ಪ್ಲಾಸ್ಟಿಕ್‌ ಗನ್‌ ತೋರಿಸಿ ಮಾಂಗಲ್ಯ ಸರ ಕದ್ದವನ ಬಂಧಿಸಿದ ಬೆಂಗಳೂರು ಪೊಲೀಸರು!

ಆರೋಪಿ ನಿಂಗಪ್ಪ ಜೀವನ ನಿರ್ವಹಣೆಗಾಗಿ ಚಾಲಕ ವೃತ್ತಿ ಮಾಡುತ್ತಿದ್ದ. ಆದರೆ, ಕೋವಿಡ್‌ ಬಿಕ್ಕಟ್ಟಿನಿಂದ ಆದಾಯವಿಲ್ಲದೆ ಕುಟುಂಬದಲ್ಲಿ ಆರ್ಥಿಕ ಸಮಸ್ಯೆಗಳು ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ. ಹಾಗಾಗಿ, ಸಾಲ ತೀರಿಸಲೆಂದು ಕಳ್ಳತನದ ಮಾರ್ಗ ಹಿಡಿದಿದ್ದ ಎಂದು ಪೊಲೀಸರು ತಿಳಿಸಿದರು.

ಪ್ಲಾಸ್ಟಿಕ್‌ ಗನ್‌ ತೋರಿಸಿ ಮಾಂಗಲ್ಯ ಸರ ಕದ್ದವನ ಬಂಧಿಸಿದ ಬೆಂಗಳೂರು ಪೊಲೀಸರು!
Linkup
ಬೆಂಗಳೂರು: ಪ್ಲಾಸ್ಟಿಕ್‌ ಗನ್‌ ಹಿಡಿದು ಮನೆಯೊಳಗೆ ನುಗ್ಗಿ ಗೃಹಿಣಿಯನ್ನು ಬೆದರಿಸಿ ಆಕೆಯ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದ ಖದೀಮನನ್ನು ಪ್ರಕರಣ ದಾಖಲಾದ 16 ಗಂಟೆಗಳಲ್ಲಿ ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ನಿವಾಸಿ ನಿಂಗಪ್ಪ (32) ಬಂಧಿತ. ಆರೋಪಿಯಿಂದ 5 ಲಕ್ಷ ರೂ. ಮೌಲ್ಯದ 50 ಗ್ರಾಂ ಮಾಂಗಲ್ಯ ಸರ, ಕೃತ್ಯಕ್ಕೆ ಬಳಸಿದ್ದ ಒಂದು ಕಾರು, ಪ್ಲಾಸ್ಟಿಕ್‌ ಪಿಸ್ತೂಲ್‌ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿ ನಿಂಗಪ್ಪ ಜೀವನ ನಿರ್ವಹಣೆಗಾಗಿ ಚಾಲಕ ವೃತ್ತಿ ಮಾಡುತ್ತಿದ್ದ. ಆದರೆ, ಕೋವಿಡ್‌ ಬಿಕ್ಕಟ್ಟಿನಿಂದ ಆದಾಯವಿಲ್ಲದೆ ಕುಟುಂಬದಲ್ಲಿ ಆರ್ಥಿಕ ಸಮಸ್ಯೆಗಳು ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ. ಹಾಗಾಗಿ, ಸಾಲ ತೀರಿಸಲೆಂದು ಕಳ್ಳತನದ ಮಾರ್ಗ ಹಿಡಿದಿದ್ದ ಎಂದು ಪೊಲೀಸರು ತಿಳಿಸಿದರು. ಏನಿದು ಪ್ರಕರಣ? ಅಬ್ಬಿಗೆರೆಯ ಎನ್‌ಎಚ್‌ಆರ್‌ ಲೇಔಟ್‌ನಲ್ಲಿ ಎರಡು ವರ್ಷಗಳಿಂದಲೂ ದೂರುದಾರ ಮಹಿಳೆಯ ಮಾವ ಸೇರಿದಂತೆ ಕುಟುಂಬಸ್ಥರು ವಾಸವಾಗಿದ್ದರು. ಇವರು, ಆರೋಪಿಗೆ ಕ್ಯಾಬ್‌ ಬಾಡಿಗೆಗೆ ನೀಡುತ್ತಿದ್ದರು. ಹಾಗಾಗಿ, ನಿಂಗಪ್ಪ ಬಾಡಿಗೆಗೆ ಹೋದಾಗಲೆಲ್ಲ ಮನೆಯಲ್ಲಿರುವ ಸದಸ್ಯರೆಲ್ಲರನ್ನು ಗಮನಿಸುತ್ತಿದ್ದ. ಎಲ್ಲರೂ ಹೊರಗೆ ಹೋದ ವೇಳೆ ಗೃಹಿಣಿಯೊಬ್ಬರೇ ಇರುವುದನ್ನು ಗಮನಿಸಿದ್ದ. ಅದರಂತೆ ಬುಧವಾರ ಮಧ್ಯಾಹ್ನ ಮಹಿಳೆ ಮಗುವಿನ ಜತೆ ಒಂಟಿಯಾಗಿರುವುದನ್ನೇ ನೋಡಿಕೊಂಡು ಮನೆಯೊಳಗೆ ನುಗ್ಗಿ ಪ್ಲಾಸ್ಟಿಕ್‌ ಗನ್‌ ತೋರಿಸಿ ಚಿನ್ನಾಭರಣ ಕೊಡುವಂತೆ ಹೆದರಿಸಿದ್ದಾನೆ. ಚಿನ್ನಾಭರಣವಿಲ್ಲ ಎಂದಾಗ ಮಹಿಳೆಯ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದ. ಈ ಸಂಬಂಧ ಕೂಡಲೇ ಮಹಿಳೆ ಗಂಗಮ್ಮನಗುಡಿ ಠಾಣೆಯಲ್ಲಿಪ್ರಕರಣ ದಾಖಲಿಸಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿ, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಸಿಸಿ ಕ್ಯಾಮೆರಾ, ಕಾರಿನ ನಂಬರ್‌ನಿಂದ ಪತ್ತೆ! ಪ್ರಕರಣ ದಾಖಲಿಸಿಕೊಂಡ ಠಾಣೆ ಇನ್ಸ್‌ಪೆಕ್ಟರ್‌ ಸಿದ್ದೇಗೌಡ ಮತ್ತು ಸಿಬ್ಬಂದಿ ಕಳ್ಳತನವಾಗಿರುವ ಮನೆಯ ಅಕ್ಕಪಕ್ಕದ ಕಟ್ಟಡದ ಸಿಸಿ ಕ್ಯಾಮೆರಾ, ಸಿಗ್ನಲ್‌ಗಳಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದಾರೆ. ಈ ವೇಳೆ ದೂರುದಾರ ಮಹಿಳೆಯ ಮನೆಯ ಮುಂದೆ ನಿಂತಿದ್ದ ಕಾರಿನ ನಂಬರ್‌ ಪತ್ತೆಯಾಗಿದೆ. ಈ ನಂಬರ್‌ ಇರುವ ವಿಳಾಸವನ್ನು ಬೆನ್ನತ್ತಿ ಹೋದಾಗ ಆರೋಪಿ ಪತ್ತೆಯಾಗಿದ್ದಾನೆ.