ಸಿಟಿ ಸ್ಕ್ಯಾ‌ನ್‌ಗೆ ನಿಗದಿಗಿಂತ ಹೆಚ್ಚು ದರ: ಬೆಂಗಳೂರಿನಲ್ಲಿ ಆಸ್ಪತ್ರೆಗಳ ಮೇಲೆ ದಾಳಿ

ರಾಜ್ಯ ಸರಕಾರವು ಸಿ.ಟಿ. ಸ್ಕ್ಯಾ‌ನ್‌ ಪರೀಕ್ಷೆಗೆ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೆ 1500 ರೂ., ಇತರೆ ವರ್ಗದವರಿಗೆ 2500 ರೂ. ನಿಗದಿಪಡಿಸಿದೆ. ಆದ್ರೆ, ಈ ನಿಯಮವು ಬಹುತೇಕ ಕಡೆ ಪಾಲನೆ ಆಗುತ್ತಿರಲಿಲ್ಲ.

ಸಿಟಿ ಸ್ಕ್ಯಾ‌ನ್‌ಗೆ ನಿಗದಿಗಿಂತ ಹೆಚ್ಚು ದರ: ಬೆಂಗಳೂರಿನಲ್ಲಿ ಆಸ್ಪತ್ರೆಗಳ ಮೇಲೆ ದಾಳಿ
Linkup
: ಕೋವಿಡ್‌ ಸೋಂಕು ಪತ್ತೆಯ ಸಿಟಿ ಸ್ಕ್ಯಾ‌ನ್‌ ಪರೀಕ್ಷೆಗೆ ಸರಕಾರ ನಿಗದಿಪಡಿಸಿದ್ದ ದರಕ್ಕಿಂತ ಹೆಚ್ಚು ವಸೂಲು ಮಾಡುತ್ತಿದ್ದ ಖಾಸಗಿ ಆಸ್ಪತ್ರೆಗಳ ಮೇಲೆ ರಾಜ್ಯ ಕ್ಷ-ಕಿರಣ ಸುರಕ್ಷತಾ ನಿರ್ದೇಶನಾಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ತಂಡವು ಶುಕ್ರವಾರ ನಡೆಸಿತು. ರೋಗಿಗಳಿಂದ ಅಧಿಕ ದರ ಸಂಗ್ರಹಿಸುತ್ತಿದ್ದ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿತು. ಅಧಿಕ ದರ ವಸೂಲು ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಯಲಹಂಕ ವಲಯದಲ್ಲಿರುವ ಆಸ್ಪತ್ರೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಯಿತು. ರಾಜ್ಯ ಸರಕಾರವು ಸಿ.ಟಿ. ಸ್ಕ್ಯಾ‌ನ್‌ ಪರೀಕ್ಷೆಗೆ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೆ 1500 ರೂ., ಇತರೆ ವರ್ಗದವರಿಗೆ 2500 ರೂ. ನಿಗದಿಪಡಿಸಿದೆ. ಚೆಸ್ಟ್‌ ಎಕ್ಸರೇ ಗೆ 250 ರೂ. ಮಾತ್ರ ಪಡೆಯಲು ಆದೇಶಿಸಿದೆ. ಆದರೆ, ಕೆಲವೊಂದು ಆಸ್ಪತ್ರೆಗಳು ನಿಗದಿತಗಿಂತ ಹೆಚ್ಚು ದರ ವಸೂಲು ಮಾಡುತ್ತಿದ್ದುದು ದಾಳಿ ವೇಳೆ ಕಂಡುಬಂದಿದೆ. ಯಲಹಂಕದ ಶ್ರೀ ಅಶ್ವಿನಿ ಆಸ್ಪತ್ರೆಯು ಚೆಸ್ಟ್‌ ಎಕ್ಸ್‌ರೇ ಗೆ 400 ರೂ. ಪಡೆಯುತ್ತಿರುವುದು ಬಿಲ್‌ಗಳ ಪರಿಶೀಲನೆಯಿಂದ ಕಂಡು ಬಂದಿತು. ಅಲ್ಲದೆ, ಎಇಆರ್‌ಬಿ ನಿಯಮಗಳನ್ನೂ ಪಾಲಿಸುತ್ತಿರಲಿಲ್ಲ. ಹಾಗೆಯೇ, ಅಪೂರ್ವ ಮದರ್ಸ್ ಆ್ಯಂಡ್‌ ಚೈಲ್ಡ್‌ ಆಸ್ಪತ್ರೆಯು ಸಿ.ಟಿ ಸ್ಕ್ಯಾ‌ನ್‌ಗೆ ಬಿಪಿಎಲ್‌ ಕಾರ್ಡ್‌ದಾರರಿಂದ 4 ರಿಂದ 5 ಸಾವಿರ ರೂ., ಸೈಟ್‌ಕೇರ್‌ ಆಸ್ಪತ್ರೆಯು ಎಲ್ಲರಿಂದಲೂ 2500 ರೂ., ನವಚೇತನ ಚೇತನ ಆಸ್ಪತ್ರೆಯು 2500-3500 ರೂ. ಶುಲ್ಕ ಪಡೆಯುತ್ತಿತ್ತು. ಕೆ.ಕೆ.ಆಸ್ಪತ್ರೆಯು ಚೆಸ್ಟ್‌ ಎಕ್ಸ್‌ರೇ ಗೆ 500 ರೂ. ಪಡೆಯುತ್ತಿತ್ತು. ನಾರ್ಥ್ ಸಿಟಿ ಮೆಡಿಕೇರ್‌ ಕೇಂದ್ರದ ಎಇಆರ್‌ಬಿ ಪರವಾನಗಿ ಅವಧಿ ಮುಗಿದಿದೆ. ಸಿ.ಟಿ ಸ್ಕ್ಯಾ‌ನ್‌ಗೆ ಕ್ಯೂ.ಎ. ಟೆಸ್ಟ್‌ ಸಹ ಮಾಡಿಸಿರಲಿಲ್ಲ. ಈ ಎಲ್ಲ ಆಸ್ಪತ್ರೆಗಳ ವಿರುದ್ಧ ಕೆಪಿಎಂಇ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆಯಡಿ ಕ್ರಮ ಜರುಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು, ನಗರ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಗುಳೂರು ಶ್ರೀನಿವಾಸ್‌ ತಿಳಿಸಿದರು.