ವಿವಾದಿತ 3 ರಾಜಧಾನಿ ನಿರ್ಧಾರ ಕೈಬಿಟ್ಟ ಆಂಧ್ರ ಪ್ರದೇಶ, ಮಸೂದೆ ವಾಪಸ್‌

ಆಂಧ್ರ ಪ್ರದೇಶದಲ್ಲಿ ಮೂರು ರಾಜಧಾನಿಗಳನ್ನು ಸ್ಥಾಪನೆ ಮಾಡುವುದು ಜಗನ್‌ಮೋಹನ್‌ ರೆಡ್ಡಿ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು. ಆದರೆ ಇದಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ನ ತೀರ್ಮಾನದಿಂದ ಜಗನ್‌ ರೆಡ್ಡಿ ಹಿಂದೆ ಸರಿದಿದ್ದಾರೆ.

ವಿವಾದಿತ 3 ರಾಜಧಾನಿ ನಿರ್ಧಾರ ಕೈಬಿಟ್ಟ ಆಂಧ್ರ ಪ್ರದೇಶ, ಮಸೂದೆ ವಾಪಸ್‌
Linkup
ಅಮರಾವತಿ: ಭಾರಿ ವಿವಾದಕ್ಕೆ ಕಾರಣವಾಗಿದ್ದ ಮೂರು ರಾಜಧಾನಿಗಳ ಸ್ಥಾಪನೆಯ ನಿರ್ಧಾರದಿಂದ ಸರಕಾರ ಸೋಮವಾರ ಹಿಂದೆ ಸರಿದಿದೆ. ಈ ಹಿನ್ನೆಲೆಯಲ್ಲಿ ಮಸೂದೆಯನ್ನು ಹಿಂಪಡೆದುಕೊಂಡಿದೆ. ರಾಜ್ಯದಲ್ಲಿ ಮೂರು ರಾಜಧಾನಿಗಳನ್ನು ಸ್ಥಾಪನೆ ಮಾಡುವುದು ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು. ಆದರೆ ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ತನ್ನ ತೀರ್ಮಾನದಿಂದ ಜಗನ್‌ ರೆಡ್ಡಿ ಹಿಂದೆ ಸರಿದಿದ್ದಾರೆ. ಕಾರ್ಯಾಂಗದ ರಾಜಧಾನಿಯಾಗಿ ವಿಶಾಖಪಟ್ಟಣ, ಶಾಸಕಾಂಗದ ರಾಜಧಾನಿಯಾಗಿ ಅಮರಾವತಿ, ನ್ಯಾಯಾಂಗದ ರಾಜಧಾನಿಯಾಗಿ ಕರ್ನೂಲನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ನಿರ್ಧಾರದಿಂದ ಹಿಂದೆ ಸರಿಯುತ್ತಿರುವುದಾಗಿ ರಾಜ್ಯ ವಿಧಾನಸಭೆಯಲ್ಲಿ ಸೋಮವಾರ ಜಗನ್‌ಮೋಹನ್‌ ರೆಡ್ಡಿ ಘೋಷಿಸಿದ್ದಾರೆ. "ಆಂಧ್ರ ಪ್ರದೇಶದಲ್ಲಿ ರಾಜಧಾನಿಯ ವಿಕೇಂದ್ರೀಕರಣದ ಅಗತ್ಯವಿದೆ ಎಂದು ನಾವು ನಂಬಿದ್ದೇವೆ. ಈ ಹಿಂದೆ ಮಂಡಿಸಿದ್ದ ಮಸೂದೆಯನ್ನು ಸರ್ಕಾರ ಹಿಂಪಡೆಯಲಿದೆ. ನಾವು ಯಾವುದೇ ದೋಷಗಳಿಲ್ಲದೆ ಹೊಸ ಮಸೂದೆಯನ್ನು ಪರಿಚಯಿಸಲಿದ್ದೇವೆ," ಎಂದು ಜಗನ್‌ಮೋಹನ್‌ ರೆಡ್ಡಿ ತಿಳಿಸಿದ್ದಾರೆ. ರಾಜ್ಯದಲ್ಲಿ ಮೂರು ರಾಜಧಾನಿಗಳನ್ನು ಸ್ಥಾಪಿಸುವ ಗುರಿಯೊಂದಿಗೆ ಕಳೆದ ವರ್ಷ ಪ್ರಸ್ತಾಪಿಸಲಾದ ವಿವಾದಾತ್ಮಕ ಡಿಸೆಂಟ್ರಲೈಸೇಷನ್‌ ಆಂಡ್‌ ಇನ್‌ಕ್ಲೂಸಿವ್‌ ಡೆವಲಪ್‌ಮೆಂಟ್‌ ಆಫ್‌ ಆಲ್‌ ರೀಜನ್ಸ್‌ ಆಕ್ಟ್‌ (ವಿಕೇಂದ್ರೀಕರಣ ಮತ್ತು ಎಲ್ಲಾ ಪ್ರದೇಶಗಳ ಅಂತರ್ಗತ ಅಭಿವೃದ್ಧಿ ಕಾಯ್ದೆ) ಅನ್ನು ಹಿಂಪಡೆಯುವ ನಿರ್ಧಾರವನ್ನು ತುರ್ತು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಕಾಯಿದೆಯ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ರೈತರು ಹಾಗೂ ಭೂಮಾಲಿಕರು, ರಾಜಧಾನಿಯ ಅಭಿವೃದ್ಧಿಗಾಗಿ ತಮ್ಮ ಭೂಮಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯ ಸರಕಾರದ ನಿರ್ಧಾರ ವಿರೋಧಿಸಿ ಅಮರಾವತಿಯಿಂದ ತಿರುಪತಿಗೆ ಬೃಹತ್‌ ಪಾದಯಾತ್ರೆಯೂ ಆರಂಭವಾಗಿತ್ತು. ನವೆಂಬರ್‌ 1 ರಿಂದ ಆರಂಭವಾಗಿದ್ದ 45 ದಿನಗಳ ಪಾದಯಾತ್ರೆ ಭಾನುವಾರದ ವೇಳೆಗೆ ನೆಲ್ಲೂರ್‌ ತಲುಪಿತ್ತು. ಇದಕ್ಕೂ ಮೊದಲು ಜೂನ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದ ಜಗನ್‌ ಮೋಹನ್‌ ರೆಡ್ಡಿ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಬೇಡಿಕೆ ಸಲ್ಲಿಸಿದ್ದರು. ಈ ವೇಳೆ ಮೂರು ರಾಜಧಾನಿ ಸ್ಥಾಪನೆಗೆ ಸಂಬಂಧಿಸಿದ ಕಾಯಿದೆ ಸೇರಿ ಮೂರು ಕಾಯಿದೆಗಳಿಗೆ ಅನುಮೋದನೆ ನೀಡುವಂತೆಯೂ ಒತ್ತಾಯಿಸಿದ್ದರು.