ರಸ್ತೆ ಬದಿ ನೇತಾಡುವ ಕೇಬಲ್‌ ವೈರ್‌ಗಳ ತೆರವಿಗೆ ಬಿಬಿಎಂಪಿಗೆ ಮತ್ತೆ ಆದೇಶಿಸಿದ ಹೈಕೋರ್ಟ್‌

ಕೇಬಲ್‌ ತಂತಿಗಳನ್ನು ಅಳವಡಿಸುವ ವಿಚಾರದಲ್ಲಿ ಕೇಬಲ್‌ ಟಿ.ವಿ ಮತ್ತು ಇಂಟರ್ನೆಟ್‌ ಸೇವೆ ಒದಗಿಸುವವರ ಪಾತ್ರ ಹೆಚ್ಚಿರುತ್ತದೆ. ಹಾಗಾಗಿ, ಅರ್ಜಿಯಲ್ಲಿ ಆ ಸಂಸ್ಥೆಗಳನ್ನು ಪ್ರತಿವಾದಿಯಾಗಿಸಬೇಕು ಮತ್ತು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು ಎಂದು ಕೋರಿದರು. ನಗರದಲ್ಲಿ ರಸ್ತೆ ಬದಿಯಲ್ಲಿ ನೇತಾಡುವ ಕೇಬಲ್‌ಗಳನ್ನು ತೆರವುಗೊಳಿಸುವ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಂದಿನ ವಿಚಾರಣೆ ವೇಳೆ ಸಮಗ್ರ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶಿಸಿತು.

ರಸ್ತೆ ಬದಿ ನೇತಾಡುವ ಕೇಬಲ್‌ ವೈರ್‌ಗಳ ತೆರವಿಗೆ ಬಿಬಿಎಂಪಿಗೆ ಮತ್ತೆ ಆದೇಶಿಸಿದ ಹೈಕೋರ್ಟ್‌
Linkup
ಬೆಂಗಳೂರು: ಸಾರ್ವಜನಿಕ ರಸ್ತೆಗಳ ಎರಡೂ ಬದಿಯಲ್ಲಿ ಅಕ್ರಮವಾಗಿ ನೇತಾಡುತ್ತಿರುವ ಕೇಬಲ್‌ ವೈರ್‌ಗಳನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್‌ ಮತ್ತೊಮ್ಮೆ ಬಿಬಿಎಂಪಿಗೆ ಆದೇಶ ನೀಡಿದೆ. ಅಲ್ಲದೆ, ಜನಸಾಮಾನ್ಯರಿಗೆ ಅಪಾಯ ತಂದೊಡ್ಡುವ ಕೇಬಲ್‌ ವೈರ್‌ಗಳು ರಸ್ತೆಯಲ್ಲಿರಬಾರದು. ಅವು ಸಾಧ್ಯವಾದಷ್ಟೂ ನೆಲದಾಳದಲ್ಲಿರಬೇಕು ಎಂದು ನ್ಯಾಯಪೀಠ ಪಾಲಿಕೆಗೆ ಆದೇಶಿಸಿದೆ. ನ್ಯಾಯವಾದಿ ಎನ್‌.ಪಿ.ಅಮೃತೇಶ್‌ ಸಲ್ಲಿಸಿರುವ ಪಿಐಎಲ್‌ ಕುರಿತು ಹಿರಿಯ ನ್ಯಾ. ಸತೀಶ್‌ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು. ಬೆಂಗಳೂರು ಸ್ಮಾರ್ಟ್‌ ಸಿಟಿಯಾಗಿದೆ. ಇಲ್ಲಿ ವೈರ್‌ಗಳು ಎಲ್ಲೆಂದರಲ್ಲಿ ನೇತಾಡುತ್ತಿರುವುದು ಸರಿಯಲ್ಲ. ಅವು ನೆಲದಾಳದೊಳಗೆ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ ಎಂದು ಹೈಕೋರ್ಟ್‌ ಬಿಬಿಎಂಪಿಗೆ ತಾಕೀತು ಮಾಡಿತು. ಅಲ್ಲದೆ, ನಗರದಲ್ಲಿ ರಸ್ತೆ ಬದಿಯಲ್ಲಿ ನೇತಾಡುವ ಕೇಬಲ್‌ಗಳನ್ನು ತೆರವುಗೊಳಿಸುವ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಂದಿನ ವಿಚಾರಣೆ ವೇಳೆ ಸಮಗ್ರ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿತು. ಅರ್ಜಿದಾರರು ವಾದಿಸಿ, ಕೇಬಲ್‌ ತಂತಿಗಳನ್ನು ಅಳವಡಿಸುವ ವಿಚಾರದಲ್ಲಿ ಕೇಬಲ್‌ ಟಿ.