![](https://vijaykarnataka.com/photo/88030905/photo-88030905.jpg)
ಬೆಂಗಳೂರು: ರಾಜಕೀಯ ಜಿದ್ದಾಜಿದ್ದಿಗೆ ಬರಲಿ, ನಾನು ಹೋರಾಟ ಮಾಡುತ್ತೇನೆ ಆದರೆ ದ್ವೇಷದ ರಾಜಕೀಯ ಸರಿಯಲ್ಲ ಎಂದು ಯಲಹಂಕ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದರು.
ವಿಧಾನಸೌಧದಲ್ಲಿ ಬುಧವಾರ ಮಾತನಾಡಿದ ಅವರು, ಶಾಸಕನಿಗೆ ಕೊಲೆ ಸುಪಾರಿ ನೀಡಿದ್ದು ನಿಜಕ್ಕೂ ಆತಂಕಕಾರಿ. ಯಾಕೆ ಇಂತಹ ದುರ್ಬುದ್ದಿ ಗೋಪಾಲಕೃಷ್ಣ ಅವರಿಗೆ ಬಂತೋ ಗೊತ್ತಿಲ್ಲ ಎಂದರು.
ಹತ್ಯೆ ಸಂಚು ಪ್ರಕರಣ ಹಿನ್ನೆಲೆಯಲ್ಲಿ ಈಗಾಗಲೇ ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ. ಪೊಲೀಸ್ ಇಲಾಖೆಗೆ ದೂರು ಕೊಟ್ಟಿದ್ದೇವೆ ಎಂದರು.
ಈ ವಿಡಿಯೋವನ್ನು ನಾನೇ ಕ್ರಿಯೇಟ್ ಮಾಡಿದ್ದೇನೆ ಎಂಬ ಆರೋಪ ಸುಳ್ಳು. ಈ ತರ ದ್ವೇಷದ ರಾಜಕೀಯ ಸರಿಯಲ್ಲ. ನಾನು ಯಾವತ್ತೂ ಸಾವಿಗೆ ಹೆದರುವವನಲ್ಲ. ಕಾಂಗ್ರೆಸ್ ನಾಯಕರು ಸಮರ್ಥನೆ ಮಾಡುವುದು ಸರಿಯಲ್ಲ . ನಾಳೆ ನಿಮಗೂ ಕೆಟ್ಟ ಹೆಸರು ಬರಬಹುದು. ಈ ನಿಟ್ಟಿನಲ್ಲಿ ವಿರೋಧ ಪಕ್ಷದವರು ತನಿಖೆಗೆ ಆಗ್ರಹ ಮಾಡಲಿ ಎಂದರು.
ನನ್ನ ಹತ್ಯೆಗೆ ಸುಪಾರಿ ಕೊಟ್ಟ ಉದ್ದೇಶ ಏನು? ಇದರ ಹಿಂದೆ ಯಾರಿದ್ದಾರೆ? ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಯಲಿ ಎಂದು ಒತ್ತಾಯಿಸಿದರು.
ಕುಳ್ಳ ದೇವರಾಜ್ ನನಗೆ ಗೊತ್ತು, ಆದರೆ ಆತನಿಗೆ ನನಗೆ ಯಾವುದೇ ಸಂಪರ್ಕ ಇಲ್ಲ. ಈ ವಿಡಿಯೋ ಮಾಡಿ ಎಷ್ಟು ದಿನ ಆಯ್ತು ಎಂದು ಗೊತ್ತಿಲ್ಲ.ಆದರೆ ಸುಪಾರಿ ಪಡೆದ ಕುಳ್ಳ ದೇವರಾಜ್ ಕ್ಷಮಾಪಣಾ ಪತ್ರ ಹಾಗೂ ವಿಡಿಯೋ ಕಳಿಸಿಕೊಟ್ಟಿದ್ದಾನೆ ಎಂದರು.
