'ಆ ದಿನಗಳು' ಸಿನಿಮಾ ನಟ ಚೇತನ್‌ಗೆ ಬಸವನಗುಡಿ ಠಾಣೆ ಪೊಲೀಸರಿಂದ ನೋಟಿಸ್‌ ಜಾರಿ!

ಬ್ರಾಹ್ಮಣ್ಯ ಹಾಗೂ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಡಿ ನಟ ಚೇತನ್ ಮೇಲೆ ದೂರು ದಾಖಲಾಗಿದೆ. ಅದರ ಜೊತೆಗೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೊಸಪೇಟೆ ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ದಿವಾಕರ್‌ ಕೂಡ ಒತ್ತಾಯಿಸಿದ್ದಾರೆ.

'ಆ ದಿನಗಳು' ಸಿನಿಮಾ ನಟ ಚೇತನ್‌ಗೆ ಬಸವನಗುಡಿ ಠಾಣೆ ಪೊಲೀಸರಿಂದ ನೋಟಿಸ್‌ ಜಾರಿ!
Linkup
ಬೆಂಗಳೂರು: ಬ್ರಾಹ್ಮಣ್ಯ ಹಾಗೂ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಆರೋಪದಡಿ ದಾಖಲಾಗಿರುವ ಪ್ರಕರಣದಲ್ಲಿ ನಟ ಚೇತನ್‌ಗೆ ಠಾಣೆ ಪೊಲೀಸರು ನೋಟಿಸ್‌ ನೀಡಿದ್ದಾರೆ. ವಿಪ್ರ ಯುವ ವೇದಿಕೆ ಅಧ್ಯಕ್ಷ ಪವನ್‌ ಕುಮಾರ್‌ ಶರ್ಮಾ ಎಂಬುವರು ನಟ ಚೇತನ್‌ ವಿರುದ್ಧ ದೂರು ನೀಡಿದ್ದಾರೆ. ಧಾರ್ಮಿಕ ಭಾವನೆ ಕೆರಳಿಸುವುದು ಐಪಿಸಿ 129(ಎ) ಹಾಗೂ ದ್ವೇಷ ಭಾವನೆ ಹೆಚ್ಚಿಸುವ ಐಪಿಸಿ 153 (ಬಿ) ಆರೋಪ-ದಡಿ ಎಫ್‌ಐಆರ್‌ ದಾಖಲಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ''ಪ್ರಕರಣಕ್ಕೆ ಸಂಬಂಧಪಟ್ಟ ವಿಡಿಯೋಗಳನ್ನು ಯೂಟ್ಯೂಬ್‌ ಹಾಗೂ ಫೇಸ್‌ಬುಕ್‌ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಈ ವಿಡಿಯೊಗಳನ್ನು ಯಾವ ಐಡಿಗಳಿಂದ ಅಪ್‌ಲೋಡ್‌ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿ ತನಿಖೆಗೆ ಸಹಕರಿಸಬೇಕು'' ಎಂದು ನೋಟಿಸ್‌ನಲ್ಲಿ ಪೊಲೀಸರು ಕೋರಿದ್ದಾರೆ. ಬುಧವಾರ ಬೆಳಗ್ಗೆ ಬಸವನಗುಡಿ ಠಾಣೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಹೊಸಪೇಟೆ: ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ನಟ ಚೇತನ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ದಿವಾಕರ್‌ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಆಗ್ರಹಿಸಿದ್ದಾರೆ. ಯಾವುದೇ ವ್ಯಕ್ತಿ ಒಂದು ಸಮುದಾಯವನ್ನು ತನ್ನ ವೈಯುಕ್ತಿಕ ದೃಷ್ಟಿಕೋನದಲ್ಲಿ ವಿಮರ್ಶೆ ಮಾಡಿದರೂ ಬಹಿರಂಗವಾಗಿ ಹೇಳಿಕೆ ನೀಡಬೇಕಾದಾಗ ಹತ್ತಾರು ಬಾರಿ ಯೋಚಿಸಬೇಕು. ಯಾವುದೇ ಪೂರ್ವಾಪರ ಯೋಚಿಸದೇ ಹೇಳಿಕೆ ನೀಡಿರುವುದು ಖಂಡನೀಯ ಎಂದಿದ್ದಾರೆ. ಸಂಘದ ಉಪಾಧ್ಯಕ್ಷ ಕೆ.ಪ್ರಭಾಕರ, ಮುದ್ಲಾಪುರ ನಾಗರಾಜ್‌, ಗುರುರಾಜರಾವ್‌, ಶ್ರೀಪಾದರಾವ್‌, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ವೈದ್ಯ, ಕಾರ್ಯದರ್ಶಿ ಲಲಿತಾ ಪ್ರಸಾದ್‌, ಖಚಾಂಚಿ ಅನಂತ ರಮೇಶ್‌ ಅಸಮಾಧಾನ ವ್ಯಕ್ತಪಡಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.