ಬೆಂಗಳೂರಿನ ಟೆಕ್ಕಿಯನ್ನು ಅಪಹರಿಸಿ 2 ಕೋಟಿ ಹಣಕ್ಕೆ ಬೇಡಿಕೆಯಿಟ್ಟ ಸ್ನೇಹಿತರ ಬಂಧನ!

ಮೂವರು ಗೆಳೆಯರು ಹಣಕ್ಕಾಗಿ ಸ್ನೇಹಿತನನ್ನೇ ಅಪಹರಣ ಮಾಡಿ, ತಮಿಳುನಾಡಿನ ಹೋಟೆಲ್‌ನಲ್ಲಿ ಕೂಡಿ ಹಾಕಿದ ಘಟನೆ ನಡೆದಿದೆ. ಕೊನೆಗೆ 2 ಕೋಟಿ ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಸ್ನೇಹಿತರನ್ನು ಫಾಸ್ಟ್‌ಟ್ಯಾಗ್‌ ನೀಡಿದ ಸುಳಿವಿನಿಂದ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಟೆಕ್ಕಿಯನ್ನು ಅಪಹರಿಸಿ 2 ಕೋಟಿ ಹಣಕ್ಕೆ ಬೇಡಿಕೆಯಿಟ್ಟ ಸ್ನೇಹಿತರ ಬಂಧನ!
Linkup
ಬೆಂಗಳೂರು: ಗುಂಡು ಪಾರ್ಟಿ ಮಾಡೋಣ ಎಂದು ಕಾರಿನಲ್ಲಿ ಕರೆದುಕೊಂಡು ಹೋದ ಟೆಕ್ಕಿಯನ್ನು ಸ್ನೇಹಿತರೇ ಅಪಹರಿಸಿ ಎರಡು ಕೋಟಿ ರೂ. ಬೇಡಿಕೆಯಿಟ್ಟಿದ್ದ ಆರೋಪದಡಿ ಮೂವರನ್ನು ಕೋರಮಂಗಲ ಪೊಲೀಸರು ಬಂಧಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸಾಫ್ಟ್‌ವೇರ್‌ ಎಂಜಿನಿಯರ್‌, ಸ್ಟಾರ್ಟ್‌ಅಪ್‌ ಕಂಪನಿ ಮಾಲೀಕ ವಿನೀತ್‌ ವರ್ಧನ್‌ ಅಪಹರಣಕ್ಕೊಳಗಾದವರು. ಸ್ನೇಹಿತ ಅಹಮದ್‌ ಸನೂಪ್‌ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಪ್ರಶಾಂತ್‌, ಸಂತೋಷ್‌ ಹಾಗೂ ಅರಿವೇಗನ್‌ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿನೀತ್‌ ಆರೋಪಿಗಳಾದ ಪ್ರಶಾಂತ್‌ ಹಾಗೂ ಸಂತೋಷ್‌ನೊಂದಿಗೆ ಹಣಕಾಸಿನ ವ್ಯವಹಾರ ಹೊಂದಿದ್ದರು. ಆರೋಪಿಗಳಿಗೆ ಪಾವತಿಸಬೇಕಿದ್ದ ಹಣ ಪಾವತಿಸಲು ವಿನೀತ್‌ ನಿರಾಕರಿಸಿದ್ದರು. ವಿನೀತ್‌ ಇತ್ತೀಚೆಗೆ ಬೇರೊಂದು ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಅದರಿಂದ ಹಣ ಸಂದಾಯವಾಗುವ ಮಾಹಿತಿ ಇತ್ತು. ಈತನನ್ನು ಅಪಹರಿಸಿದರೆ ಹಣ ಗಳಿಸಬಹುದು ಎಂದು ಆರೋಪಿಗಳು ಯೋಜನೆ ರೂಪಿಸಿದ್ದಾರೆ. ಇದರಂತೆ ಸ್ನೇಹಿತನ ಪೋರ್ಡ್‌ ಕಾರು ಪಡೆದು ಮನೆ ಬಳಿ ಹೋಗಿ ಗುಂಡು ಪಾರ್ಟಿ ಮಾಡೋಣ ಬಾ ಎಂದು ಕರೆದಿದ್ದಾರೆ. ಅಪಹರಣ ಪ್ಲ್ಯಾನ್‌ ಅರಿಯದ ವಿನೀತ್‌, ಸ್ನೇಹಿತರು ಎಂಬ ಕಾರಣಕ್ಕಾಗಿಯೇ ಸಹಜವಾಗಿ ಕಾರು ಹತ್ತಿದ್ದರು. ಕೋರಮಂಗಲ- ಸಿಲ್ಕ್‌ ಬೋರ್ಡ್‌ ಮಾರ್ಗವಾಗಿ ಎಲೆಕ್ಟ್ರಾನಿಕ್‌ ಸಿಟಿ ಟೋಲ್‌ ಕ್ರಾಸ್‌ ಆಗುತ್ತಿದ್ದಂತೆ ಅನುಮಾನ ವ್ಯಕ್ತಪಡಿಸಿ ಎಲ್ಲಿಗೆ ಹೋಗುತ್ತಿದ್ದೀರಿ ಎಂದು ವಿನೀತ್‌ ಪ್ರಶ್ನಿಸಿದ್ದಾರೆ. ಈ ವೇಳೆ ಅಸಲಿ ಮುಖ ಪ್ರದರ್ಶಿಸಿದ ಸ್ನೇಹಿತರು, ವಿನೀತ್‌ ಮುಖಕ್ಕೆ ಬಟ್ಟೆ ತುರುಕಿ ಕಿರುಚಾಡದಂತೆ ತಾಕೀತು ಮಾಡಿದ್ದಾರೆ. ತಮಿಳುನಾಡಿನ ಹೋಟೆಲೊಂದಕ್ಕೆ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದರು. ಎರಡು ದಿನವಾದರೂ ವಿನೀತ್‌ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಕೋರಮಂಗಲ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆ ಕುಟುಂಬಸ್ಥರಿಗೆ ಕರೆ ಮಾಡಿ ಎರಡು ದಿನದಲ್ಲಿ 2 ಕೋಟಿ ರೂ. ಹಣ ಕೊಡಲಿಲ್ಲ ಎಂದರೆ ವಿನೀತ್‌ನನ್ನು ಕೊಂದು ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಅಪಹರಣಕಾರರು ಬೆದರಿಕೆ ಹಾಕಿದ್ದರು. ತಕ್ಷಣವೇ ಪೊಲೀಸರ ಎರಡು ತಂಡಗಳು ತಮಿಳುನಾಡಿಗೆ ತೆರಳಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪತ್ತೆಗೆ ಮೊಬೈಲ್‌ ಲೊಕೇಶನ್‌ ನೆರವುಕಾರಿನಲ್ಲಿ ಕಿಡ್ನ್ಯಾಪ್‌ ಮಾಡಿದ್ದರ ಬಗ್ಗೆ ಸಿಸಿಟಿವಿ ಸಾಕ್ಷ್ಯ ಸಿಕ್ಕಿತ್ತು. ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಜಾಡು ಹಿಡಿದ ಪೊಲೀಸರಿಗೆ ಆರೋಪಿ ಪ್ರಶಾಂತ್‌ ಸ್ನೇಹಿತರೊಬ್ಬರಿಂದ ಪೋರ್ಡ್‌ ಕಾರು ಪಡೆದಿರುವುದು ಗೊತ್ತಾಗಿತ್ತು. ಕಾರಿನ ಮಾಲೀಕನನ್ನು ಕರೆಯಿಸಿ ವಿಚಾರಿಸಿದಾಗ ಬಳಕೆಗೆ ಹಣ ಕಡಿತವಾದ ಮೇಸೆಜ್‌ ಬಂದಿರುವುದನ್ನು ಗಮನಕ್ಕೆ ತಂದಿದ್ದರು. ಎಲೆಕ್ಟ್ರಾನಿಕ್‌ ಸಿಟಿ ಟೋಲ್‌ನಲ್ಲಿ ಕಾರು ಹೋಗಿರುವುದು ದೃಢಪಟ್ಟಿತ್ತು. ಆರೋಪಿಗಳ ಮೊಬೈಲ್‌ ಲೊಕೇಶನ್‌ ತಮಿಳುನಾಡಿನಲ್ಲಿ ಇರುವುದರ ಬಗ್ಗೆ ಸುಳಿವು ನೀಡಿತ್ತು. ಸದ್ಯ ಆರೋಪಿಗಳನ್ನು ಬಂಧಿಸಿರುವ ಕೋರಮಂಗಲ ಪೊಲೀಸರು. ತೀವ್ರ ವಿಚಾರಣೆ ನಡೆಸಿದ್ದಾರೆ. ಯಾವ ಕಾರಣಕ್ಕಾಗಿ ಅಪಹರಣ ನಡೆಸಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ನಡೆಸುತ್ತಿದ್ದಾರೆ.