ನಿನ್ನೆ ನನ್ನ ಮನೆಯಲ್ಲಿ ಒಂದು ಪತ್ರ ಬಂದಿತ್ತು, ಅದರಲ್ಲಿ ಕ್ಷಮಾಪಣಾ ಪತ್ರ ಮತ್ತು ವಿಡಿಯೋ ಇತ್ತು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಇದೆ.ಅವರು ಏನು ತನಿಖೆ ಮಾಡಿದರೂ ಒಪ್ಪಿಕೊಳ್ಳುತ್ತೇವೆ ಎಂದು ತಿಳಿಸಿದರು.
ಈವರಗೆ ಇಂತಹ ಘಟನೆ ನನ್ನ ಕ್ಷೇತ್ರದಲ್ಲಿ ನಡೆದಿಲ್ಲ. ಕಳೆದ ಎರಡು ಬಾರಿ ನನ್ನ ವಿರುದ್ಧ ಚುನಾವಣೆಯಲ್ಲಿ ಗೋಪಾಲಕೃಷ್ಣ ಸ್ಪರ್ಧೆ ಮಾಡಿದ್ದಾರೆ.ನಾನು ಏಕಾಂಗಿಯಾಗಿ ಓಡಾಡುವಂತವನು. ರಾಜಕೀಯವಾಗಿ ಯಾವುದೇ ದ್ವೇಷ ಇಲ್ಲ .ಈ ಘಟನೆಯಿಂದ ದಿಗ್ಬ್ರಮೆಗೆ ಒಳಗಾಗಿದ್ದೇನೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಸಿಎಂಗೆ ಆಗ್ರಹ ಮಾಡಿದ್ದೇನೆ.
ಗೋಪಾಲಕೃಷ್ಣ ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯಿಲಿಯ ಶಿಷ್ಯ, ಆದರೆ ಏನೇ ಆದರೂ ತನಿಖೆ ನಡೆಸಲಿ ಎಂದರು.
ಚುನಾವಣೆಯಲ್ಲಿ ಸೋಲಿಸಲು ಆಗಲ್ಲ, ಅದಕ್ಕಾಗಿ ಐದು ಕೋಟಿ ಕೊಡ್ತೀನಿ ಮುಗಿಸು ಎಂದು ಉಲ್ಲೇಖ ಇದೆ ವಿಡಿಯೋದಲ್ಲಿ.ನಾನು ತೋಟಕ್ಕೆ ಹೋಗುವ ಬಗ್ಗೆಯೂ ಸಂಭಾಷಣೆಯಲ್ಲಿ ಇದೆ. ಸಂಭಾಷಣೆಯಲ್ಲಿ ನನ್ನ ವಿರುದ್ಧ ದ್ವೇಷ ಕಾರಲಾಗಿದೆ ಎಂದರು.
ಕಡಬಗೆರೆ ಶ್ರೀನಿವಾಸ ಶೂಟ್ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ.ಆದರೆ ವಿಡಿಯೋದಲ್ಲಿ ಸುಳ್ಳು ಬಿಂಬಿಸಲಾಗಿದೆ. ಇದರ ಬಗ್ಗೆಯೂ ತನಿಖೆ ನಡೆಯಲಿ, ಸತ್ಯಾಸತ್ಯತೆ ಹೊರಬರುತ್ತದೆ ಎಂದರು.
ಡಿಕೆ ಸಾಧು ಸಂತರ ಜೊತೆಗೆ ಇದ್ದಾರಾ?
ನನಗೆ ಯಾವುದೇ ಭದ್ರತೆಯ ಅವಶ್ಯಕತೆ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡಾ ನನ್ನ ಸ್ನೇಹಿತರು. ಎಂಎಲ್ ಎ ಸುಪಾರಿ ಕೊಟ್ಟವರನ್ನು ಸಮರ್ಥನೆ ಮಾಡ್ತಾರೆ. ಡಿಕೆ ಸಾಧು ಸಂತರ ಜೊತೆಗೆ ಇದ್ದಾರಾ? ಅವರು ನನ್ನನ್ನು ಸಮರ್ಥನೆ ಮಾಡಬೇಕು ಎಂದು ಡಿಕೆಶಿಗೆ ಎಸ್ಆರ್ ವಿಶ್ವನಾಥ್ ಟಾಂಗ್ ಕೊಟ್ಟರು.