ಸೌಮ್ಯ ರೋಗ ಲಕ್ಷಣಗಳಿದ್ದರೂ ಸೆಲೆಬ್ರಿಟಿಗಳು ಬೆಡ್‌ ಆಕ್ರಮಿಸಿದ್ದಾರೆ- ಮಹಾರಾಷ್ಟ್ರ ಸಚಿವರ ಆರೋಪ

ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿರುವ ಅಥವಾ ಲಕ್ಷಣರಹಿತರಾಗಿರುವ ಸಿನಿಮಾ ರಂಗದ ಕೆಲವು ಸೆಲೆಬ್ರಿಟಿಗಳು, ಕ್ರಿಕೆಟಿಗರು ತಾವಾಗಿ ಪ್ರಮುಖ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ದೀರ್ಘ ಕಾಲದವರೆಗೆ ಹಾಸಿಗೆಗಳನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಸಚಿವರು ಆರೋಪಿಸಿದ್ದಾರೆ.

ಸೌಮ್ಯ ರೋಗ ಲಕ್ಷಣಗಳಿದ್ದರೂ ಸೆಲೆಬ್ರಿಟಿಗಳು ಬೆಡ್‌ ಆಕ್ರಮಿಸಿದ್ದಾರೆ- ಮಹಾರಾಷ್ಟ್ರ ಸಚಿವರ ಆರೋಪ
Linkup
ಮುಂಬಯಿ: ಗಂಭೀರ ಕೊರೊನಾ ರೋಗ ಲಕ್ಷಣಗಳು ಇಲ್ಲದಿದ್ದರೂ ಕೆಲವು ಬಾಲಿವುಡ್‌ ಗಣ್ಯರು ಮತ್ತು ಕ್ರಿಕೆಟಿಗರು ಮುಂಬಯಿನಲ್ಲಿ ಬೆಡ್‌ ಪಡೆದುಕೊಂಡಿದ್ದಾರೆ ಎಂದು ಸಚಿವ ಅಸ್ಲಾಂ ಖಾನ್‌ ಆರೋಪಿಸಿದ್ದಾರೆ. ಆದ್ಯತೆಯ ಮೇರೆಗೆ ಆಸ್ಪತ್ರೆಯ ಚಿಕಿತ್ಸೆ ಅಗತ್ಯವಿರುವ ಗಂಭೀರ ಅನಾರೋಗ್ಯ ಪೀಡಿತರಿಗೆ ಈ ಹಾಸಿಗೆಗಳನ್ನು ಬಳಸಬಹುದಿತ್ತು ಎಂದು ಅವರು ಹೇಳಿದ್ದಾರೆ. "ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿರುವ ಅಥವಾ ಲಕ್ಷಣರಹಿತರಾಗಿರುವ ಸಿನಿಮಾ ರಂಗದ ಕೆಲವು ಸೆಲೆಬ್ರಿಟಿಗಳು ಮತ್ತು ಕ್ರಿಕೆಟಿಗರು ತಾವಾಗಿ ಪ್ರಮುಖ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ದೀರ್ಘ ಕಾಲದವರೆಗೆ ಹಾಸಿಗೆಗಳನ್ನು ಆಕ್ರಮಿಸಿಕೊಂಡಿದ್ದಾರೆ," ಎಂದು ಅವರು ದೂರಿದ್ದಾರೆ. ಕೊರೊನಾ ಸೋಂಕಿತರಾಗಿದ್ದ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ತೆಂಡೂಲ್ಕರ್‌ಗೆ ಕೆಲವು ದಿನಗಳ ಕಾಲ ಮನೆಯಲ್ಲೇ ಐಸೋಲೇಟ್‌ ಆಗುವಂತೆ ಸೂಚನೆ ನೀಡಲಾಗಿದೆ.

ಮಹಾರಾಷ್ಟ್ರ ಮತ್ತು ಕೊರೊನಾದ ಎರಡನೇ ಅಲೆಗೆ ನಲುಗಿ ಹೋಗಿದೆ. ವಾಣಿಜ್ಯ ನಗರಿ ಮುಂಬಯಿನಲ್ಲೇ ಕಳೆದ ಕೆಲವು ದಿನಗಳಿಂದ ಪ್ರತಿ ದಿನ 10,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ನಗರದಲ್ಲಿ ಸದ್ಯ 90,000ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಈ ಕಾರಣದಿಂದ ನಗರದ ಆರೋಗ್ಯ ವ್ಯವಸ್ಥೆ ಭಾರಿ ಒತ್ತಡ ಎದುರಿಸುತ್ತಿದೆ. ಜತೆಗೆ ಬೆಡ್‌ಗಳು, ಔಷಧಗಳು ಹಾಗೂ ಆಕ್ಸಿಜನ್‌ನ ಕೊರತೆಯ ಇದೆ ಎಂದು ಕೂಡ ವರದಿಯಾಗಿದೆ. ಹೀಗಾಗಿ ಖಾಲಿ ಸ್ಥಳದಲ್ಲಿ ಮುಂದಿನ ಎರಡು ತಿಂಗಳಲ್ಲಿ ಮೂರು ಫೀಲ್ಡ್‌ ಆಸ್ಪತ್ರೆಗಳನ್ನು ತೆರೆಯುವುದಾಗಿ ಮಹಾರಾಷ್ಟ್ರ ಸರಕಾರ ಹೇಳಿದೆ. ಜತೆಗೆ ರಾತ್ರಿ ಕರ್ಫ್ಯೂ, ನಿರ್ಬಂಧಕಾಜ್ಞೆಗಳನ್ನು ಜಾರಿಗೊಳಿಸಿದ್ದು, ಸರಕಾರ ಕೊರೊನಾ ತಡೆಗಟ್ಟಲು ಶಕ್ತಿಮೀರಿ ಶ್ರಮಿಸುತ್ತಿದೆ. ಹೀಗಿದ್ದೂ ಕೋವಿಡ್‌ ಪ್ರಕರಣಗಳು ಮಾತ್ರ ಒಂದೇ ಸಮನೆ ಏರಿಕೆಯಾಗುತ್ತಿವೆ.