Cyclone Gulab: ಗುಲಾಬ್ ಚಂಡಮಾರುತದ ಅಬ್ಬರಕ್ಕೆ ಇಬ್ಬರು ಮೀನುಗಾರರ ಸಾವು

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಗುಲಾಬ್ ಚಂಡಮಾರುತವು ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ಭಾಗಗಳನ್ನು ಪ್ರವೇಶಿಸಿದ್ದು, ಆಂಧ್ರದ ಶ್ರೀಕಾಕುಳಂನಲ್ಲಿ ದೋಣಿ ಮಗುಚಿದ ಪರಿಣಾಮ ಇಬ್ಬರು ಮೀನುಗಾರರು ಮೃತಪಟ್ಟಿದ್ದಾರೆ.

Cyclone Gulab: ಗುಲಾಬ್ ಚಂಡಮಾರುತದ ಅಬ್ಬರಕ್ಕೆ ಇಬ್ಬರು ಮೀನುಗಾರರ ಸಾವು
Linkup
ಹೊಸದಿಲ್ಲಿ: ಸಮುದ್ರದಿಂದ ಸೃಷ್ಟಿಯಾದ ಆಂಧ್ರಪ್ರದೇಶ ಮತ್ತು ಕರಾವಳಿ ಪ್ರದೇಶಗಳಿಗೆ ತಲುಪಿದೆ. ಗಾಳಿ ಮಳೆಯ ಹೊಡೆತಕ್ಕೆ ಆಂಧ್ರಪ್ರದೇಶದ ಇಬ್ಬರು ಮೀನುಗಾರರು ಬಲಿಯಾಗಿದ್ದಾರೆ. ಒಬ್ಬ ಮೀನುಗಾರ ನಾಪತ್ತೆಯಾಗಿದ್ದಾರೆ. ಚಂಡಮಾರುತದ ಹಿನ್ನೆಲೆಯಲ್ಲಿ ಮೀನುಗಾರರು ಆಳ ಸಮುದ್ರಕ್ಕೆ ಇಳಿಯದಂತೆ ಶನಿವಾರವೇ ಎಚ್ಚರಿಕೆ ನೀಡಲಾಗಿತ್ತು. ಆದರೆ ಆಂಧ್ರಪ್ರದೇಶದ ಉತ್ತರ ಕರಾವಳಿಯ ಶ್ರೀಕಾಕುಳಂನ ಆರು ಮೀನುಗಾರರು ಸಮುದ್ರಕ್ಕೆ ದೋಣಿಯೊಂದರಲ್ಲಿ ಇಳಿದಿದ್ದರು. ಗಾಳಿಯ ರಭಸಕ್ಕೆ ದೋಣಿ ನಿಯಂತ್ರಣ ತಪ್ಪಿ ಉರುಳಿದೆ. ಮೂವರು ಈಜಿ ತೀರಕ್ಕೆ ಸುರಕ್ಷಿತವಾಗಿ ತಲುಪಿದ್ದಾರೆ. ಇಬ್ಬರು ಮೃತಪಟ್ಟಿದ್ದರೆ, ಒಬ್ಬ ಮೀನುಗಾರ ಇನ್ನೂ ಪತ್ತೆಯಾಗಿಲ್ಲ. ಮೀನುಗಾರಿಕೆ ಸಚಿವಾಲಯವು ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ಉತ್ತರ ಮತ್ತು ದಕ್ಷಿಣ ಒಡಿಶಾ ಕರಾವಳಿಗಳನ್ನು ಗುಲಾಬ್ ಚಂಡಮಾರುತ ಹಾದು ಹೋಗಿದೆ. ಕಳಿಂಗಪಟ್ಟಣಂನ 20 ಕಿಮೀ ಉತ್ತರ ಭಾಗದಲ್ಲಿ ರಾತ್ರಿ 8.30ರ ವೇಳೆಗೆ ಚಂಡಮಾರುತ ಕ್ರಮಿಸಿದೆ. ಚಂಡಮಾರುತದ ಅಪ್ಪಳಿಸುವಿಕೆ ಸಂಜೆ ಆರು ಗಂಟೆ ವೇಳೆಗೆ ಕರಾವಳಿ ಭಾಗದಲ್ಲಿ ಆರಂಭವಾಗಿದೆ. ಮುಂದಿನ ಆರು ಗಂಟೆಗಳಲ್ಲಿ ಚಂಡಮಾರುತ ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಕಳಿಂಗಪಟ್ಟಣಂ ಭಾಗದಲ್ಲಿ ಭಾರಿ ವೇಗದ ಗಾಳಿ ಜನರನ್ನು ನಡುಗಿಸಿದೆ. ಗಂಟೆಗೆ 90-100 ಕಿಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ. ಚಂಡಮಾರುತವು ಪೂರ್ವ ದಿಕ್ಕಿನತ್ತ ಸಾಗುವ ಸಾಧ್ಯತೆ ಇದ್ದು, ಮಹಾರಾಷ್ಟ್ರದ ಎಲ್ಲ 36 ಜಿಲ್ಲೆಗಳಲ್ಲಿಯೂ ಸೋಮವಾರ ಮತ್ತು ಮಂಗಳವಾರ ವಿಪರೀತ ಮಳೆಯಾಗಬಹುದು. ಚಂದ್ರಾಪುರದಲ್ಲಿ ಸೋಮವಾರದ ಮಟ್ಟಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಡಿಶಾ, ಉತ್ತರ ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಆರ್ಭಟಿಸುವ ಸಾಧ್ಯತೆ ಇದೆ. ಒಡಿಶಾ ಹಾಗೂ ಆಂಧ್ರಪ್ರದೇಶಗಳಿಗೆ ಎಲ್ಲ ಅಗತ್ಯ ನೆರವುಗಳನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.