Bangalore Traffic Jam: ಏಕಕಾಲಕ್ಕೆ ಹಲವು ಕಾಮಗಾರಿ: ಇನ್ನೂ ಒಂದು ವಾರ ಬೆಂಗಳೂರು ನಗರದಲ್ಲಿ ಟ್ರಾಫಿಕ್‌ ಜಾಮ್‌..!

ಲಾಕ್‌ಡೌನ್‌ನ ಒಂದೂವರೆ ತಿಂಗಳ ಅವಧಿಯಲ್ಲೇ ಕಾಮಗಾರಿ ಪೂರ್ಣಗೊಳಿಸಿದ್ದರೆ, ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಸದ್ಯ ಕಾಮಗಾರಿ ಪ್ರಗತಿಯಲ್ಲಿದ್ದು, ಸಾರ್ವಜನಿಕರು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಹಾಕಿಕೊಂಡು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Bangalore Traffic Jam: ಏಕಕಾಲಕ್ಕೆ ಹಲವು ಕಾಮಗಾರಿ: ಇನ್ನೂ ಒಂದು ವಾರ ಬೆಂಗಳೂರು ನಗರದಲ್ಲಿ ಟ್ರಾಫಿಕ್‌ ಜಾಮ್‌..!
Linkup
: ಕೋವಿಡ್‌ ಸೋಂಕಿನ ಎರಡನೇ ಅಲೆಗೆ ಕಡಿವಾಣ ಹಾಕಲು ಹೇರಿದ್ದ ಲಾಕ್‌ಡೌನ್‌ ತೆರವಿನ ಬಳಿಕ ನಗರದಲ್ಲಿ ನಿತ್ಯ ಲಕ್ಷಾಂತರ ವಾಹನಗಳು ರಸ್ತೆಗಿಳಿಯುತ್ತಿದ್ದು, ಎಲ್ಲೆಡೆ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಇದಲ್ಲದೆ, ವೈಟ್‌ ಟಾಪಿಂಗ್‌, ಟೆಂಡರ್‌ ಶ್ಯೂರ್‌ ಕಾಮಗಾರಿಗಳಿಂದಾಗಿ ಕಿ.ಮೀ.ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಸಿಲಿಕಾನ್‌ ಸಿಟಿಯ ಮೂರು ದಿಕ್ಕುಗಳಿಂದ ಸಾಗರೋಪಾದಿಯಲ್ಲಿ ಸಾಗಿ ಬರುವ ವಾಹನಗಳು ಜಂಕ್ಷನ್‌ನಲ್ಲಿ ಸೇರುತ್ತವೆ. ರಾಜಧಾನಿಗೆ ಪ್ರವೇಶ ಕಲ್ಪಿಸುವ ಪ್ರಮುಖ ಪ್ರವೇಶ ದ್ವಾರವೆನಿಸಿರುವ ಈ ಜಂಕ್ಷನ್‌, ಸದಾ ದಟ್ಟಣೆಯಿಂದ ಕೂಡಿರುತ್ತದೆ. ಈ ಜಂಕ್ಷನ್‌ನಿಂದ ಮೈಸೂರು , ಕೆ.ಆರ್‌.ಮಾರುಕಟ್ಟೆಯತ್ತ ಸಾಗುವ ಎನ್‌.ಆರ್‌.ರಸ್ತೆ ಮಾರ್ಗದಲ್ಲಿ ಬಿಬಿಎಂಪಿಯು ವೈಟ್‌ ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಂಡಿದೆ. ಇದರಿಂದ ಸುತ್ತಮುತ್ತಲ ರಸ್ತೆಗಳಲ್ಲಿ ಟ್ರಾಫಿಕ್‌ಜಾಮ್‌ ಉಂಟಾಗುತ್ತಿದ್ದು, ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ರಿಚ್ಮಂಡ್‌ ಸರ್ಕಲ್‌ನಿಂದಲೇ ಟ್ರಾಫಿಕ್‌ ಜಾಮ್‌ ಕಂಡುಬರುತ್ತಿದ್ದು, ಪ್ರಯಾಣಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಪುರಭವನ ಮುಂಭಾಗದ ಸಬ್‌ವೇಯಿಂದ ಕೆ.ಆರ್‌.