ಚುನಾವಣೆ ಹತ್ತಿರ ಬರುತ್ತಿದ್ದಂತೆ ಉ.ಪ್ರದೇಶದಲ್ಲಿ ಅಭಿವೃದ್ಧಿ ಮಂತ್ರ ಶುರು ಮಾಡಿದ ಆದಿತ್ಯನಾಥ್

ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಏರಲು ತಂತ್ರ ರೂಪಿಸುತ್ತಿದ್ದಾರೆ. 20 ಕೋಟಿಗೂ ಅಧಿಕ ಜನಸಂಖ್ಯೆ ಇರುವ ಉತ್ತರ ಪ್ರದೇಶದಲ್ಲಿ ಚುನಾವಣೆ ಹತ್ತಿರ ಬರುತ್ತಲೇ ಜಾತಿ ಲೆಕ್ಕಾಚಾರ ಜೋರಾಗುತ್ತದೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಉ.ಪ್ರದೇಶದಲ್ಲಿ ಅಭಿವೃದ್ಧಿ ಮಂತ್ರ ಶುರು ಮಾಡಿದ ಆದಿತ್ಯನಾಥ್
Linkup
ಲಖನೌ: 20 ಕೋಟಿಗೂ ಅಧಿಕ ಜನಸಂಖ್ಯೆ ಇರುವ ಉತ್ತರ ಪ್ರದೇಶದಲ್ಲಿ ಚುನಾವಣೆ ಹತ್ತಿರ ಬರುತ್ತಲೇ ಜಾತಿ ಲೆಕ್ಕಾಚಾರ ಜೋರಾಗುತ್ತದೆ. ಆದರೆ, ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಏರಲು ತಂತ್ರ ರೂಪಿಸುತ್ತಿದ್ದಾರೆ. ಲಖನೌನಿಂದ ಘಾಜಿಪುರವರೆಗಿನ ಪೂರ್ವಾಂಚಲ ಎಕ್ಸ್‌ಪ್ರೆಸ್‌ ವೇಗೆ ಸೆ.1ರಂದು ಚಾಲನೆ ನೀಡಲಾಗುತ್ತದೆ. ಇದೇ ವರ್ಷಾಂತ್ಯದ ವೇಳೆಗೆ ಕಾನ್ಪುರ ಮೆಟ್ರೋ ಆರಂಭಿಸುವ ಯೋಜನೆ ಇದೆ. ನೋಯ್ಡಾ ವಿಮಾನ ನಿಲ್ದಾಣ ಹಾಗೂ ಗಂಗಾ ಎಕ್ಸ್‌ಪ್ರೆಸ್‌ವೇನಂತಹ ಬೃಹತ್‌ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಕರೆಸುವ ಚಿಂತನೆ ಇದೆ. ಇವೆಲ್ಲ ಯೋಜನೆಗಳನ್ನು ನೋಡಿದರೆ ಬಿಜೆಪಿ ಈ ಬಾರಿ ರಾಜ್ಯದಲ್ಲಿ ನಡೆಯುವ ಚುನಾವಣೆಯನ್ನು ಅಭಿವೃದ್ಧಿ ಯೋಜನೆಗಳ ಮೂಲಕ ಗೆಲ್ಲಲು ಯೋಜನೆ ರೂಪಿಸುತ್ತಿದೆ. ಇದನ್ನೇ ಚುನಾವಣೆ ತಂತ್ರವನ್ನಾಗಿ ಮಾಡಿಕೊಳ್ಳುತ್ತದೆ ಎನ್ನಲಾಗುತ್ತಿದೆ. ಮಾಯಾವತಿಯವರು ಮುಖ್ಯಮಂತ್ರಿಯಾಗಿದ್ದಾಗ 2012ರವರೆಗೆ ಯಮುನಾ ಎಕ್ಸ್‌ಪ್ರೆಸ್‌ವೇ ಜಾರಿಗೊಳಿಸುವ ಜತೆಗೆ ಅಂಬೇಡ್ಕರ್‌ ಮೆಮೋರಿಯಲ್‌ ಪಾರ್ಕ್, ದಲಿತ ಪ್ರೇರಣಾ ಸ್ಥಳ ನಿರ್ಮಿಸಿ ಮತ ಲೆಕ್ಕಾಚಾರ ಮೆರೆದರು. ಆದರೆ, 2017ರ ಚುನಾವಣೆ ವೇಳೆಗೆ ಜಾತಿ ಜತೆಗೆ ಅಭಿವೃದ್ಧಿ ಯೋಜನೆಗಳನ್ನೂ ಚುನಾವಣೆ ಕಾರ್ಯತಂತ್ರವಾಗಿ ಬಳಸಲು ಆರಂಭಿಸಲಾಯಿತು. ಹಾಗಾಗಿಯೇ 2017ರ ಚುನಾವಣೆ ವೇಳೆ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್‌ ಯಾದವ್‌, 'ಕೆಲಸವೇ ಮಾತನಾಡುತ್ತದೆ' (ಕಾಮ್‌ ಬೋಲ್ತಾ ಹೈ)' ಎಂಬ ಘೋಷಣೆ ಮೂಲಕ ಸ್ಪರ್ಧೆಗೆ ಇಳಿದರು. ಆ ಮೂಲಕ ಜಾತಿ ಜತೆಗೆ ಕೆಲಸವೂ ಜನರಿಗೆ ತಿಳಿಸಲು ಯತ್ನಿಸಿದರು. ಇದೇ ತಂತ್ರವನ್ನು ಈಗ ಬಿಜೆಪಿಯು ಪೂರ್ಣವಾಗಿ ಬಳಸಲು ಮುಂದಾಗಿದ್ದು, ಇದಕ್ಕೆ ಪ್ರತಿಪಕ್ಷಗಳು ಯಾವ ರೀತಿ ಸೆಡ್ಡೊಡೆಯುತ್ತವೆ ಎಂಬುದು ಕುತೂಹಲ ಮೂಡಿಸಿದೆ.