ಕಫ್ರ್ಯೂ, ವೀಕೆಂಡ್‌ ಲಾಕ್‌ಡೌನ್‌ಗಳಿಂದಾಗಿ ಶೇ.50ರ ಸೀಟು ಭರ್ತಿಯಿದ್ದರೂ ಪ್ರಯೋಜನ ಇಲ್ಲದಂತಾಗಿದೆ. ಸೆಪ್ಟೆಂಬರ್‌ನಲ್ಲಿಸಲಗ ವಿಜಯ್‌ ಮತ್ತು ಸಂಜನಾ ನಾಯಕಿಯಾಗಿ ನಟಿಸಿರುವ 'ಸಲಗ' ಚಿತ್ರವನ್ನು ಆಗಸ್ಟ್‌ 20ಕ್ಕೆ ವರಮಹಾಲಕ್ಷ್ಮಿ ಹಬ್ಬದಂದು ರಿಲೀಸ್‌ ಮಾಡಬೇಕೆಂದುಕೊಂಡಿದ್ದರು ನಿರ್ಮಾಪಕ ಕೆ.ಪಿ. ಶ್ರೀಕಾಂತ್‌. ಈಗ ಸೆಪ್ಟೆಂಬರ್‌ನಲ್ಲಿಸಿಎಂ ನಿರ್ಧಾರವನ್ನು ನೋಡಿಕೊಂಡು ರಿಲೀಸ್‌ ಮಾಡಲು ನಿರ್ಧರಿಸಿದ್ದಾರೆ ಅವರು. 'ಸಿಎಂ ಸೆ. 2-3ರಂದು ಭೇಟಿ ಆಗೋಣ ಎಂದಿದ್ದಾರೆ. ಅಂದು ಅವರ ಸಲಹೆ ಮೇರೆಗೆ ನಾವು ಮುಂದಿನ ಹೆಜ್ಜೆ ಇಡಲಿದ್ದೇವೆ. ಆದಷ್ಟು ಬೇಗ ಚಿತ್ರ ರಿಲೀಸ್‌ಗೆ ಅನುಕೂಲ ಮಾಡಿಕೊಡುವುದಾಗಿ ಹೇಳಿದ್ದಾರೆ'ಎಂದಿದ್ದಾರೆ ಶ್ರೀಕಾಂತ್‌. ಲಾಕ್‌ಡೌನ್‌ ತೆರವಿಗೆ ಕಾದ ನಿನ್ನ ಸನಿಹಕೆ ಸೂರಜ್‌ ಗೌಡ ನಟನೆ ಮತ್ತು ನಿರ್ದೇಶನದ 'ನಿನ್ನ ಸನಿಹಕೆ' ಚಿತ್ರಕ್ಕೆ ಕೂಡ ರಿಲೀಸ್‌ ಡೇಟ್‌ ಆ.20 ಎಂದು ಪ್ರಕಟಿಸಲಾಗಿದೆ. ಈಗ ಯಾವುದೇ ನಿರ್ಧಾರಕ್ಕೆ ಬರಲಾಗದೆ ಸಿಎಂ ಆದೇಶಕ್ಕೆ ಕಾದಿದ್ದಾರೆ ನಿರ್ಮಾಪಕರು. 'ಶೇ.100 ಸೀಟು ಭರ್ತಿಗೆ ಕಾಯುತ್ತಿಲ್ಲ. ಆದರೆ, ಈಗ ಹಲವು ಊರುಗಳಲ್ಲಿ ವೀಕೆಂಡ್‌ ಲಾಕ್‌ಡೌನ್‌ ಮತ್ತು ನೈಟ್‌ ಕಫ್ರ್ಯೂ ಇದೆ. ಮೈಸೂರಿನಲ್ಲೂವೀಕೆಂಡ್‌ ಲಾಕ್‌ಡೌನ್‌ ಇದೆ. ಮೈಸೂರಿನಲ್ಲಿನಮಗೆ ಹೆಚ್ಚು ಪ್ರೇಕ್ಷಕರಿದ್ದಾರೆ. ಈ ನಿಯಮಗಳಿಂದಾಗಿ ನಾವು ಯೋಚಿಸುತ್ತಿದ್ದೇವೆ. ಭಾನುವಾರದೊಳಗೆ ನಾವು ರಿಲೀಸ್‌ ಬಗ್ಗೆ ನಿರ್ಧರಿಸಬೇಕಿದೆ. ಅಷ್ಟರೊಳಗೆ ಸಿಎಂ ತಮ್ಮ ನಿರ್ಧಾರ ತಿಳಿಸಿದರೆ ನಾವೂ ಮುಂದೆ ಹೆಜ್ಜೆ ಇಡಬಹುದು. ಆ.23ರಿಂದ ಶಾಲೆ ತೆರೆಯಲು ಅನುಮತಿ ನೀಡಿರುವುದರಿಂದ ಕಫ್ರ್ಯೂ, ಲಾಕ್‌ಡೌನ್‌ ತೆರವಾಗುತ್ತೆ ಎಂದು ನಂಬಿದ್ದೇವೆ' ಎಂದಿದ್ದಾರೆ ನಿರ್ಮಾಪಕ ಸೂರಜ್‌. ಭಜರಂಗಿ 2ಗೆ ಓಕೆ ಶೇ.50 ಶಿವರಾಜ್‌ಕುಮಾರ್‌ ನಟನೆ ಮತ್ತು ಎ.ಹರ್ಷ ನಿರ್ದೇಶನದ ಚಿತ್ರ 'ಭಜರಂಗಿ 2'. ಈ ಚಿತ್ರವೂ ಸಿಎಂ ನಿರ್ಧಾರಕ್ಕೆ ಕಾದಿದೆ. ಈ ಚಿತ್ರದ ಜತೆ ಇನ್ನೂ ಎರಡು ಸಿನಿಮಾಗಳ ವಿತರಣೆಗೆ ಕಾದಿದ್ದಾರೆ ನಿರ್ಮಾಪಕ, ವಿತರಕ ಜಯಣ್ಣ. 'ಶೇ.100 ಸೀಟು ಭರ್ತಿಗೆ ಅವಕಾಶ ನೀಡದಿದ್ದರೂ ಪರವಾಗಿಲ್ಲ. ವೀಕೆಂಡ್‌ ಲಾಕ್‌ಡೌನ್‌, ಕಫ್ರ್ಯೂ ಇದ್ದರೆ ಖಂಡಿತ ಸಿನಿಮಾ ರಿಲೀಸ್‌ ಮಾಡಲು ಸಾಧ್ಯವಿಲ್ಲ. ಸಿನಿಮಾ ನೋಡಲು ಪ್ರೇಕ್ಷಕರು ಬರುವುದೇ ಆಗ. ಶೇ. 50ರಷ್ಟು ಸೀಟು ಭರ್ತಿ ಇದ್ದರೂ ಸಾಕು ರಿಲೀಸ್‌ ಮಾಡುತ್ತೇವೆ. ಯಾಕೆಂದರೆ, ಜನರಿಗೂ ತೊಂದರೆ ಆಗಬಾರದು. ಸಮಾಜದ ಬಗ್ಗೆಯೂ ನಮಗೆ ಕಾಳಜಿ ಇದೆ. 'ಭಜರಂಗಿ 2' ಸಿನಿಮಾ ಡಬ್ಬಿಂಗ್‌ ರೈಟ್ಸ್‌ ಕೊಟ್ಟಾಗಿದೆ. ಟಿವಿ ರೈಟ್ಸ್‌ ಮಾತುಕತೆ ನಡೆದಿದೆ. ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ' ಎಂದಿದ್ದಾರೆ ಜಯಣ್ಣ. ಈ ಎಲ್ಲಾ ಸಿನಿಮಾಗಳ ಜತೆ ಇನ್ನೂ ಹಲವು ಸಿನಿಮಾಗಳು ಕಳೆದ ಎರಡು ವರ್ಷಗಳಿಂದ ಕಾದಿವೆ. ಆದರೆ, ರಿಲೀಸ್‌ ಮಾಡಿ ತಲೆ ಹಗುರ ಮಾಡಿಕೊಳ್ಳಲು ಕೊರೊನಾ ಬಿಡುತ್ತಿಲ್ಲ. ಇದರಿಂದ ಚಿತ್ರರಂಗ ಬಸವಳಿದಿದೆ.