ಮಾರುಕಟ್ಟೆವರೆಗೆ ವೈಟ್‌ ಟಾಪಿಂಗ್‌ ಕಾಮಗಾರಿ ಕೈಗೊಳ್ಳಲಾಗಿದೆ. ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆವರೆಗೆ ಒಂದು ಪಾರ್ಶ್ವದಲ್ಲಿ ಮಾತ್ರ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮತ್ತೊಂದು ಪಾರ್ಶ್ವದಲ್ಲಿ ಕೆಲಸ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಆ ಬಳಿಕ ಒಂದು ವಾರ ಕ್ಯೂರಿಂಗ್‌ ಮಾಡಬೇಕಿದ್ದು, ಅಲ್ಲಿಯವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹಾಗಾಗಿ, ಸವಾರರು ಒಂದು ವಾರದವರೆಗೆ ಟ್ರಾಫಿಕ್‌ ನರಕ ವ್ಯೂಹದಲ್ಲಿ ಸಿಲುಕಿ ಒದ್ದಾಡುವುದು ಅನಿವಾರ್ಯವಾಗಲಿದೆ. ಎನ್‌. ಆರ್‌. ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಪ್ರವೇಶ ದ್ವಾರದಲ್ಲಿ ಮಳೆ ಬಂದಾಗ ಉಂಟಾಗುತ್ತಿದ್ದ ಪ್ರವಾಹ ಸಮಸ್ಯೆ ನಿವಾರಣೆಗೆ ಲಾಕ್‌ಡೌನ್‌ ಅವಧಿಯಲ್ಲೇ ಚರಂಡಿ ದುರಸ್ತಿ ಕಾಮಗಾರಿ ಕೈಗೊಳ್ಳಲಾಯಿತು. ಈ ಕೆಲಸವು ಕುಂಟುತ್ತಾ ಸಾಗಿದ್ದರಿಂದ ವೈಟ್‌ ಟಾಪಿಂಗ್‌ ಕಾಮಗಾರಿ ಕೈಗೊಳ್ಳುವಲ್ಲಿ ವಿಳಂಬವಾಯಿತು. ಲಾಕ್‌ಡೌನ್‌ನ ಒಂದೂವರೆ ತಿಂಗಳ ಅವಧಿಯಲ್ಲೇ ಕಾಮಗಾರಿ ಪೂರ್ಣಗೊಳಿಸಿದ್ದರೆ, ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಸದ್ಯ ಕಾಮಗಾರಿ ಪ್ರಗತಿಯಲ್ಲಿದ್ದು, ಸಾರ್ವಜನಿಕರು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಹಾಕಿಕೊಂಡು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಏಕಕಾಲದಲ್ಲಿ ವೈಟ್‌ ಟಾಪಿಂಗ್‌, ಟೆಂಡರ್‌ ಶ್ಯೂರ್‌ ಮತ್ತು ಕೆ.ಆರ್‌.ಮಾರುಕಟ್ಟೆ ಜಂಕ್ಷನ್‌ ಅಭಿವೃದ್ಧಿ ಕಾಮಗಾರಿ ಆರಂಭಿಸಿರುವುದೇ ವಾಹನ ದಟ್ಟಣೆ ಉಂಟಾಗಲು ಪ್ರಮುಖ ಕಾರಣವಾಗಿದೆ. ಇದರಿಂದ ಪುರಭವನದಿಂದ ಮಿನರ್ವ ವೃತ್ತ, ಕೆ.ಆರ್‌.ವೃತ್ತ ಮತ್ತು ಕೆ.ಆರ್‌.ಮಾರುಕಟ್ಟೆಯವರೆಗೆ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ. ಬೆಳಗ್ಗೆ ಮತ್ತು ಸಂಜೆ ವೇಳೆ ತಾಸುಗಟ್ಟಲೆ ಸವಾರರು ಹೈರಾಣಾಗುತ್ತಿದ್ದಾರೆ. ವೈಟ್‌ ಟಾಪಿಂಗ್‌ನಿಂದ ಎನ್‌.ಆರ್‌.ರಸ್ತೆ ಕಿರಿದಾಗಿರುವುದರಿಂದ ಜೆ.ಸಿ.ರಸ್ತೆ, ಕೆ. ಆರ್‌. ಮಾರುಕಟ್ಟೆ ರಸ್ತೆ, ಹಡ್ಸನ್‌ ವೃತ್ತ, ನೃಪತುಂಗ ರಸ್ತೆ, ಕೆ.ಜಿ.ರಸ್ತೆ, ರಾಜಾರಾಂ ಮೋಹನ್‌ರಾಯ್‌ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಅಧಿಕ ವಾಹನ ದಟ್ಟಣೆ ಉಂಟಾಗುತ್ತಿದೆ. ಕೆ. ಆರ್‌. ಮಾರುಕಟ್ಟೆ ಜಂಕ್ಷನ್‌ನಿಂದ ಪುರಭವನ ಕಡೆಗಿನ ಮಸೀದಿವರೆಗೆ ಮತ್ತು ಕಲಾಸಿಪಾಳ್ಯ ಕಡೆಗೆ ವೈಟ್‌ ಟಾಪಿಂಗ್‌ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೆ. ಆರ್‌. ಮಾರುಕಟ್ಟೆ ಜಂಕ್ಷನ್‌ ಮತ್ತು ಅವೆನ್ಯೂ ರಸ್ತೆಯನ್ನು ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಹೀಗಾಗಿ, ಅವೆನ್ಯೂ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಹೀಗಾಗಿ, ಮೆಜೆಸ್ಟಿಕ್‌ ಕಡೆ ಸಂಚರಿಸಬೇಕಾದವರು ಪುರಭವನದ ಮೂಲಕವೇ ತೆರಳಬೇಕಾಗಿದೆ. ಪರಿಣಾಮ, ಟೌನ್‌ಹಾಲ್‌ ಮುಂಭಾಗ ಟ್ರಾಫಿಕ್‌ಜಾಮ್‌ ಆಗುತ್ತಿದೆ. ವಾರದಲ್ಲಿ ಕಾಮಗಾರಿ ಪೂರ್ಣ: 'ಎನ್‌. ಆರ್‌. ರಸ್ತೆಯು 18 ಮೀಟರ್‌ನಷ್ಟು ಅಗಲವಿದ್ದು, ಒಂದು ಪಾರ್ಶ್ವದಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಮತ್ತೊಂದು ಪಾರ್ಶ್ವದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಬುಧವಾರ ಮುಗಿಯಲಿದೆ. ಒಂದು ವಾರ ಕಾಲ ಕ್ಯೂರಿಂಗ್‌ಗೆ ಸಮಯ ಬೇಕಿದೆ. ಆನಂತರ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗುವುದು. ವಾರಾಂತ್ಯದ ಕರ್ಫ್ಯೂ ವೇಳೆ ಮೇಲ್ಸೇತುವೆಯ ಪ್ರವೇಶ ದ್ವಾರದಿಂದ ಮಸೀದಿವರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು' ಎಂದು ಬಿಬಿಎಂಪಿಯ ಯೋಜನೆ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು. ಪರ್ಯಾಯ ರಸ್ತೆ ಬಳಸುವುದು ಉತ್ತಮ: ವಾಹನ ಸವಾರರು ಟ್ರಾಫಿಕ್‌ ಜಾಮ್‌ನಿಂದ ಪಾರಾಗಲು ಪರ್ಯಾಯ ಮಾರ್ಗಗಳಲ್ಲಿ ಓಡಾಡುವುದು ಉತ್ತಮ. ಕೆ. ಆರ್‌. ವೃತ್ತ, ಹಡ್ಸನ್‌ ವೃತ್ತದ ಕಡೆಯಿಂದ ಮೈಸೂರು ರಸ್ತೆ, ಚಾಮರಾಜಪೇಟೆ, ಮಾರುಕಟ್ಟೆಯತ್ತ ತೆರಳುವವರು ಲಾಲ್‌ಬಾಗ್‌ ಮಾರ್ಗವಾಗಿ ಮಿನರ್ವ ವೃತ್ತ, ಕಿಮ್ಸ್‌, ಮಕ್ಕಳ ಕೂಟ ಮಾರ್ಗವಾಗಿ ಸಂಚರಿಸಬಹುದಾಗಿದೆ.