ಗೋ ಹತ್ಯೆ ನಿಷೇಧ ಕಾಯ್ದೆ: ಹೈಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡ ರಾಜ್ಯ ಸರ್ಕಾರ

19ನೇ ಜಾನುವಾರು ಗಣತಿ ಪ್ರಕಾರ ಜಾನುವಾರಗಳ ಸಂಖ್ಯೆ 95,164,84ರಷ್ಟಿತ್ತು. 20ನೇ ಜಾನುವಾರು ಗಣತಿ ಪ್ರಕಾರ 84,690,04ಕ್ಕೆ ಇಳಿಕೆಯಾಗಿದೆ. ಈ ಎಲ್ಲಾ ಕಾರಣ ಗಮನಿಸಿ ಜಾನುವಾರುಗಳ ಸಂತತಿಯನ್ನು ಸಂರಕ್ಷಣೆ ಮಾಡುವ ಅಗತ್ಯವಿದೆ ಎಂದಿದೆ ಸರ್ಕಾರ.

ಗೋ ಹತ್ಯೆ ನಿಷೇಧ ಕಾಯ್ದೆ: ಹೈಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡ ರಾಜ್ಯ ಸರ್ಕಾರ
Linkup
: ನಿಷೇಧ ಕಾಯಿದೆಯನ್ನು ಸರಕಾರ ಹೈಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ. ಕುಸಿಯುತ್ತಿರುವ ಗೋ ಸಂತತಿ ರಕ್ಷಣೆ ಉದ್ದೇಶದಿಂದ ಕಾಯಿದೆ ಜಾರಿಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ ಪ್ರಶ್ನಿಸಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಆರೀಫ್‌ ಜಮೀಲ್‌, ಕಸಾಯಿ ಖಾನೆ ಮಾಲೀಕರು ಮತ್ತು ಗೋಮಾಂಸ ಮಾರಾಟಗಾರರು ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದವು. ಸರಕಾರ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ 'ಎಲ್ಲಾ ಅರ್ಜಿಗಳಿಗೆ ವಿವರವಾದ ಆಕ್ಷೇಪಣೆ ಸಲ್ಲಿಸಲಾಗಿದೆ. ಅದರ ಪ್ರತಿಗಳನ್ನು ಅರ್ಜಿದಾರರಿಗೆ ಕಳುಹಿಸಲಾಗುವುದು' ಎಂದು ತಿಳಿಸಿದರು. ಸರಕಾರದ ವಿವರಣೆ ಏನು?: ಕರ್ನಾಟಕದ ಆರ್ಥಿಕತೆ ಕೃಷಿ ಪ್ರಧಾನವಾಗಿದ್ದು, ಅದರಲ್ಲಿ ಗೋವು ಸಂತತಿ ಬೆನ್ನಲುಬಾಗಿದೆ. ಕರ್ನಾಟಕ ಆರ್ಥಿಕ ಸಮೀಕ್ಷೆ 2020-2021ರ ಪ್ರಕಾರ ಒಟ್ಟು ದೇಶೀಯ ಉತ್ಪನ್ನಗಳಿಗೆ ಕೃಷಿ ಕ್ಷೇತ್ರದಿಂದ 1.28 ಲಕ್ಷ ಕೋಟಿ ರೂ. ಆದಾಯ ಬರುತ್ತಿದೆ. ಜಾನುವಾರುಗಳಿಂದ 52,688 ಸಾವಿರ ಕೋಟಿ ರೂ. ಜಿಡಿಪಿಗೆ ಕೊಡುಗೆಯಿದೆ. ರಾಜ್ಯದಲ್ಲಿ ಶೇ.80ರಷ್ಟು ರೈತರು ಎರಡು ಹೆಕ್ಟೇರ್‌ಗೂ ಕಡಿಮೆ ಜಮೀನು ಹೊಂದಿದ್ದು, ತಮ್ಮ ಕೃಷಿ ಚಟುವಟಿಕೆಗಳಿಗೆ ಟ್ರ್ಯಾಕ್ಟರ್‌ ಬದಲಿಗೆ ಜಾನುವಾರುಗಳನ್ನೇ ಅವಲಂಬಿಸಿದ್ದಾರೆ ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ. ಎತ್ತು ಮತ್ತು ಕೋಣಗಳು ಹೈನುಗಾರಿಕೆಗೆ ಮಾತ್ರವಲ್ಲ, ಕೃಷಿ ಚಟುವಟಿಕೆ ಮತ್ತು ಸಂತಾನೋತ್ಪತ್ತಿಗೆ ಬಳಸಲಾಗುತ್ತದೆ. ಅವುಗಳ ಸಗಣಿಯಿಂದ ಬಯೋಗ್ಯಾಸ್‌ ಉತ್ಪತ್ತಿ ಮಾಡಿ ಇಂಧನವಾಗಿ ಬಳಸಲಾಗುತ್ತದೆ. ಒಂದು ಎತ್ತು ದಿನಕ್ಕೆ ಸರಾಸರಿ 15 ರಿಂದ 20 ಕೆ.