![](https://vijaykarnataka.com/photo/85886732/photo-85886732.jpg)
ಮುಂಬಯಿ: ಐಷಾರಾಮಿ ಹೋಟೆಲೊಂದರಲ್ಲಿ 8 ತಿಂಗಳ ಕಾಲ ತಂಗಿದ್ದ ಗ್ರಾಹಕನೊಬ್ಬ, 25 ಲಕ್ಷ ರೂ. ಬಿಲ್ ಕೊಡದೆ ಬಾತ್ರೂಮ್ ಕಿಟಕಿಯಿಂದ ಪರಾರಿಯಾದ ಘಟನೆ ಮುಂಬಯಿನಲ್ಲಿ ನಡೆದಿದೆ. ಮುಂಬಯಿಯ ಅಂಧೇರಿ ಪ್ರದೇಶದ ನಿವಾಸಿ ಎಂಬಾತ ಎಂಟು ತಿಂಗಳಿಂದ ನಗರದ ಖರ್ಗರ್ ಪ್ರದೇಶದಲ್ಲಿರುವ 'ಹೋಟೆಲ್ ತ್ರೀ ಸ್ಟಾರ್'ನಲ್ಲಿ ಎರಡು ಕೋಣೆಗಳನ್ನು ಬಾಡಿಗೆ ಪಡೆದಿದ್ದ.
ತನ್ನ 12 ವರ್ಷದ ಮಗನೊಂದಿಗೆ 2020ರ ನವೆಂಬರ್ 23ರಂದು ಹೋಟೆಲ್ಗೆ ಬಂದ ಕಾಮತ್, ತಾನು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ. ಒಂದು ತಿಂಗಳ ಬಳಿಕ ಡೆಪಾಸಿಟ್ ಪಾವತಿಸುವುದಾಗಿ ಹೇಳಿದ್ದ. ತನ್ನ ಪಾಸ್ಪೋರ್ಟ್ ಅನ್ನು ಖಾತರಿಯಾಗಿ ನೀಡಿದ್ದ.
ಒಂದು ಕೋಣೆಯನ್ನು ತನ್ನ ವಾಸಕ್ಕೆ ಮತ್ತೊಂದು ಕೋಣೆಯನ್ನು ಮೀಟಿಂಗ್ ಮುಂತಾದ ಕಚೇರಿ ಕೆಲಸಗಳಿಗೆ ಬಳಸುತ್ತಿದ್ದ. ಕೆಲವು ದಿನಗಳಿಂದ ಕಾಮತ್ ರೂಂನಿಂದ ಹೊರಗೆ ಬರದೆ ಇರುವುದನ್ನು ಗಮನಿಸಿದ್ದ ಅಲ್ಲಿನ ಸಿಬ್ಬಂದಿ ಜುಲೈ 17ರಂದು ಕಾಮತ್ ಮತ್ತು ಆತನ ಮಗ ತಂಗಿದ್ದ ರೂಂ ಬಾಗಿಲು ತೆಗೆದು ಒಳಗೆ ಹೋಗಿದ್ದಾರೆ.
ಈ ವೇಳೆ ಇಬ್ಬರು ಅಲ್ಲಿ ಇರಲಿಲ್ಲ. ಇನ್ನಷ್ಟು ಪರಿಶೀಲನೆ ನಡೆಸಿದಾಗ. ಇಬ್ಬರು ಬಾತ್ರೂಮ್ ಕಿಟಕಿಯಿಂದ ಪರಾರಿ ಯಾಗಿರುವುದು ಖಚಿತವಾಗಿದೆ. ಲ್ಯಾಪ್ಟಾಪ್, ಮೊಬೈಲ್ ಫೋನ್ ಅನ್ನು ಕೋಣೆಯಲ್ಲೇ ಬಿಟ್ಟು ಕಾಮತ್ ಎಸ್ಕೇಪ್ ಆಗಿರುವುದು ಸ್ಪಷ್ಟವಾಗಿದೆ. ಈ ಸಂಬಂಧ ಹೋಟೆಲ್ನ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ವಂಚನೆ ಆರೋಪದಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.