ಉತ್ತಮ ಆರೋಗ್ಯಕ್ಕಾಗಿ ಜಿಮ್‌ಗೆ ಹೋಗಬೇಕು ಅಂತೇನಿಲ್ಲ; ಸಾಮಾನ್ಯ ವ್ಯಾಯಾಮ ಮುಖ್ಯ ಎಂದ ನಟ ರಮೇಶ್ ಅರವಿಂದ್

ನಟ ರಮೇಶ್ ಅರವಿಂದ್ ಅವರು '100' ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ದಾವಣಗೆರೆಗೆ ಭೇಟಿ ನೀಡಿದ ಅವರು ಜಿಮ್, 100 ಸಿನಿಮಾ, ಪುನೀತ್ ರಾಜ್‌ಕುಮಾರ್ ಬಗ್ಗೆಯೂ ಮಾತನಾಡಿದ್ದಾರೆ.

ಉತ್ತಮ ಆರೋಗ್ಯಕ್ಕಾಗಿ ಜಿಮ್‌ಗೆ ಹೋಗಬೇಕು ಅಂತೇನಿಲ್ಲ; ಸಾಮಾನ್ಯ ವ್ಯಾಯಾಮ ಮುಖ್ಯ ಎಂದ ನಟ ರಮೇಶ್ ಅರವಿಂದ್
Linkup
ದಾವಣಗೆರೆ: "ಪುನೀತ್ ರಾಜಕುಮಾರ್ ನಿಧನ ನಮಗೆಲ್ಲಾ ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಕೆಲವರು ಜಿಮ್ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಜಿಮ್ ಮಾಲೀಕರು ಫೋನ್ ಮಾಡಿ ಈ ಬಗ್ಗೆ ನನ್ನ ಬಳಿಕ ಚರ್ಚೆಯನ್ನೂ ಮಾಡಿದ್ದಾರೆ. ನನ್ನ ಪ್ರಕಾರ ಬೇಸಿಕ್ ಫಿಟ್‌ನೆಸ್ ಬಹುಮುಖ್ಯ. ಎಲ್ಲರಿಗೂ ಬೇಕೇ ಬೇಕು. ಕನಸು ಈಡೇರಿಸಿಕೊಳ್ಳಲು ನಮ್ಮ ದೇಹ ಮುಖ್ಯವಾದದ್ದು" ಎಂದು ನಟ, ನಿರ್ದೇಶಕ ಹೇಳಿದ್ದಾರೆ. 100 ಸಿನಿಮಾದ ಪ್ರಚಾರಕ್ಕೆ ದಾವಣಗೆರೆಗೆ ಆಗಮಿಸಿದ್ದ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಇದರಲ್ಲಿ ಎರಡು ಮಾತಿಲ್ಲ. ದೇಹ ಸದೃಢವಾಗಿಟ್ಟುಕೊಳ್ಳಲು ಜಿಮ್‌ಗೆ ಹೋಗಬೇಕು ಅಂತೇನಿಲ್ಲ ಎಂಬುದು ನನ್ನ ಅಭಿಪ್ರಾಯ. ಆದರೆ, ಸಣ್ಣಪುಟ್ಟ ವ್ಯಾಯಾಮ ಅಭ್ಯಾಸ ಮಾಡಬೇಕು, ಅಂಗಾಂಗಳ ಚಲನೆ ಇರಬೇಕು. ಈ ಹಿಂದೆ ನನ್ನದು ಚಿರತೆ ಬೇಟೆ ಮಾಡಿದ ದೇಹ, ಈಗ ಕಂಪ್ಯೂಟರ್, ಮೊಬೈಲ್ ನೋಡ್ತಾ ಕೂರುತ್ತೇವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೇನೆ. ದೊಡ್ಡದಾಗಿ ಜಿಮ್‌ಗೆ ಹೋಗಿ ದೇಹದಂಡನೆ ಮಾಡಬೇಕೆಂದೇನಿಲ್ಲ. ಯೋಗಾಭ್ಯಾಸ ಮಾಡಿದರೆ ಒಳಿತು. ನಾನು ವಾರಕ್ಕೆ ನಾಲ್ಕೈದು ದಿನವಾದರೂ ಅಭ್ಯಾಸ ಮಾಡುತ್ತೇನೆ. ಇದರಿಂದ ಹತಾಶೆ ದೂರವಾಗುತ್ತದೆ. ಬುದ್ದಿವಂತಿಕೆ ಹೆಚ್ಚಾಗುತ್ತದೆ. ಚಿಂತೆಯೂ ಇರಲ್ಲ" ಎಂದು ಅಭಿಪ್ರಾಯಪಟ್ಟರು. 