ಬೆಂಗಳೂರಿನ ರಸ್ತೆ ಗುಂಡಿಗಳ ವಿರುದ್ಧ ಬೃಹತ್ ಅಭಿಯಾನ: ಎಎಪಿಯಿಂದ ಸಹಿ ಸಂಗ್ರಹ

ಬೆಂಗಳೂರಿನ ರಸ್ತೆ ಅವಸ್ಥೆಗಳ ವಿರುದ್ಧ ಆಮ್ ಆದ್ಮಿ ಪಕ್ಷ ಬೃಹತ್ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ. ರಸ್ತೆ ಕಾಮಗಾರಿಗಳಲ್ಲಿ ಆದ ಭ್ರಷ್ಟಾಚಾರಗಳನ್ನು ಜನರಿಗೆ ತಿಳಿಸುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವುದಾಗಿ ಎಎಪಿ ತಿಳಿಸಿದೆ.

ಬೆಂಗಳೂರಿನ ರಸ್ತೆ ಗುಂಡಿಗಳ ವಿರುದ್ಧ ಬೃಹತ್ ಅಭಿಯಾನ: ಎಎಪಿಯಿಂದ ಸಹಿ ಸಂಗ್ರಹ
Linkup
ಬೆಂಗಳೂರು: ನಗರದ ರಸ್ತೆ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಹಾಗೂ ನಗರದೆಲ್ಲೆಡೆ ಗುಂಡಿಗಳು ಬಿದ್ದಿರುವುದನ್ನು ಖಂಡಿಸಿ ಹತ್ತು ದಿನಗಳ ಬೃಹತ್‌ ಸಹಿ ಸಂಗ್ರಹ ಅಭಿಯಾನಕ್ಕೆ ಆಮ್‌ ಆದ್ಮಿ ಪಕ್ಷ () ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಶನಿವಾರ ಚಾಲನೆ ನೀಡಿದರು. ನಗರದಾದ್ಯಂತ ಸಮಸ್ಯೆ ವಿರುದ್ಧ ತೆರೆದ ವಾಹನದಲ್ಲಿ ಸಾಗಿ ಜನಜಾಗೃತಿಗೆ ಆಮ್‌ ಆದ್ಮಿ ಪಾರ್ಟಿ ಮುಂದಾಗಿದ್ದು, ಮೊದಲ ದಿನದಂದು ವಾಹನವು ಗಾಂಧಿನಗರ, ಮಲ್ಲೇಶ್ವರಂ, ರಾಜಾಜಿನಗರ, ಚಿಕ್ಕಪೇಟೆ ಮಾರ್ಗದಲ್ಲಿ ಸಾಗಿ ಆರ್ಮುಗಂ ವೃತ್ತ ತಲುಪಿತು. ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣ ಸಮೀಪದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಪೃಥ್ವಿ ರೆಡ್ಡಿ, 'ಸರ್ಕಾರದ ಬೊಕ್ಕಸದಿಂದ ಬರೋಬ್ಬರಿ 20,000 ಕೋಟಿ ರೂಪಾಯಿಗಿಂತಲೂ ಅಧಿಕ ಹಣ ಖರ್ಚಾಗಿದ್ದರೂ, ಬೆಂಗಳೂರಿನ ರಸ್ತೆಗಳ ತುಂಬಾ ಗುಂಡಿಗಳಿವೆ. ಇದರಿಂದಾಗಿ ಅಮಾಯಕ ವಾಹನ ಸವಾರರು ಕೈಕಾಲು ಮುರಿದುಕೊಂಡು ಜೀವ ಕಳೆದುಕೊಳ್ಳುತ್ತಿದ್ದಾರೆ. ಸಂಚಾರ ದಟ್ಟಣೆ ಸಮಸ್ಯೆಗೂ ಗುಂಡಿಗಳು ಕಾರಣ. ರಸ್ತೆ ಕಾಮಗಾರಿಗಳಲ್ಲಾದ ಅಕ್ರಮವನ್ನು ಹತ್ತು ದಿನಗಳ ಮೂಲಕ ಮನೆಮನೆಗೆ ತಲುಪಿಸಿ ಜಾಗೃತಿ ಮೂಡಿಸುತ್ತೇವೆ. ಸರ್ಕಾರ ಮಾಡಿರುವ ಈ ಅನ್ಯಾಯದ ವಿರುದ್ಧ ಜನತಾ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ' ಎಂದು ಹೇಳಿದರು. ಬೆಂಗಳೂರು ನಗರ ಎಎಪಿ ಅಧ್ಯಕ್ಷ ಮೋಹನ್‌ ದಾಸರಿ ಮಾತನಾಡಿ, 'ಸಹಿ ಸಂಗ್ರಹ ಅಭಿಯಾನವು ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳ ಮೂಲೆಮೂಲೆಯನ್ನು ತಲುಪಲಿದೆ. ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ವಿರುದ್ಧ ಜನಜಾಗೃತಿ ಮೂಡಿಸಿ, ಸರ್ಕಾರ ಮೇಲೆ ಒತ್ತಡ ಹಾಕಲು ಪ್ರಯತ್ನಿಸುತ್ತೇವೆ. ಸರ್ಕಾರ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಚುನಾವಣೆಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ' ಎಂದು ಎಚ್ಚರಿಸಿದರು. 'ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ನಾವು ಈ ಹಿಂದೆ ಮಾಡಿದ್ದ ಪ್ರತಿಭಟನೆಗಳು, ರಸ್ತೆಗುಂಡಿ ಹಬ್ಬ ಎಂಬ ವಿನೂತನ ಅಭಿಯಾನ, ಸೋಶಿಯಲ್ ಮೀಡಿಯಾ ಚಳವಳಿಗೆ ಉತ್ತಮ ಜನಬೆಂಬಲ ವ್ಯಕ್ತವಾಗಿದೆ. ಗುಂಡಿಗಳಿಗೆ ಕಾರಣರಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ 70ಕ್ಕೂ ಹೆಚ್ಚು ದೂರುಗಳನ್ನು ಪೊಲೀಸ್‌ ಠಾಣೆಯಲ್ಲಿ ದಾಖಲಿಸಿದ್ದೇವೆ. ಅದೇ ರೀತಿ, ಈ ಚಳವಳಿಗೆ ಕೂಡ ಹೆಚ್ಚಿನ ಬೆಂಬಲ ಸಿಗುವ ವಿಶ್ವಾಸವಿದೆ' ಎಂದು ಹೇಳಿದರು. ಆಮ್‌ ಆದ್ಮಿ ಪಾರ್ಟಿಯ ಮುಖಂಡರಾದ ಬಿ.ಟಿ. ನಾಗಣ್ಣ, ಸುರೇಶ್‌ ರಾಥೋಡ್‌, ಜಗದೀಶ್ ಚಂದ್ರ, ಉಷಾ ಮೋಹನ್‌, ಪಲ್ಲವಿ ಚಿದಂಬರಂ, ಅಶೋಕ್‌ ಮೃತ್ಯುಂಜಯ. ವಿಜಯ್‌ ಶಾಸ್ತ್ರಿಮಠ್ ಹಾಗೂ ಇನ್ನಿತರೆ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಅಭಿಯಾನದಲ್ಲಿ ಭಾಗಿಯಾಗಿದ್ದರು. ಕಾರ್ಯಕರ್ತರು ಬೈಕ್‌ಗಳಲ್ಲಿ ಮೆರವಣಿಗೆ ತೆರಳಿದರು. ಸಾರ್ವಜನಿಕರನ್ನು ಮಾತನಾಡಿಸಿ, ರಸ್ತೆ ಗುಂಡಿ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡುವಂತೆ ಅವರಿಂದ ಸಹಿ ಪಡೆದರು.