ನಾಡಗೀತೆ ಧಾಟಿ: ಲೀಲಾವತಿ ವರದಿ ತಿರಸ್ಕರಿಸಲು ಒತ್ತಾಯ

ಮೈಸೂರು ಅನಂತಸ್ವಾಮಿ ಅವರು ನಾಡಗೀತೆಯ ಒಂದು ಚರಣ ಮತ್ತು ಎರಡು ಪಲ್ಲವಿಗಳಿಗೆ ಮಾತ್ರ ರಾಗ ಸಂಯೋಜನೆ ಮಾಡಿದ್ದಾರೆ. ಪೂರ್ಣ ಪ್ರಮಾಣದ ನಾಡಗೀತೆಗೆ ಅವರು ರಾಗ ಸಂಯೋಜಿಸಿಲ್ಲ. ಆದರೆ, ಡಾ. ಸಿ. ಅಶ್ವಥ್‌ ಅವರು ಇಡೀ ನಾಡಗೀತೆಗೆ ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ.

ನಾಡಗೀತೆ ಧಾಟಿ: ಲೀಲಾವತಿ ವರದಿ ತಿರಸ್ಕರಿಸಲು ಒತ್ತಾಯ
Linkup
ಬೆಂಗಳೂರು: ''ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರ ರಾಗ ಸಂಯೋಜನೆಯ ದಾಟಿಯನ್ನೇ ಉಳಿಸಿಕೊಳ್ಳುವಂತೆ ಎಚ್‌.ಆರ್‌.ಲೀಲಾವತಿ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಸರಕಾರ ಯಾವುದೇ ಕಾರಣಕ್ಕೂ ಒಪ್ಪಬಾರದು,'' ಎಂದು ಸುಗಮ ಸಂಗೀತಗಾರರು ಒತ್ತಾಯಿಸಿದ್ದಾರೆ. ''ಮೈಸೂರು ಅನಂತಸ್ವಾಮಿ ಅವರು ನಾಡಗೀತೆಯ ಒಂದು ಚರಣ ಮತ್ತು ಎರಡು ಪಲ್ಲವಿಗಳಿಗೆ ಮಾತ್ರ ಮಾಡಿದ್ದಾರೆ. ಪೂರ್ಣ ಪ್ರಮಾಣದ ನಾಡಗೀತೆಗೆ ಅವರು ರಾಗ ಸಂಯೋಜಿಸಿಲ್ಲ. ಆದರೆ, ಡಾ. ಸಿ. ಅಶ್ವಥ್‌ ಅವರು ಇಡೀ ನಾಡಗೀತೆಗೆ ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ. ಆದ್ದರಿಂದ ಸಿ.ಅಶ್ವಥ್‌ ಅವರ ರಾಗ ಸಂಯೋಜನೆಯಲ್ಲೇ ಉಳಿಸಿಕೊಳ್ಳಬೇಕು,'' ಎಂದು ಆದರ್ಶ ಸುಗಮಸಂಗೀತ ಅಕಾಡೆಮಿ ಟ್ರಸ್ಟ್‌ನ ಮುಖ್ಯಸ್ಥ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ಇತರರು ಸರಕಾರವನ್ನು ಆಗ್ರಹಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ''ನಾಡಗೀತೆಗೆ ಸಂಬಂಧಿಸಿದಂತೆ ರಾಷ್ಟ್ರಕವಿ ಡಾ.ಜಿ.ಎಸ್‌.ಶಿವರುದ್ರಪ್ಪ, ನಾಡೋಜ ಚನ್ನವೀರ ಕಣವಿ ಹಾಗೂ ವಸಂತ ಕನಕಾಪುರ ಅವರ ಮೂರು ಸಮಿತಿಗಳು ಸರಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿವೆ. ಈ ವರದಿಗಳು ಸರಕಾರದಿಂದ ಸ್ವೀಕೃತಗೊಂಡ ಬಗ್ಗೆ ಅಥವಾ ತಿರಸ್ಕೃತಗೊಂಡ ಬಗ್ಗೆ ಇದುವರೆಗೆ ಯಾವುದೇ ಆದೇಶಗಳಿಲ್ಲ. ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯನ್ನು ಪೂರ್ಣಪಾಠ ಹಾಡಬೇಕು ಎಂಬುದು ಸರಕಾರ ಹೊರಡಿಸಿರುವ ಕೊನೆಯ ಆದೇಶವಾಗಿದೆ. ಆದರೆ, ಸರಕಾರ ದಿಢೀರನೆ ಎಚ್‌.ಆರ್‌.ಲೀಲಾವತಿ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ರಚಿಸಿ, ಒಂದೇ ದಿನದಲ್ಲಿ ತರಾತುರಿಯಲ್ಲಿ ವರದಿ ಪಡೆದಿರುವುದು ಸರಿಯಲ್ಲ,'' ಎಂದಿದ್ದಾರೆ. ''ಮೈಸೂರು ಅನಂತಸ್ವಾಮಿ ಮತ್ತು ಡಾ.ಸಿ.ಅಶ್ವಥ್‌ ಅವರು ಸುಗಮ ಸಂಗೀತ ಕ್ಷೇತ್ರದ ಅಮೂಲ್ಯ ರತ್ನಗಳಾಗಿದ್ದಾರೆ. ಇಡೀ ನಾಡಗೀತೆಗೆ ಸಿ.ಅಶ್ವಥ್‌ ಅವರು ಸಂಗೀತ ಸಂಯೋಜನೆ ಮಾಡಿರುವುದರಿಂದ ಅವರ ದಾಟಿಯನ್ನು ಉಳಿಸಿಕೊಳ್ಳಬೇಕು. ತಪ್ಪಿದರೆ ರಾಜ್ಯಾದ್ಯಂತ ಹೋರಾಟ ನಡೆಸುವುದರ ಜತೆಗೆ, ನ್ಯಾಯಾಲಯದಲ್ಲೂಪ್ರಶ್ನಿಸಲಾಗುವುದು. ಹಾಗಾಗಿ, ತರಾತುರಿ ನಿರ್ಧಾರ ಕೈಗೊಳ್ಳದೆ ಎಲ್ಲಾಸಾಹಿತಿಗಳು, ಕಲಾವಿದರು, ಸುಗಮ ಸಂಗೀತಕಾರರು, ಶಾಲಾ ಕಾಲೇಜುಗಳ ಮುಖ್ಯಸ್ಥರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಬೇಕು,'' ಎಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.