ಜಿ ಸಗಣಿ ಮತ್ತು 10 ರಿಂದ 12 ಲೀಟರ್‌ ಗಂಜಲ ನೀಡುತ್ತದೆ. ಒಂದು ಕೆ.ಜಿ ಸಗಣಿಯಿಂದ 40 ಲೀಟರ್‌ ಜೈವಿಕ ಅನಿಲ ಉತ್ಪತ್ತಿಯಾಗುತ್ತದೆ. ಸಗಣಿ ಮತ್ತು ಗಂಜಲವನ್ನು ಸಾವಯವ ಗೊಬ್ಬರವಾಗಿ ಬಳಸಬಹುದು. 19ನೇ ಜಾನುವಾರು ಗಣತಿ ಪ್ರಕಾರ ಜಾನುವಾರಗಳ ಸಂಖ್ಯೆ 95,164,84ರಷ್ಟಿತ್ತು. 20ನೇ ಜಾನುವಾರು ಗಣತಿ ಪ್ರಕಾರ 84,690,04ಕ್ಕೆ ಇಳಿಕೆಯಾಗಿದೆ. ಈ ಎಲ್ಲಾ ಕಾರಣ ಗಮನಿಸಿ ಜಾನುವಾರುಗಳ ಸಂತತಿಯನ್ನು ಸಂರಕ್ಷಣೆ ಮಾಡುವುದು ಅಗತ್ಯ ಎಂಬುದನ್ನು ಸರಕಾರ ಗಣನೆಗೆ ತೆಗೆದುಕೊಂಡು, ಈ ಕಾಯಿದೆ ರೂಪಿಸಿದೆ ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಏನಾದರೂ ಇದ್ದರೆ ಲಿಖಿತವಾಗಿ ಜೂ. 14ರೊಳಗೆ ಸಲ್ಲಿಸುವಂತೆ ಎಲ್ಲಾ ಅರ್ಜಿದಾರರಿಗೆ ಸೂಚಿಸಿದ ನ್ಯಾಯಪೀಠ, ಅಂದು ಅರ್ಜಿಯ ಅಂತಿಮ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಹೇಳಿ ವಿಚಾರಣೆ ಮುಂದೂಡಿತು. ಬಲವಂತದ ಕ್ರಮವಿಲ್ಲ: ಈ ಮಧ್ಯೆ ಎಜಿ 'ರಾಜ್ಯದಲ್ಲಿ ಜಾನುವಾರು ಸಾಗಣೆ ಮಾಡುವವರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಎಲ್ಲಾ ಪೊಲೀಸ್‌ ಠಾಣೆಗಳಿಗೆ ನಿರ್ದೇಶಿಸಿ ಮತ್ತೆ ಸುತ್ತೋಲೆ ಹೊರಡಿಸಲಾಗಿದೆ' ಎಂದು ಸ್ಪಷ್ಟಪಡಿಸಿದರು. ಕಳೆದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ನೀಡಿದ ಭರವಸೆ ನಂತರವೂ ಜಾನುವಾರು ಸಾಗಣೆ ಮಾಡುವವರ ವಿರುದ್ಧ ಸರಕಾರವು 50ಕ್ಕೂ ಅಧಿಕ ಎಫ್‌ಐಆರ್‌ ದಾಖಲಿಸಿದೆ ಎಂದು ಆರೋಪಿಸಲಾಗಿತ್ತು. '29 ಪ್ರಕರಣ ದಾಖಲಿಸಲಾಗಿದೆ. ಅವುಗಳಲ್ಲಿ ಗೋ ಹತ್ಯೆ (ಸೆಕ್ಷನ್‌ 6ರಡಿ) ಮಾಡಿದವರ ವಿರುದ್ಧ 16 ಮತ್ತು ಅಕ್ರಮ ಗೋ ಸಾಗಣೆ (ಸೆಕ್ಷನ್‌ 5ರಡಿ) 11 ಕೇಸ್‌ ಪ್ರಕರಣ ದಾಖಲಿಸಲಾಗಿದೆ' ಎಂದು ವಿವರಿಸಿದರು. ಕೆಲವು ಪ್ರಕರಣಗಳಲ್ಲಿ ಮಾತ್ರ ಎಫ್‌ಐಆರ್‌ ದಾಖಲಿಸಲಾಗಿದೆ. ಕಾಯಿದೆಯ ನಿಯಮಗಳು ಅಂತಿಮವಾಗುವವರೆಗೆ ಗೋವುಗಳ ಸಾಗಣೆ ಮಾಡುವವರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಸೂಚಿಸಿ ಸರಕಾರದ ವತಿಯಿಂದ ಈಗಾಗಲೇ ಎಲ್ಲಾ ಪೊಲೀಸ್‌ ಠಾಣೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದರು.