ಬೆಂಗಳೂರಲ್ಲಿ ಕೊರೊನಾ ಸೋಂಕಿತರ ಇಳಿಕೆ: 10 ಸಾವಿರಕ್ಕೂ ಹೆಚ್ಚು ಬೆಡ್‌ಗಳು ಖಾಲಿ

ಸರಕಾರದ ಆದೇಶದಂತೆ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಹಾಸಿಗೆಗಳನ್ನು ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ. ಸದ್ಯ ಬಹುತೇಕ ಹಾಸಿಗೆಗಳು ಖಾಲಿ ಇದ್ದು, ಅನ್ಯ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗಾಗಿ ಬಳಸಿಕೊಳ್ಳಲು ಅವಕಾಶವಿಲ್ಲದಂತಾಗಿದೆ.

ಬೆಂಗಳೂರಲ್ಲಿ ಕೊರೊನಾ ಸೋಂಕಿತರ ಇಳಿಕೆ: 10 ಸಾವಿರಕ್ಕೂ ಹೆಚ್ಚು ಬೆಡ್‌ಗಳು ಖಾಲಿ
Linkup
ನಾಗಪ್ಪ ನಾಗನಾಯಕನಹಳ್ಳಿ : ನಗರದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್‌ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ದಾಖಲಾಗುವ ರೋಗಿಗಳ ಸಂಖ್ಯೆ ಕಡಿಮೆಯಾಗಿರುವ ಕಾರಣ , ಆರೈಕೆ ಕೇಂದ್ರಗಳಲ್ಲಿ 10 ಸಾವಿರಕ್ಕೂ ಹೆಚ್ಚು ಹಾಸಿಗೆಗಳು ಖಾಲಿ ಇವೆ. ಆರೈಕೆ ಕೇಂದ್ರಗಳಲ್ಲಿ ಸಜ್ಜುಗೊಳಿಸಿದ್ದ 3,209 ಹಾಸಿಗೆಗಳಲ್ಲಿ ಮುಕ್ಕಾಲು ಪಾಲು ಖಾಲಿ ಇವೆ. ನಿರ್ವಹಣಾ ವೆಚ್ಚವು ಹೆಚ್ಚಾಗುತ್ತಿರುವುದರಿಂದ ಸೋಂಕಿತರಿಲ್ಲದ ಕೇಂದ್ರಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಬಿಬಿಎಂಪಿ ಚಿಂತಿಸಿದೆ. ಕೊರೊನಾ ಸೋಂಕಿನ ಎರಡನೇ ಅಲೆ ಬಿರುಸುಗೊಂಡು ನಿತ್ಯ ಹೊಸ ಪ್ರಕರಣಗಳ ಸಂಖ್ಯೆ 20 ಸಾವಿರ ಗಡಿ ದಾಟಿದ್ದರಿಂದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಉಂಟಾಗಿತ್ತು. ಪರಿಣಾಮ, ತುರ್ತು ಚಿಕಿತ್ಸೆಯ ಅಗತ್ಯವಿರುವವರು ಸಮಸ್ಯೆ ಎದುರಿಸಿದರು. ಹಾಸಿಗೆ ಸಿಗದೆ ಹಲವರು ಒದ್ದಾಡಿ ಪ್ರಾಣಬಿಟ್ಟರು. ಈ ಹಿನ್ನೆಲೆಯಲ್ಲಿ ಕೋವಿಡ್‌ ಆರೈಕೆ ಕೇಂದ್ರಗಳನ್ನು ಹೆಚ್ಚಿಸಲಾಯಿತು. ಆದರೆ, ಇಲ್ಲಿ ದಾಖಲಾಗುವ ರೋಗಿಗಳ ಸಂಖ್ಯೆ ಕಡಿಮೆಯಾಗಿದ್ದು, ಬಹುತೇಕ ಆರೈಕೆ ಕೇಂದ್ರಗಳು ಖಾಲಿ ಬಿದ್ದಿವೆ. ಕೋವಿಡ್‌ನ ಎರಡನೇ ಅಲೆ ಕಾಣಿಸಿಕೊಳ್ಳುತ್ತಿದ್ದಂತೆಯೇ ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರೆದು ಆಕ್ಸಿಜನ್‌ ಬೆಡ್‌ಗಳ ವ್ಯವಸ್ಥೆ ಮಾಡಿದ್ದರೆ, ಉಸಿರಾಟದ ಸಮಸ್ಯೆಯಿಂದ ಕೊನೆಯುಸಿರೆಳೆದ ನೂರಾರು ಮಂದಿಯ ಪ್ರಾಣ ಉಳಿಯುತ್ತಿತ್ತು. ಆದರೆ, ಸರಕಾರ ಮತ್ತು ಪಾಲಿಕೆಯು ಸೋಂಕಿತ ಪ್ರಕರಣಗಳು ಇಳಿಕೆಯಾಗುವ ಹೊತ್ತಿನಲ್ಲಿ ಆರೈಕೆ ಕೇಂದ್ರಗಳನ್ನು ಹೆಚ್ಚಿಸಿತು. ಹೀಗಾಗಿ, ಅಲ್ಲಿ ಚಿಕಿತ್ಸೆಗೆ ದಾಖಲಾಗಲು ರೋಗಿಗಳೇ ಇಲ್ಲ. ಸದ್ಯ ನಗರದಲ್ಲಿ ಪ್ರತಿದಿನ ಹೊಸದಾಗಿ ಪತ್ತೆಯಾಗುತ್ತಿರುವ ಸೋಂಕಿತ ಪ್ರಕರಣಗಳ ಸಂಖ್ಯೆ 4 ಸಾವಿರ ಗಡಿ ದಾಟುತ್ತಿಲ್ಲ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ 1.43 ಲಕ್ಷಕ್ಕೆ ತಗ್ಗಿದೆ. ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯೇ ಜಾಸ್ತಿಯಾಗುತ್ತಿದೆ. ಆರೈಕೆ ಕೇಂದ್ರಗಳಲ್ಲಿ 2,403 ಬೆಡ್‌ ಖಾಲಿ: ಹೊಸದಾಗಿ ಪತ್ತೆಯಾಗುತ್ತಿರುವ ಸೋಂಕಿತರ ಪೈಕಿ ಶೇ 80ರಷ್ಟು ಮಂದಿ ಮನೆ ಆರೈಕೆಗೆ ಒಳಗಾಗುತ್ತಿದ್ದಾರೆ. ಪರಿಣಾಮ, ಕೋವಿಡ್‌ ಆರೈಕೆ ಕೇಂದ್ರಗಳಲ್ಲಿನ ಸಾಮಾನ್ಯ ಮತ್ತು ಆಕ್ಸಿಜನ್‌ ಬೆಡ್‌ಗಳು ಭರ್ತಿಯಾಗಲೇ ಇಲ್ಲ. ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲೂ 60 ಆರೈಕೆ ಕೇಂದ್ರಗಳಲ್ಲಿ 3,209 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. 1,839 ಸಾಮಾನ್ಯ ಮತ್ತು 1,370 ಆಕ್ಸಿಜನ್‌ ಬೆಡ್‌ಗಳಿವೆ. ಆದರೆ, ಭರ್ತಿಯಾಗಿರುವುದು ಕೇವಲ 806 ಮಾತ್ರ. ಈ ಕೇಂದ್ರಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು 443 ವೈದ್ಯರು, 324 ಶುಶ್ರೂಷಕರನ್ನು ನೇಮಿಸಲಾಗಿದೆ. ಇದಲ್ಲದೆ, 208 ಮಾರ್ಷಲ್‌ಗಳು, 330 ಮಂದಿ ಗ್ರೂಪ್‌ 'ಡಿ' ನೌಕರರನ್ನು ನೇಮಿಸಲಾಗಿದೆ. 102 ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. ಚಿಕಿತ್ಸೆಗೆ ದಾಖಲಾಗುವ ಸೋಂಕಿತರ ಸಂಖ್ಯೆ ಕಡಿಮೆ ಆಗಿರುವುದರಿಂದ ವೈದ್ಯರು, ನರ್ಸ್‌ಗಳು ಹಾಗೂ ಇತರೆ ಸಿಬ್ಬಂದಿಗೆ ಕೆಲಸವೇ ಇಲ್ಲದಂತಾಗಿದೆ. ಸರಕಾರಿ, ಖಾಸಗಿಯಲ್ಲಿ 8,433 ಬೆಡ್‌ ಲಭ್ಯ: ಕೋವಿಡ್‌ ಸೋಂಕಿತರ ಚಿಕಿತ್ಸೆಗಾಗಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 13,388 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಈ ಪೈಕಿ 4,874 ಹಾಸಿಗೆಗಳಷ್ಟೇ ಭರ್ತಿಯಾಗಿವೆ. 'ಸರಕಾರದ ಆದೇಶದಂತೆ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಹಾಸಿಗೆಗಳನ್ನು ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ. ಸದ್ಯ ಬಹುತೇಕ ಹಾಸಿಗೆಗಳು ಖಾಲಿ ಇದ್ದು, ಅನ್ಯ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗಾಗಿ ಬಳಸಿಕೊಳ್ಳಲು ಅವಕಾಶವಿಲ್ಲದಂತಾಗಿದೆ. ಬಿಬಿಎಂಪಿಯಿಂದ ಶಿಫಾರಸು ಮಾಡಿದ ಸೋಂಕಿತರ ಚಿಕಿತ್ಸಾ ವೆಚ್ಚವನ್ನಷ್ಟೇ ಸರಕಾರ ಭರಿಸುತ್ತಿದೆ. ಖಾಲಿ ಉಳಿದ ಬೆಡ್‌ಗಳಿಗೆ ಯಾವುದೇ ಹಣ ಪಾವತಿ ಮಾಡುತ್ತಿಲ್ಲ. ಖಾಲಿ ಉಳಿದಿರುವ ಹಾಸಿಗೆಗಳಿಗೆ ಶೇ 25ರಷ್ಟು ಶುಲ್ಕ ನೀಡುವುದಾಗಿ ಹೇಳಿತ್ತು. ಆದರೆ, ಈವರೆಗೆ ಕೊಟ್ಟಿಲ್ಲ' ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಮ್ಸ್‌ ಅಸೋಸಿಯೇಷನ್ಸ್‌ನ (ಫನಾ) ಅಧ್ಯಕ್ಷ ಡಾ. ಎಚ್‌.ಎಂ.ಪ್ರಸನ್ನ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು. ಸ್ಟೆಪ್‌ಡೌನ್‌ ಕೇಂದ್ರಗಳೂ ಸ್ಥಗಿತ: ಖಾಸಗಿ ಆಸ್ಪತ್ರೆಗಳು ಹೋಟೆಲ್‌ಗಳ ಸಹಭಾಗಿತ್ವದಲ್ಲಿ 1,304 ಹಾಸಿಗೆ ಸಾಮರ್ಥ್ಯದ ಸ್ಟೆಪ್‌ಡೌನ್‌ ಆರೈಕೆ ಕೇಂದ್ರಗಳನ್ನು ಸಜ್ಜುಗೊಳಿಸಿದ್ದವು. ಇಲ್ಲಿಯೂ 1,100ಕ್ಕಿಂತ ಹೆಚ್ಚು ಹಾಸಿಗೆಗಳು ಖಾಲಿ ಉಳಿದಿವೆ. ನಗರದಲ್ಲಿ ಮಣಿಪಾಲ್‌ ಆಸ್ಪತ್ರೆ, ಸುಗುಣ ಆಸ್ಪತ್ರೆ, ನಾರಾಯಣ ಹೃದಯಾಲಯ, ಅಪೋಲೊ, ಕೊಲಂಬಿಯಾ ಏಷ್ಯಾ ಸೇರಿದಂತೆ 18 ಆಸ್ಪತ್ರೆಗಳು ಸಮೀಪದ 34 ಹೋಟೆಲ್‌ಗಳಲ್ಲಿ ಆರೈಕೆ ಕೇಂದ್ರಗಳನ್ನು ತೆರೆದು ಅಗತ್ಯ ವೈದ್ಯರು, ಶುಶ್ರೂಷಕರನ್ನು ನೇಮಿಸಲಾಗಿತ್ತು. ಹೋಮ್‌ ಐಸೋಲೇಷನ್‌ಗೆ ಅಗತ್ಯ ವ್ಯವಸ್ಥೆಯಿಲ್ಲದವರು, ಅನ್ಯ ರಾಜ್ಯಗಳಿಂದ ಬಂದು ಸೋಂಕಿತರಾದವರು, ಚಿಕಿತ್ಸೆ ಪಡೆದು ಕೊಂಚ ಚೇತರಿಸಿಕೊಂಡ ರೋಗಿಗಳ ಆರೈಕೆಗೆ ಈ ಕೇಂದ್ರಗಳು ಸಹಕಾರಿಯಾಗಿದ್ದವು. ಆರಂಭದಲ್ಲಿ ಹಾಸಿಗೆಗಳು ಭರ್ತಿಯಾಗಿದ್ದವು. ಈಗ ಅಲ್ಲಿ ಚಿಕಿತ್ಸೆ ಪಡೆಯುವವರೇ ಇಲ್ಲ. ಹೀಗಾಗಿ, ಬಹುತೇಕ ಸ್ಟೆಪ್‌ಡೌನ್‌ ಆರೈಕೆ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ. 'ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಹಾಸಿಗೆಗಳು ಲಭ್ಯವಾಗುತ್ತಿವೆ. ಹೀಗಾಗಿ, ಹೋಟೆಲ್‌ಗಳಲ್ಲಿ ಆರಂಭಿಸಿರುವ ಸ್ಟೆಪ್‌ಡೌನ್‌ ಆರೈಕೆ ಕೇಂದ್ರಗಳಿಗೆ ರೋಗಿಗಳು ದಾಖಲಾಗುತ್ತಿಲ್ಲ. ಹೀಗಾಗಿ, ಈ ಕೇಂದ್ರಗಳ ನಿರ್ವಹಣೆ ಹೊರೆಯಾಗಿದ್ದು, ಸ್ಥಗಿತಗೊಳಿಸಲಾಗುತ್ತಿದೆ. ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಲ ಸೋಂಕಿತರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದೆ' ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಮ್ಸ್‌ ಅಸೋಸಿಯೇಷನ್ಸ್‌ (ಫನಾ) ಅಧ್ಯಕ್ಷ ಡಾ. ಎಚ್‌.ಎಂ.ಪ್ರಸನ್ನ ಮಾಹಿತಿ ನೀಡಿದ್ದಾರೆ.