Chennai Rains: ಭಾರಿ ಮಳೆ ನಡುವೆ ಪ್ರವಾಹದ ಎಚ್ಚರಿಕೆ, ಮೂರು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ

ತಮಿಳುನಾಡಿನ ಚೆನ್ನೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಮಂಗಳಬವಾರ ಮತ್ತು ಬುಧವಾರ ಕೂಡ ವ್ಯಾಪಕ ಮಳೆಯ ಎಚ್ಚರಿಕೆ ನೀಡಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಶಾಲೆಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.

Chennai Rains: ಭಾರಿ ಮಳೆ ನಡುವೆ ಪ್ರವಾಹದ ಎಚ್ಚರಿಕೆ, ಮೂರು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ
Linkup
ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತದ ಸನ್ನಿವೇಶದಿಂದಾಗಿ ತಮಿಳುನಾಡಿನ ಅನೇಕ ಭಾಗಗಳಲ್ಲಿ ಧಾರಾಕಾರ ಸುರಿಯುತ್ತಿದೆ. ಹಾಗೂ ಇತರೆ ಮೂರು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ಮುಂದಿನ ಎರಡು ದಿನಗಳವರೆಗೆ ರಜೆ ಘೋಷಿಸಲಾಗಿದೆ. ತಮಿಳುನಾಡಿನ ಉತ್ತರ ಕರಾವಳಿಯ ಅನೇಕ ಭಾಗಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯ ಮುನ್ನೆಚ್ಚರಿಕೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅಡ್ಯಾರ್ ನದಿ ತೀರದಲ್ಲಿರುವ ಕಾಂಚಿಪುರಂ ಮತ್ತು ಚೆಂಗಲ್ಪಟ್ಟುಗಳಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ತಿರುವಳ್ಳೂರ್, ಚೆಂಗಲ್ಪಟ್ಟು ಮತ್ತು ಕಾಂಚಿಪುರಂ ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ಎಗ್ಮೋರ್, ಪಾಡಿ ಬ್ರಿಡ್ಜ್ ಮತ್ತ ಜವಾಹರ ನಗರ ಸೇರಿದಂತೆ 14 ಜಲಾವೃತ ಪ್ರದೇಶಗಳಿಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜತೆಗೆ ಮಳೆಯಿಂದ ಹೆಚ್ಚು ಹಾನಿಯಾಗುವ ಅಪಾಯವಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಚಂಡಮಾರುತದಿಂದಾಗಿ ಉತ್ತರ ಕರಾವಳಿ ಪ್ರದೇಶದ ಅಲ್ಲಲ್ಲಿ ಭಾನುವಾರವಿಡೀ ಭಾರಿಯಿಂದ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಭಾನುವಾರ ರಾತ್ರಿ ಬಳಿಕ ಮಳೆಯ ಪ್ರಮಾಣ ಕೊಂಚ ಇಳಿಕೆಯಾಗಬಹುದು. ಆದರೆ ಮಂಗಳವಾರ ಹಾಗೂ ಬುಧವಾರ ಮತ್ತಷ್ಟು ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೂಚನೆ ನೀಡಿದೆ. ಚೆನ್ನೈ ಸುತ್ತಮುತ್ತಲೂ ಇರುವ ಜಲಾಶಯಗಳು ಭರ್ತಿಯಾಗುತ್ತಿವೆ. ಚೆಂಬಾರಂಬಕ್ಕಂ ಜಲಾಶಯದಿಂದ ನೀರು ಹೊರಬಿಡಲಾಗುತ್ತಿದೆ. 85.4 ಅಡಿ ಎತ್ತರದ ಜಲಾಶಯದಲ್ಲಿ ಈಗ 82.35 ಅಡಿಗಳಷ್ಟು ನೀರು ಭರ್ತಿಯಾಗಿದೆ. ಚೆಂಬಾರಂಬಕ್ಕಂ ಜಲಾಶಯದಿಂದ ಹೆಚ್ಚುವರಿ ನೀರನ್ನು ಏಕಾಏಕಿ ಬಿಡುಗಡೆ ಮಾಡಿದ್ದ ಪರಿಣಾಮವೇ 2015ರಲ್ಲಿ ಚೆನ್ನೈ ಪ್ರವಾಹದಿಂದ ಮುಳುಗಿ ಹೋಗಿತ್ತು. ಈಗ ಬಿಡುಗಡೆ ಮಾಡುತ್ತಿರುವ ಸಾಮಾನ್ಯ ನೀರಿನ ಪ್ರಮಾಣದಿಂದ ಯಾವುದೇ ಹಾನಿಯಾಗುವುದಿಲ್ಲ. ಆದರೆ ಇನ್ನಷ್ಟು ಮಳೆ ಸುರಿದರೆ ಮುದುಚೂರ್‌ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತವಾಗುವ ಅಪಾಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಮನವಿ ಮೇರೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲು ನಾಲ್ಕು ತಂಡಗಳನ್ನು ನಿಯೋಜನೆ ಮಾಡಿದೆ. ಚೆನ್ನೈ ಹಾಗೂ ಅದರ ಸುತ್ತಲಿನ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈವರೆಗೂ ಸುಮಾರು 81 ಮಂದಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.