ಕೇರಳ: ಕೋವಿಡ್ ನಿರ್ವಹಣೆಗಾಗಿ ಪ್ರಶಂಸೆಗೆ ಪಾತ್ರರಾಗಿದ್ದ ಶೈಲಜಾ ಟೀಚರ್‌ಗೆ ಹೊಸ ಸಂಪುಟದಲ್ಲಿ ಸ್ಥಾನವಿಲ್ಲ!

ಕೋವಿಡ್ ನಿರ್ವಹಣೆಗೆ ತೆಗೆದುಕೊಂಡ ಕ್ರಮಗಳ ಕಾರಣದಿಂದ ಜಾಗತಿಕ ಮಟ್ಟದಲ್ಲಿಯೂ ಮೆಚ್ಚುಗೆಗೆ ಪಾತ್ರರಾಗಿದ್ದ ಕೇರಳದ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರಿಗೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೊಸ ಸರ್ಕಾರ ಸಂಪುಟದಲ್ಲಿ ಸ್ಥಾನ ದೊರಕಿಲ್ಲ.

ಕೇರಳ: ಕೋವಿಡ್ ನಿರ್ವಹಣೆಗಾಗಿ ಪ್ರಶಂಸೆಗೆ ಪಾತ್ರರಾಗಿದ್ದ ಶೈಲಜಾ ಟೀಚರ್‌ಗೆ ಹೊಸ ಸಂಪುಟದಲ್ಲಿ ಸ್ಥಾನವಿಲ್ಲ!
Linkup
ತಿರುವನಂತಪುರಂ: ಕೇರಳದ ಆರೋಗ್ಯ ಸಚಿವೆಯಾಗಿ ಕೊರೊನಾ ವೈರಸ್ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕಾಗಿ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದ ಅವರಿಗೆ ಮುಖ್ಯಮಂತ್ರಿ ನೇತೃತ್ವದ ಹೊಸ ಸರ್ಕಾರದ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ! ಹಲವು ದಶಕಗಳ ವಾಡಿಕೆಯನ್ನು ಮುರಿದು ಸತತ ಎರಡನೆಯ ಅವಧಿಗೆ ಬೃಹತ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಎಲ್‌ಡಿಎಫ್ ಒಕ್ಕೂಟವು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಹೊರತುಪಡಿಸಿ ಸಂಪೂರ್ಣ ಹೊಸ ಸಚಿವರನ್ನು ಒಳಗೊಂಡಿರಲಿದೆ ಎಂದು ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ. 'ಶೈಲಜಾ ಟೀಚರ್' ಎಂದೇ ಹೆಸರಾಗಿರುವ ಕೆಕೆ ಶೈಲಜಾ ಅವರು, ಈ ಹಿಂದೆ ರಾಜ್ಯದಲ್ಲಿ ನಿಫಾ ವೈರಸ್ ಸೋಂಕು ಕಾಣಿಸಿಕೊಂಡಾಗ, ಆ ಸವಾಲನ್ನು ಸಮರ್ಥವಾಗಿ ನಿರ್ವಹಿಸಿದ ರೀತಿಗಾಗಿ ಮೆಚ್ಚುಗೆ ಗಳಿಸಿದ್ದರು. ಜತೆಗೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ತೆಗೆದುಕೊಂಡಿದ್ದ ನಿರ್ಧಾರಗಳು ಪ್ರಶಂಸೆಗೆ ಒಳಗಾಗಿದ್ದವು. 2020ರಲ್ಲಿ ಬ್ರಿಟನ್ ಮೂಲದ ನಿಯತಕಾಲಿಕೆಯೊಂದರ 'ವರ್ಷದ ಪ್ರಮುಖ ಚಿಂತಕರು' ಪಟ್ಟಿಗೆ ಅವರು ಆಯ್ಕೆಯಾಗಿದ್ದರು. 