ಪುನೀತ್ ಕನಸನ್ನು ನನಸು ಮಾಡಲು ಹೊರಟ ಪತ್ನಿ ಅಶ್ವಿನಿ: ಪಿಆರ್‌ಕೆ ಪ್ರೊಡಕ್ಷನ್ಸ್‌ನಿಂದ ಮಹತ್ವದ ಘೋಷಣೆ..!

ಪುನೀತ್ ರಾಜ್‌ಕುಮಾರ್ ಅವರ ನಿಧನದಿಂದಾಗಿ ನವೆಂಬರ್ 1, 2021 ರಂದು ‘ಕನ್ನಡ ರಾಜ್ಯೋತ್ಸವ’ದ ಪ್ರಯುಕ್ತ ಬಿಡುಗಡೆಯಾಗಬೇಕಿದ್ದ ಕರುನಾಡ ಕುರಿತಾದ ವಿಶೇಷ ಡಾಕ್ಯುಮೆಂಟರಿ ಬಿಡುಗಡೆಯಾಗಲಿಲ್ಲ. ಇದೀಗ ಇದೇ ಡಾಕ್ಯುಮೆಂಟರಿ ಕುರಿತಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.

ಪುನೀತ್ ಕನಸನ್ನು ನನಸು ಮಾಡಲು ಹೊರಟ ಪತ್ನಿ ಅಶ್ವಿನಿ: ಪಿಆರ್‌ಕೆ ಪ್ರೊಡಕ್ಷನ್ಸ್‌ನಿಂದ ಮಹತ್ವದ ಘೋಷಣೆ..!
Linkup
ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ನವೆಂಬರ್ 1, 2021 ರಂದು ಕರ್ನಾಟಕದ ಬಗ್ಗೆ ಅವರು ಸಿದ್ಧಪಡಿಸಿದ್ದ ಡಾಕ್ಯುಮೆಂಟರಿ ಬಿಡುಗಡೆಯಾಗಬೇಕಿತ್ತು. ಈ ಕುರಿತಾಗಿ ಅಕ್ಟೋಬರ್ 27 ರಂದು ಫೇಸ್‌ಬುಕ್‌ನಲ್ಲಿ ಪುನೀತ್ ರಾಜ್‌ಕುಮಾರ್ ಮಾಹಿತಿ ಹಂಚಿಕೊಂಡಿದ್ದರು. ಆದರೆ, ಅದು ಬಿಡುಗಡೆಯಾಗುವ ಮುನ್ನವೇ ಕ್ರೂರ ವಿಧಿ ತನ್ನ ಅಟ್ಟಹಾಸ ಮೆರೆದು ಬಿಟ್ಟಿತ್ತು, ಅಕ್ಟೋಬರ್ 29 ರಂದು ಪುನೀತ್ ರಾಜ್‌ಕುಮಾರ್ ಹಠಾತ್ ವಿಧಿವಶರಾದರು. ತೀವ್ರ ಹೃದಯಾಘಾತ ಹಾಗೂ ಹೃದಯ ಸ್ತಂಭನದಿಂದ ಪುನೀತ್ ರಾಜ್‌ಕುಮಾರ್ ಕೊನೆಯುಸಿರೆಳೆದರು. ಅಪ್ಪು ಅವರ ಅಕಾಲಿಕ ನಿಧನದಿಂದ ಇಡೀ ಕರುನಾಡೇ ದಿಗ್ಭ್ರಮೆಗೊಂಡಿತ್ತು. ಪುನೀತ್ ರಾಜ್‌ಕುಮಾರ್ ಅವರ ನಿಧನದಿಂದಾಗಿ ನವೆಂಬರ್ 1, 2021 ರಂದು ‘ಕನ್ನಡ ರಾಜ್ಯೋತ್ಸವ’ದ ಪ್ರಯುಕ್ತ ಬಿಡುಗಡೆಯಾಗಬೇಕಿದ್ದ ಕರುನಾಡ ಕುರಿತಾದ ವಿಶೇಷ ಡಾಕ್ಯುಮೆಂಟರಿ ಬಿಡುಗಡೆಯಾಗಲಿಲ್ಲ. ಇದೀಗ ಇದೇ ಡಾಕ್ಯುಮೆಂಟರಿ ಕುರಿತಾಗಿ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಪುನೀತ್ ಅವರ ಇಷ್ಟದಂತೆಯೇ…. ಕರುನಾಡ ಕುರಿತಾಗಿ ಪುನೀತ್ ರಾಜ್‌ಕುಮಾರ್ ಸಿದ್ಧಪಡಿಸಿದ್ದ ವಿಶೇಷ ಡಾಕ್ಯುಮೆಂಟರಿಯ ಬಿಡುಗಡೆಯ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ‘’ಅಪ್ಪು ಅವರ ಕನಸೊಂದು ನವೆಂಬರ್ 1, 2021 ರಂದು ಬೆಳಕು ಕಾಣಬೇಕಿತ್ತು. ಆದರೆ, ಆ ಕನಸಿಗಿದು ಅಲ್ಪವಿರಾಮವಷ್ಟೇ… ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ’’ ಎಂದು ಇಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಡಾಕ್ಯುಮೆಂಟರಿ ಕರ್ನಾಟಕ ರಾಜ್ಯದ ವನ್ಯ ಸಂಪತ್ತು, ಸಮುದ್ರ ಜೀವಿಗಳ ಕುರಿತಾದ ಸಾಕ್ಷ್ಯಚಿತ್ರವನ್ನು ಅಮೋಘವರ್ಷ ಜೊತೆ ಸೇರಿ ಪುನೀತ್ ರಾಜ್‌ಕುಮಾರ್ ಸಿದ್ಧಪಡಿಸಿದ್ದರು. ಈ ಡಾಕ್ಯುಮೆಂಟರಿಗೆ ‘ಗಂಧದ ಗುಡಿ’ ಅಂತ ಹೆಸರಿಡಲು ಪುನೀತ್ ರಾಜ್‌ಕುಮಾರ್ ಮುಂದಾಗಿದ್ದರು. 