'ಅಯ್ಯೋ ಹೋಗಿ ಸಾರ್, ಇಲ್ಲೇ ಇರ್ತೀವ್ ಸಾರ್, ಜೈಲಲ್ಲೇ ಆರಾಮ್ ಸಾರ್': ಜೈಲಿಂದ ಹೊರ ಬರಲು ಒಪ್ಪದ ಕೈದಿಗಳು!

ಹೊರಗೆ ಕೋವಿಡ್ ಸಾಂಕ್ರಾಮಿಕದ ಅಪಾಯ ಹೆಚ್ಚುತ್ತಿರುವದ ಹಿನ್ನೆಲೆಯಲ್ಲಿ ತಾವು ಜೈಲಿನಲ್ಲಿಯೇ ಹೆಚ್ಚು ಸುರಕ್ಷಿತ ಹಾಗೂ ಆರೋಗ್ಯದಿಂದ ಇದ್ದೇವೆ. ಹೀಗಾಗಿ ಪೆರೋಲ್ ಮೇಲೆ ಬಿಡುಗಡೆ ಮಾಡುವುದು ಬೇಡ ಎಂಬುದಾಗಿ ಕೈದಿಗಳು ಮನವಿ ಮಾಡಿದ್ದಾರೆ.

'ಅಯ್ಯೋ ಹೋಗಿ ಸಾರ್, ಇಲ್ಲೇ ಇರ್ತೀವ್ ಸಾರ್, ಜೈಲಲ್ಲೇ ಆರಾಮ್ ಸಾರ್': ಜೈಲಿಂದ ಹೊರ ಬರಲು ಒಪ್ಪದ ಕೈದಿಗಳು!
Linkup
ಲಕ್ನೋ: ಕನ್ನಡದ 'ಕುರಿಗಳು ಸಾರ್ ಕುರಿಗಳು' ಚಿತ್ರದಲ್ಲಿ ಬಿಟ್ಟು ಹೊರಗೆ ಹೋಗಲು ಒಪ್ಪದ ಕೈದಿಗಳ ಸನ್ನಿವೇಶ, ಹಾಡು ಇದೆ. ಹೊರಗಿನ ಕಷ್ಟಕ್ಕಿಂತ ಜೈಲೇ ಆರಾಮು ಎನ್ನುವ ಹಾಡಿದು. ಸಿನಿಮಾದ ಸನ್ನಿವೇಶ ಈಗ ನಿಜವೂ ಆಗಿದೆ. ಜೈಲಿನಿಂದ ಹೊರಗೆ ಬರಬೇಕೆಂದು ಏನೆಲ್ಲ ಕಸರತ್ತು ಪಡುವ ಕೈದಿಗಳ ನಡುವೆ, ಈಗ ನಾವು ಜೈಲಲ್ಲೇ ಇರ್ತೀವಿ, ಹೊರಗೆ ಬಿಡಬೇಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದ 9 ಕಾರಾಗೃಹಗಳಲ್ಲಿನ 21 ಜೈಲಿನ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಜೈಲಿನಲ್ಲಿಯೇ ಇರುವುದು ಹೆಚ್ಚು ಸುರಕ್ಷಿತ ಮತ್ತು ಆರೋಗ್ಯಕಾರಿ. ಹೀಗಾಗಿ ನಮಗೆ ಬೇಡ ಎಂದು ಮನವಿ ಮಾಡಿದ್ದಾರೆ. ಘಾಜಿಯಾಬಾದ್, ಗೌತಮ್ ಬುದ್ಧ ನಗರ, ಮೀರತ್, ಮಹಾರಾಜಗಂಜ್, ಗೋರಖ್‌ಪುರ ಮತ್ತು ಲಕ್ನೋ ಸೇರಿದಂತೆ 9 ಜೈಲುಗಳಲ್ಲಿನ ಕೈದಿಗಳು ಈ ಮನವಿ ಸಲ್ಲಿಸಿದ್ದಾರೆ ಎಂದು ಕಾರಾಗೃಹ ಆಡಳಿತದ ಪ್ರಧಾನ ನಿರ್ದೇಶಕ ಆನಂದ್ ಕುಮಾರ್ ತಿಳಿಸಿದ್ದಾರೆ. ಅವರು ಹೊರಗೆ ಹೋದರೆ ಜೈಲಿನಲ್ಲಿ ಸಿಗುತ್ತಿರುವ ಆಹಾರ ಮತ್ತು ಇತರೆ ಆರೋಗ್ಯ ಸೇವೆಗಳು ಅವರಿಗೆ ಸಿಗುವುದಿಲ್ಲ. ಜತೆಗೆ 90 ದಿನಗಳ ಸಮಯ ಪೆರೋಲ್ ದೊರಕಿದರೆ ಅದು ಶಿಕ್ಷೆಯ ಅವಧಿಗೆ ಸೇರಿಕೊಳ್ಳುತ್ತದೆ ಎನ್ನುವುದು ಕೂಡ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. 'ಜೈಲಿನಲ್ಲಿ ಕೈದಿಗಳ ಆರೋಗ್ಯ ತಪಾಸಣೆಯನ್ನು ನಿರಂತರವಾಗಿ ಮಾಡಲಾಗುತ್ತದೆ. ಅವರಿಗೆ ಸಮಯಕ್ಕೆ ಸರಿಯಾಗಿ ಆಹಾರ ಸಿಗುತ್ತದೆ. ಹೀಗಾಗಿ ಜೈಲಿನಲ್ಲಿ ಅವರು ಸುರಕ್ಷಿತ ಹಾಗೂ ಆರೋಗ್ಯದಿಂದ ಇರುತ್ತಾರೆ. ಕೈದಿಗಳು ಒಮ್ಮೆ ಜೈಲಿನಿಂದ ಹೊರಹೋದ ಬಳಿಕ ಜೀವಿಸಲು ಬೇಕಾದ ಸಂಪಾದನೆಗೆ ಹೆಣಗಾಡಬೇಕಾಗುತ್ತದೆ' ಎಂದು ಅವರು ವಿವರಿಸಿದ್ದಾರೆ. ದೇಶದ ಅನೇಕ ಜೈಲುಗಳು ಕೈದಿಗಳಿಂದ ತುಂಬಿಕೊಂಡಿವೆ. ಈ ಸಂದರ್ಭದಲ್ಲಿ ಜೈಲುಗಳಲ್ಲಿನ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡಬೇಕು. ಕೈದಿಗಳ ಅಪರಾಧ ಪ್ರಮಾಣಕ್ಕೆ ಅನುಗುಣವಾಗಿ ಅವರಿಗೆ ಪೆರೋಲ್ ನೀಡುವ ಕಾರ್ಯ ಆರಂಭಿಸಬೇಕು ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು. ಉನ್ನತ ಅಧಿಕಾರ ಸಮಿತಿ ಶಿಫಾರಸಿನ ಅನ್ವಯ ಸಾವಿರಾರು ಕೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ.