ಆಯುಷ್ಮಾನ್‌ ಭಾರತ್ ಬಳಕೆಯಲ್ಲಿ ಕರ್ನಾಟಕ ನಂ.1: ರಾಜ್ಯದ 1.62 ಲಕ್ಷ ಮಂದಿಗೆ ಕೋವಿಡ್‌ ಚಿಕಿತ್ಸೆ

ಈ ಯೋಜನೆಯಡಿ ಫಲಾನುಭವಿ ಕುಟುಂಬದ ಸದಸ್ಯರೊಬ್ಬರು ವಾರ್ಷಿಕ 5 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಬಹುದು. ಕೋವಿಡ್‌ ಸೋಂಕಿನ ಸಂದರ್ಭದಲ್ಲಿ ಈ ಯೋಜನೆ ಸಾಕಷ್ಟು ಜನರ ಜೀವ ಉಳಿಸಿದೆ.

ಆಯುಷ್ಮಾನ್‌ ಭಾರತ್ ಬಳಕೆಯಲ್ಲಿ ಕರ್ನಾಟಕ ನಂ.1: ರಾಜ್ಯದ 1.62 ಲಕ್ಷ ಮಂದಿಗೆ ಕೋವಿಡ್‌ ಚಿಕಿತ್ಸೆ
Linkup
: ಕೋವಿಡ್‌ ಸಂಕಷ್ಟದಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ಸದುಪಯೋಗಪಡಿಸಿಕೊಂಡ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಮೊದಲ ಸ್ಥಾನ ಸಿಕ್ಕಿದೆ. ಆ ನಂತರದ ಸ್ಥಾನಗಳಲ್ಲಿ ನೆರೆ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಿವೆ. ರಾಜ್ಯದಲ್ಲಿ 1,62,050 ಜನರು ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಕೋವಿಡ್‌ಗೆ ಚಿಕಿತ್ಸೆ ಪಡೆದಿದ್ದಾರೆ. ಮಹಾರಾಷ್ಟ್ರ 1,61,234 ಹಾಗೂ ಆಂಧ್ರಪ್ರದೇಶದಲ್ಲಿ 1,54,760 ಜನರು ಈ ಯೋಜನೆಯಡಿ ಚಿಕಿತ್ಸೆ ಪಡೆದಿದ್ದಾರೆ. ದೇಶದಲ್ಲಿಯೇ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶದಲ್ಲಿ 1,538 ಜನರು ಪರೀಕ್ಷೆಗೆ ಒಳಪಟ್ಟಿದ್ದು, ಕೇವಲ 875 ಜನರು ಚಿಕಿತ್ಸೆ ಪಡೆದಿದ್ದಾರೆ. ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಬಿಹಾರದಲ್ಲಿ 105 ಜನರು ಪರೀಕ್ಷೆಗೆ ಒಳಪಟ್ಟಿದ್ದು, ಕೇವಲ 19 ಜನರು ಮಾತ್ರ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಪಂಜಾಬ್‌, ಗುಜರಾತ್‌ ಮತ್ತು ದಾಮನ್‌ನ ಒಬ್ಬ ರೋಗಿಯೂ ಸಹ ಈ ಯೋಜನೆಯ ಪ್ರಯೋಜನ ಪಡೆದಿಲ್ಲ. 2018ರಲ್ಲಿ ಆರಂಭವಾದ ಆಯುಷ್ಮಾನ್‌ ಭಾರತ್‌ ಸುಮಾರು 50 ಕೋಟಿಗೂ ಅಧಿಕ ಭಾರತೀಯರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಪಡೆಯುವಲ್ಲಿ ಸಹಕಾರಿಯಾಗಿದೆ. ಈ ಯೋಜನೆಯಡಿ ಫಲಾನುಭವಿ ಕುಟುಂಬದ ಸದಸ್ಯರೊಬ್ಬರು ವಾರ್ಷಿಕ 5 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಬಹುದು. ಕೋವಿಡ್‌ ಸೋಂಕಿನ ಸಂದರ್ಭದಲ್ಲಿ ಸಾಕಷ್ಟು ಜನರ ಜೀವ ಉಳಿಸುವಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಿರುವುದು ಗಮನಾರ್ಹ ಅಂಶ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮಾಹಿತಿ ಪ್ರಕಾರ, ಆಯುಷ್ಮಾನ್‌ ಭಾರತ್‌ ಪ್ರಧಾನ್‌ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಅಡಿಯಲ್ಲಿ 2021ರ ಜೂನ್‌ ಮೊದಲ ವಾರಾಂತ್ಯಕ್ಕೆ 23.78 ಲಕ್ಷ ಜನರು ಇದರ ಪ್ರಯೋಜನ ಪಡೆದಿದ್ದಾರೆ. ಇದರಲ್ಲಿ17.73 ಲಕ್ಷ ಕೇವಲ ಪರೀಕ್ಷೆ ಮಾಡಿಸಿಕೊಂಡರೆ, 6.05 ಲಕ್ಷ ಜನರು ಕೋವಿಡ್‌ಗೆ ಚಿಕಿತ್ಸೆ ಪಡೆದಿದ್ದಾರೆ. ಈ ಯೋಜನೆಯಡಿ ಪರೀಕ್ಷಿಸಿದ ಜನಸಂಖ್ಯೆ, ಚಿಕಿತ್ಸೆ ಪಡೆದವರ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. 17,73,464 ಜನರು ಪರೀಕ್ಷೆ ಮಾಡಿಸಿಕೊಂಡರೆ, 6,05,308 ಜನರು ಯೋಜನೆಯ ಮೂಲಕ ಚಿಕಿತ್ಸೆ ಪಡೆದಿದ್ದಾರೆ. ಆಯುಷ್ಮಾನ್‌ ಭಾರತ್‌ ಯೋಜನೆಯ ಆರೋಗ್ಯ ಯೋಜನೆಗೆ ಹಣಕಾಸು ಸಚಿವಾಲಯದಿಂದ 9,481 ಕೋಟಿ ರೂ. ನೆರವು ದೊರೆತಿದ್ದು, ಈ ಪೈಕಿ 8,542.3 ಕೋಟಿ ರೂ. ಬಳಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.