![](https://vijaykarnataka.com/photo/87822683/photo-87822683.jpg)
ಹೊಸದಿಲ್ಲಿ: ಕೃಷಿ ಕಾಯಿದೆಗಳ ವಿರುದ್ಧ ಕಾಂಗ್ರೆಸ್ ನಾಯಕ ನಡೆಸಿದ್ದ ಹೋರಾಟಕ್ಕೆ ವರ್ಷ ತುಂಬುವುದರೊಳಗೆ ಗೆಲುವು ದಕ್ಕಿದೆ. ಇದರಿಂದ ಅವರು ಮತ್ತಷ್ಟು ಪ್ರಬಲರಾಗಲಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
2020ರಲ್ಲಿ ಕೃಷಿ ಕಾಯಿದೆಗಳು ಸಂಸತ್ತಿನಲ್ಲಿ ಅಂಗೀಕಾರಗೊಂಡ ದಿನವೇ ರಾಹುಲ್ ಗಾಂಧಿ ಇದರ ಬಗ್ಗೆ ಅಪಸ್ವರ ಎತ್ತಿದ್ದರು. "ಈ ರೈತ ವಿರೋಧಿ ಕಾಯಿದೆಗಳು ರದ್ದಾಗಬೇಕು," ಎಂದು ಪಟ್ಟು ಹಿಡಿದಿದ್ದರು. ರೈತ ಪ್ರತಿಭಟನೆಯ ಜತೆಗೆ ಆರಂಭದಿಂದಲೂ ಪ್ರತಿಪಕ್ಷಗಳು, ಕಾಂಗ್ರೆಸ್ ಬೆಂಬಲಕ್ಕೆ ನಿಂತವು. ಅಂತಿಮವಾಗಿ ಗುರುನಾನಕ್ ಜಯಂತಿ ದಿನ ಪ್ರಧಾನಿ ನರೇಂದ್ರ ಮೋದಿ ಅವರು ವಿವಾದಗ್ರಸ್ತ ಕಾಯಿದೆಗಳನ್ನು ರದ್ದುಪಡಿಸುವ ಘೋಷಣೆ ಮಾಡಿದ್ದಾರೆ. ಗೆಲುವಿನ ಹುಮ್ಮಸ್ಸಿನಲ್ಲಿರುವ ಪ್ರತಿಪಕ್ಷ ನಾಯಕರು ಇನ್ನು ಮುಂದೆ 'ಬೀದಿ ರಾಜಕಾರಣ'ವನ್ನು ಇನ್ನಷ್ಟು ಜೋರು ಮಾಡಿ ಬಿಜೆಪಿಯನ್ನು ಮತ್ತಷ್ಟು ಸತಾಯಿಸುವ ಸಾಧ್ಯತೆ ಇದೆ.
2015ರಲ್ಲೂ ಭೂ ಸ್ವಾಧೀನ ಕಾಯಿದೆ ವಿರುದ್ಧ ರಾಹುಲ್ ಗಾಂಧಿ ಇಂತಹದ್ದೇ ಹೋರಾಟ ನಡೆಸಿ ಯಶಸ್ವಿಯಾಗಿದ್ದರು. ಆಗ ಇತರ ಪ್ರತಿಪಕ್ಷಗಳ ಬೆಂಬಲ ಇಲ್ಲದೇ ಅವರು ಹೋರಾಟದ ಅಖಾಡಕ್ಕೆ ಇಳಿದಿದ್ದರು. ನಂತರ ಉಳಿದವರ ಸಾಥ್ ದೊರೆತು ಅವರ ಆಶಯ ಫಲಿಸಿತ್ತು. ಭೂ ಸ್ವಾಧೀನ ಕಾಯಿದೆ ರದ್ದಾಗಿತ್ತು.
" ವಿಷಯದಲ್ಲಿ ಗೆಲುವು ದಕ್ಕಿದೆ ಎಂದು ಹೇಳಿಕೊಂಡರೂ ಅದನ್ನು ಮುಂದಿನ ಚುನಾವಣೆವರೆಗೆ ಜೀವಂತವಾಗಿ ಇಟ್ಟುಕೊಂಡು ಲಾಭ ಪಡೆಯುವುದು ಪ್ರತಿಪಕ್ಷಗಳಿಗೆ ಕಷ್ಟವಾಗುತ್ತದೆ. ಪ್ರಾಯಶಃ ಬರುವ ಸಂಸತ್ ಅಧಿವೇಶನದಲ್ಲಿ ಕಾಯಿದೆಗಳ ರದ್ದು ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಆ ನಂತರ ಪ್ರತಿಪಕ್ಷಗಳು ಸರಕಾರದ ವಿರುದ್ಧ ಹೋರಾಟಕ್ಕೆ ಬೇರೆಯದೇ ಅಸ್ತ್ರಗಳಿಗಾಗಿ ಹುಡುಕಾಟ ನಡೆಸಬೇಕಾಗುತ್ತದೆ. ಚೀನಾ ಅತಿಕ್ರಮಣ ಕುರಿತ ಪೆಂಟಗಾನ್ ವರದಿ, ರಫೇಲ್ ಡೀಲ್ನಂತಹ ವಿಷಯಗಳನ್ನೇ ಮರಳಿ ನೆಚ್ಚಿಕೊಳ್ಳಬೇಕಾಗುತ್ತದೆ," ಎಂದು ರಾಜಕೀಯ ಪರಿಣಿತರು ಅಂದಾಜಿಸಿದ್ದಾರೆ.
ರಾಹುಲ್ ಗಾಂಧಿ ಹಳೆಯ ವಿಡಿಯೋ ಭಾರಿ ವೈರಲ್
ರಾಹುಲ್ ಗಾಂಧಿ ಅವರು ಕಳೆದ ಜನವರಿಯಲ್ಲಿ, "ನನ್ನ ಮಾತುಗಳನ್ನು ನೆನಪಿಟ್ಟುಕೊಳ್ಳಿ. ಮೂರೂ ಕೃಷಿ ಕಾಯಿದೆಗಳನ್ನು ಕೇಂದ್ರ ಸರಕಾರ ಹಿಂದಕ್ಕೆ ಪಡೆಯಲೇಬೇಕಾಗುತ್ತದೆ," ಎಂದು ಹೇಳಿದ್ದರು. ಕೃಷಿ ಕಾಯಿದೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹಿಂದಕ್ಕೆ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಆ ಹಳೆಯ ವಿಡಿಯೋ ಈಗ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.