ಬೆಂಗಳೂರು ನೋಡಿದರೆ ಭಯವಾಗುತ್ತೆ, ಎಚ್ಚರ ತಪ್ಪಿದರೆ ಅಪಾಯ: ಸುಧಾಕರ್‌ ಕಳವಳ

'ರಾಜ್ಯದ 11 ಜಿಲ್ಲೆ ಹೊರತುಪಡಿಸಿ ಉಳಿದೆಡೆ ಒಂದಿಷ್ಟು ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಹಾಗಿದ್ದರೂ ಜನ ಎಚ್ಚರಿಕೆಯಿಂದಿರಬೇಕು. ಎರಡು ಡೋಸ್‌ ಲಸಿಕೆ ಪಡೆಯುವವರೆಗೂ ಜನ ಎಚ್ಚರ ವಹಿಸಬೇಕು' - ಸುಧಾಕರ್

ಬೆಂಗಳೂರು ನೋಡಿದರೆ ಭಯವಾಗುತ್ತೆ, ಎಚ್ಚರ ತಪ್ಪಿದರೆ ಅಪಾಯ: ಸುಧಾಕರ್‌ ಕಳವಳ
Linkup
: ರಾಜಧಾನಿ ಬೆಂಗಳೂರನ್ನು ನೋಡಿದರೆ ನನಗೂ ಭಯವಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಖಚಿತ. ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಡಾ.ಕೆ.ಸುಧಾಕರ್‌ ಮನವಿ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, '11 ಜಿಲ್ಲೆ ಹೊರತುಪಡಿಸಿ ಉಳಿದೆಡೆ ಒಂದಿಷ್ಟು ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಹಾಗಿದ್ದರೂ ಜನ ಎಚ್ಚರಿಕೆಯಿಂದಿರಬೇಕು. ಎರಡು ಡೋಸ್‌ ಲಸಿಕೆ ಪಡೆಯುವವರೆಗೂ ಜನ ಎಚ್ಚರ ವಹಿಸಬೇಕು. ರಾಜ್ಯದಲ್ಲಿ ಕನಿಷ್ಠ ಶೇ. 70ರಷ್ಟು ಮಂದಿಗೆ ಡೋಸ್‌ ಪೂರ್ಣಗೊಂಡ ಬಳಿಕ ಮೊದಲಿನಂತೆ ಆರಾಮವಾಗಿ ಇರಬಹುದು' ಎಂದು ಹೇಳಿದರು. 'ರಾಜ್ಯದಲ್ಲಿ ಆರ್ಥಿಕ ನಷ್ಟ ಉಂಟಾಗಲಿದೆ ಎಂಬ ಕಾರಣಕ್ಕೆ ಕೆಲ ವಿನಾಯ್ತಿ ನೀಡಲಾಗಿದೆ. ಪರಿಸ್ಥಿತಿಯನ್ನು ಸಂಪೂರ್ಣ ಅವಲೋಕಿಸಿ ಆಯ್ದ ವಿನಾಯ್ತಿ ಬಗ್ಗೆ ನಿರ್ಧರಿಸಲಾಗಿದೆ. ಒಂದೊಮ್ಮೆ ಉಲ್ಬಣಿಸಿದರೆ ಮತ್ತೆ ಕಠಿಣ ನಿರ್ಬಂಧ ಕ್ರಮಗಳ ಜಾರಿ ಖಚಿತ' ಎಂದು ತಿಳಿಸಿದರು. ಕೋವಿಡ್‌ ಪಾಸಿಟಿವಿಟಿ ಪ್ರಮಾಣ ಶೇ. 10ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪಾಸಿಟಿವಿಟಿ ದರ ಶೇ. 5ರೊಳಗಿರುವ ಜಿಲ್ಲೆಗಳಲ್ಲಿ ಎಚ್ಚರ ತಪ್ಪಬಾರದು. ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸಬೇಕು. ಹೊರ ರಾಜ್ಯ, ವಿದೇಶಗಳಿಂದ ರಾಜ್ಯಕ್ಕೆ ಬರುವರಿಗೆ ಚೆಕ್‌ ಪಾಯಿಂಟ್‌ಗಳಲ್ಲಿ ಕಡ್ಡಾಯವಾಗಿ ಪರೀಕ್ಷೆ ನಡೆಸಬೇಕೆಂದು ಸೂಚಿಸಲಾಗಿದೆ ಎಂದು ಹೇಳಿದರು. ಒಂದು ಗ್ರಾಮದಲ್ಲಿ ಐದು ಮಂದಿ ಸೋಂಕಿತರು ಕಂಡು ಬಂದರೆ ಆ ಗ್ರಾಮವನ್ನೇ ಸೀಲ್‌ಡೌನ್‌ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಕಾಣಿಸಿಕೊಂಡವರನ್ನು ಕೂಡಲೇ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಿಸಬೇಕು. ನಗರ ಪ್ರದೇಶಗಳಲ್ಲಿ ಜನ ಅನಗತ್ಯವಾಗಿ ಓಡಾಡಬಾರದು ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆಯನ್ನು ಮುಚ್ಚಿಟ್ಟಿಲ್ಲ. ಇದನ್ನು ಪದೇ ಪದೇ ಹೇಳುತ್ತಿದ್ದೇನೆ. ಕರ್ನಾಟಕವನ್ನು ಬಿಹಾರಕ್ಕೆ ಹೋಲಿಸುವುದು ಸರಿಯಲ್ಲ. ನಾವು ಯಾವ ಮಾಹಿತಿಯನ್ನೂ ಮುಚ್ಚಿಟ್ಟಿಲ್ಲ. ಅಂತಹ ಅವಕಾಶವೇ ಇಲ್ಲ ಎಂದು ಸುಧಾಕರ್‌ ಸ್ಪಷ್ಟಪಡಿಸಿದರು.