90 ನಿಮಿಷಗಳ ಈ ಸಾಕ್ಷ್ಯಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ಪುನೀತ್ ರಾಜ್‌ಕುಮಾರ್ ಕಾಡು ಸುತ್ತಿದ್ದರು, ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಕೂಡ ಮಾಡಿದ್ದರು. ಪುನೀತ್ ರಾಜ್‌ಕುಮಾರ್ ಹಾಕಿದ್ದ ಪೋಸ್ಟ್ ‘’ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’’ ಎಂದು ಅಕ್ಟೋಬರ್ 27 ರಂದು ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ರಾಜ್‌ಕುಮಾರ್ ಪೋಸ್ಟ್ ಹಾಕಿದ್ದರು. ಮಹತ್ವದ ಟ್ವೀಟ್ ಮಾಡಿದ್ದ ಪಿ.ಆರ್‌.ಕೆ ಪ್ರೊಡಕ್ಷನ್ಸ್ ಸಂಸ್ಥೆ ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಪಿ.ಆರ್.ಕೆ.ಪ್ರೊಡಕ್ಷನ್ಸ್ ಸಂಸ್ಥೆ ಟ್ವೀಟ್ ಮಾಡಿದ್ದು, ತಮ್ಮ ಸಂಸ್ಥೆಯ ಪ್ರಯಾಣವನ್ನು ಪುನರಾರಂಭಿಸುವುದಾಗಿ ತಿಳಿಸಿತ್ತು. ‘’ನಮಗೆ ಹಿಂದಿನದನ್ನು ಬದಲಿಸುವುದು ಅಸಾಧ್ಯವಾಗಿದೆ. ಆದರೆ, ಶ್ರೀ ಪುನೀತ್ ರಾಜ್‌ಕುಮಾರ್ ರವರು ನಮಗೆ ನೀಡಿರುವ ಉತ್ಸಾಹ ಮತ್ತ ಸ್ಫೂರ್ತಿಯೊಂದಿಗೆ ಪಿ.ಆರ್.ಕೆ.ಪ್ರೊಡಕ್ಷನ್ಸ್ ಮತ್ತು ಪಿ.ಆರ್‌.ಕೆ.ಆಡಿಯೋದ ಮೂಲಕ ಉಜ್ವಲ ಭವಿಷ್ಯವನ್ನು ರಚಿಸಲು ಎದುರು ನೋಡುತ್ತೇವೆ. ನಮ್ಮ ಈ ಪ್ರಯಾಣವನ್ನು ಪುನರಾರಂಭಿಸುತ್ತಾ ಅವರ ಕನಸುಗಳನ್ನು ನನಸಾಗಿಸುವಲ್ಲಿ ನಿಮ್ಮ ಬೆಂಬಲವನ್ನು ನಾವು ನಿರೀಕ್ಷಿಸುತ್ತೇವೆ’’ ಎಂದು ಪಿ.ಆರ್.ಕೆ.ಪ್ರೊಡಕ್ಷನ್ಸ್ ಸಂಸ್ಥೆ ಟ್ವೀಟ್ ಮಾಡಿದೆ. ಅಶ್ವಿನಿ ಹೆಗಲಿಗೆ ಜವಾಬ್ದಾರಿ ಪಿ.ಆರ್.ಕೆ.ಪ್ರೊಡಕ್ಷನ್ಸ್ ಸ್ಥಾಪನೆಯಾದಾಗಿನಿಂದಲೂ ಅದನ್ನ ಮ್ಯಾನೇಜ್ ಮಾಡುತ್ತಿದ್ದವರು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್. ಈಗಲೂ ಪಿ.ಆರ್.ಕೆ.ಪ್ರೊಡಕ್ಷನ್ಸ್ ಹಾಗೂ ಪಿ.ಆರ್.ಕೆ.ಆಡಿಯೋ ಸಂಸ್ಥೆಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೇ ಮುನ್ನಡೆಸಲಿದ್ದಾರೆ. ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ಜೊತೆಯಲ್ಲಿ ಇಲ್ಲದೇ ಇದ್ದರೂ, ಅವರ ಸ್ಫೂರ್ತಿಯೊಂದಿಗೆ, ಅಪ್ಪು ಕಂಡಿದ್ದ ಕನಸನ್ನು ನನಸಾಗಿಸಲು ಪಿ.ಆರ್.ಕೆ.ಪ್ರೊಡಕ್ಷನ್ಸ್ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊತ್ತಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಇದೀಗ ಸಾಮಾಜಿಕ ಜಾಲತಾಣಕ್ಕೂ ಅಧಿಕೃತವಾಗಿ ಎಂಟ್ರಿಕೊಟ್ಟಿದ್ದು, ಅಪ್ಪು ಕನಸನ್ನು ನನಸಾಗಿಸುವ ಹಾದಿಯಲ್ಲಿ ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.