'ಮುಖ್ಯಮಂತ್ರಿಯ ಹೊರತಾಗಿ ಹಳೆಯ ಎಲ್‌ಡಿಎಫ್ ಸಂಪುಟದ ಯಾರೊಬ್ಬರೂ ಹೊಸ ಸಂಪುಟದಲ್ಲಿ ಇರುವುದಿಲ್ಲ. ಇದು ನಮ್ಮ ಪಕ್ಷದ ನಿರ್ಧಾರ. ಈ ರೀತಿ ಮಾಡುವ ಧೈರ್ಯ ನಮ್ಮ ಪಕ್ಷಕ್ಕೆ ಮಾತ್ರವಿದೆ. ಅನೇಕ ಪ್ರಮುಖರಿಗೆ ಈ ಬಾರಿ ಸ್ಪರ್ಧಿಸಲೂ ಅವಕಾಶ ನೀಡಿರಲಿಲ್ಲ. ನಮಗೆ ಹೊಸ ಮುಖಗಳು ಬೇಕು' ಎಂದು ಸಿಪಿಎಂ ಶಾಸಕ ಎಎನ್ ಶಮ್ಷೀರ್ ತಿಳಿಸಿದ್ದಾರೆ. ಮತ್ತನೂರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶೈಲಜಾ ಟೀಚರ್, ಶೇ 61.97ರಷ್ಟು ಮತಗಳೊಂದಿಗೆ ಸುಮಾರು 60,000 ಮತಗಳ ಅಂತರದಿಂದ ಗೆಲುವು ಕಂಡಿದ್ದರು. ಪಿಣರಾಯಿ ವಿಜಯನ್ ಅವರ ಎರಡನೆಯ ಸರ್ಕಾರವು ಮೇ 20ರಂದು ಪದಗ್ರಹಣ ಮಾಡಲಿದೆ. 21 ಸಚಿವರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ಹೊಸ ಸಚಿವರ ಖಾತೆಗಳನ್ನು ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ ಎಂದು ಎಲ್‌ಡಿಎಫ್ ಸಂಚಾಲಕ ಎ. ವಿಜಯರಾಘವನ್ ತಿಳಿಸಿದ್ದಾರೆ. ಎಲ್‌ಡಿಎಫ್ ಮೈತ್ರಿಕೂಟದ ಅತಿ ದೊಡ್ಡ ಪಕ್ಷವಾದ ಸಿಪಿಎಂ ಹೊಸ ಸಂಪುಟದಲ್ಲಿ 12 ಸಚಿವರನ್ನು ಹೊಂದಿರಲಿದೆ. ಎರಡನೆಯ ದೊಡ್ಡ ಪಕ್ಷ ಸಿಪಿಐ 4, ಕಾಂಗ್ರೆಸ್ (ಎಂ), ಜನತಾದಳ (ಎಸ್) ಮತ್ತು ಎನ್‌ಸಿಪಿ ತಲಾ ಒಂದು ಸಚಿವ ಸ್ಥಾನ ಪಡೆಯಲಿವೆ. ಎಂಬಿ ರಾಜೇಶ್ ಕೇರಳ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗುವ ಸಾಧ್ಯತೆ ಇದೆ. ಪಿಣರಾಯಿ ಸಂಪುಟದಲ್ಲಿ ಮೂವರು ಮಹಿಳೆಯರಿಗೆ ಸ್ಥಾನ ಸಿಗಲಿದೆ ಎನ್ನಲಾಗಿದೆ. ಆದರೆ ಶೈಲಜಾ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಶೈಲಜಾ ಟೀಚರ್ ತಮಗಿಂತಲೂ ಜನಪ್ರಿಯತೆ ಗಳಿಸುತ್ತಿರುವುದನ್ನು ಸಹಿಸಲಾಗದೆ ಅವರನ್ನು ಪಿಣರಾಯಿ ಕೈಬಿಟ್ಟಿದ್ದಾರೆ ಎಂದು ಟೀಕಿಸಲಾಗಿದೆ. ಪಿಣರಾಯಿ ಅಳಿಯ ಮೊಹಮ್ಮದ್ ರಿಯಾಜ್‌ಗೆ ಸಂಪುಟದಲ್ಲಿ ಸ್ಥಾನ ನೀಡಿರುವುದು ಚರ್ಚೆ ಹುಟ್ಟುಹಾಕಿದೆ.