ವಿ ಮತ್ತು ಇಂಟರ್ನೆಟ್‌ ಸೇವೆ ಒದಗಿಸುವವರ ಪಾತ್ರ ಹೆಚ್ಚಿರುತ್ತದೆ. ಹಾಗಾಗಿ, ಅರ್ಜಿಯಲ್ಲಿ ಆ ಸಂಸ್ಥೆಗಳನ್ನು ಪ್ರತಿವಾದಿಯಾಗಿಸಬೇಕು ಮತ್ತು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು ಎಂದು ಕೋರಿದರು. ಅಲ್ಲದೆ, ಅರ್ಜಿದಾರರ ಕೋರಿಕೆಯಂತೆ ಏರ್‌ಟೆಲ್‌, ಬಿಎಸ್‌ಎನ್‌ಎಲ್‌, ಜಿಯೋ, ಕರ್ನಾಟಕ ಕೇಬಲ್‌ ಟಿವಿ ಅಸೋಸಿಯೇಷನ್‌ ಸೇರಿ ಎಲ್ಲ ಕೇಬಲ್‌ ಟಿವಿ ಮತ್ತು ಇಂಟರ್ನೆಟ್‌ ಸೇವೆ ಕಲ್ಪಿಸುತ್ತಿರುವ ಸಂಸ್ಥೆಗಳಿಗೆ ನ್ಯಾಯಾಲಯ ಈಗಾಗಲೇ ನೋಟಿಸ್‌ ಜಾರಿಗೊಳಿಸಿ ಅವರಿಗೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ. ಹೈಕೋರ್ಟ್‌ ಹಿಂದೆ ಏನು ಹೇಳಿತ್ತು?ನಗರದ ಪಾದಚಾರಿ ಮಾರ್ಗಗಳ ಮೇಲೆ ಜೋತು ಬಿದ್ದಿರುವ ಕೇಬಲ್‌ ತಂತಿಗಳನ್ನು ತೆರವುಗೊಳಿಸಲು ಸಾರ್ವಜನಿಕ ನೋಟಿಸ್‌ ಹೊರಡಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್‌ ಆ.3ರಂದು ಬಿಬಿಎಂಪಿಗೆ ಆದೇಶಿಸಿತ್ತು. ಕಳೆದ ಆದೇಶದ ನಂತರ ಎಷ್ಟು ಕೇಬಲ್‌ ತೆರವುಗೊಳಿಸಲಾಗಿದೆ ಎಂಬುದರ ಕುರಿತು ವಿವರ ನೀಡಿ. ಮೂಲೆ- ಮೂಲೆ, ಬೀದಿ ಬೀದಿಯಲ್ಲಿ ಕೇಬಲ್‌ಗಳು ನೇತಾಡುತ್ತಲೇ ಇವೆ. ನ್ಯಾಯಾಲಯ ಆದೇಶ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ? ಎಂದು ನ್ಯಾಯಪೀಠ ಪ್ರಶ್ನಿಸಿತು. ಅಲ್ಲದೆ, ಬಿಬಿಎಂಪಿಯು ನಗರದ ರಸ್ತೆ ಬದಿ ಮರಗಳ ಮೇಲೆ ಜೋತು ಬಿದ್ದಿರುವ ಕೇಬಲ್‌ಗಳ ತೆರವು ಕಾರ್ಯಾಚರಣೆ ಮುಂದುವರಿಸಬೇಕು. ಈ ಕುರಿತು ಕೇಬಲ್‌ ಹಾಗೂ ಇಂಟರ್ನೆಟ್‌ ಸೇವೆ ಒದಗಿಸುವ ಎಲ್ಲಾಸಂಸ್ಥೆಗಳಿಗೆ ಪತ್ರಿಕೆಗಳ ಮೂಲಕ ನೋಟಿಸ್‌ ಜಾರಿಗೊಳಿಸಿ, ತೆರವು ಕಾರ್ಯಾಚರಣೆ ವಿಚಾರವನ್ನು ಅವುಗಳ ಗಮನಕ್ಕೆ ತರಬೇಕು. ಒಂದು ತಿಂಗಳ ಕಾಲಾವಕಾಶ ನೀಡಿದ ನಂತರ ಒಂದು ನಿರ್ದಿಷ್ಟ ದಿನಾಂಕ ನಿಗದಿಪಡಿಸಿ, ಕೇಬಲ್‌ಗಳ ತೆರವಿಗೆ ಸಮಗ್ರವಾದ ಕಾರ್ಯಾಚರಣೆ ನಡೆಸಬೇಕು ಎಂದು ಸೂಚಿಸಿತ್ತು.