'ಪವರ್ ಸ್ಟಾರ್' ಪುನೀತ್ ರಾಜಕುಮಾರ್ ವಿಧಿವಶರಾಗಿದ್ದು ನಮಗೆಲ್ಲಾ ದೊಡ್ಡ ಶಾಕ್. ಈಗ ಎಲ್ಲರೂ ಈ ನೋವಿನಿಂದ ನಿಧಾನವಾಗಿ ಹೊರಬರುತ್ತಿದ್ದಾರೆ. ಸರ್ಕಾರ ಥಿಯೇಟರ್‌ನಲ್ಲಿ ಶೇಕಡಾ ನೂರರಷ್ಟು ಆಸನಕ್ಕೆ ಅನುಮತಿ ಕೊಟ್ಟ ಬಳಿಕ ಬಿಡುಗಡೆಯಾದ ಎರಡರಿಂದ ಮೂರು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಪುನೀತ್ ಸಾವಿನ ನಂತರದ ಬೆಳವಣಿಗೆಗಳು ನಮಗೂ ಗೊತ್ತಿವೆ. ಚಿತ್ರಮಂದಿರಗಳಿಗೆ ಜನರು ಬಂದರೆ ಮಾತ್ರ ನಿರ್ಮಾಪಕರಿಗೆ ಲಾಭ ಆಗುವುದು. ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ" ಎಂದು ರಮೇಶ್ ಹೇಳಿದರು. "ಶಿವಾಜಿ ಸುರತ್ಕಲ್ ಸಿನಿಮಾ ಹಿಟ್ ಆಗಿದ್ದು ಖುಷಿ ತಂದಿದೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ಬಂತು. ಅದೇ ರೀತಿಯ ಸಸ್ಪೆನ್ಸ್, ಥ್ರಿಲ್ಲರ್ ಆದ ಇದೇ ತಿಂಗಳು 19 ರಂದು ಬಿಡುಗಡೆಯಾಗಲಿರುವ '100' ಚಿತ್ರದಲ್ಲಿಯೂ ಇದೆ. ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ಹೆಂಡ್ತಿ ಕಳೆದುಕೊಂಡು ನಾಯಕ ಡಿಪ್ರೆಷನ್‌ಗೆ ಹೋಗಿರುತ್ತಾನೆ. ಈ ಸಿನಿಮಾದಲ್ಲಿ ಹಾಗಿಲ್ಲ. ತುಂಬು ಕುಟುಂಬ ಇರುತ್ತೆ. ಹೆಂಡತಿ ಹಾಗೂ ಮಗು ಸಹ ಇದ್ದು, ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್ ಕೂಡ ಇದೆ" ಎಂದು ಹೇಳಿದ್ದಾರೆ. "ಈ ಸಿನಿಮಾದಲ್ಲಿ ಅರ್ಧ ಭಾಗ ನೈಜ ಕಥೆ ಆಧಾರಿತವಾದದ್ದು. ನನ್ನ ಸ್ನೇಹಿತನಿಗೆ ಆದ ಅನಾಹುತವನ್ನು ಸಿನಿಮಾದಲ್ಲಿ ಚಾಚೂ ತಪ್ಪದೇ ತರಲಾಗಿದೆ. ಚಿತ್ರರಂಗದಲ್ಲಿ ಬೇರೆ ಬೇರೆ ಚಟುವಟಿಕೆಗಳು ನಡೆಯುತ್ತವೆ. ವಾಚ್ ನೋಡಿದಾಗ ಒಂದು ಮುಳ್ಳಿನಿಂದ ಮತ್ತೊಂದು ಮುಳ್ಳಿಗೆ ಹೇಗೆ ಹೋಗುತ್ತದೆಯೋ ಅದೇ ರೀತಿಯಲ್ಲಿ ಚಿತ್ರರಂಗ ಇದೆ. ಕೊರೊನಾ ಬಂದಾಗ ಇಡೀ ಚಿತ್ರರಂಗವೇ ನಿಂತು ಹೋಯ್ತು. ಆಗ ಚಿತ್ರಮಂದಿರಗಳು ಬಾಗಿಲು ತೆರೆಯಲಿಲ್ಲ. ನಟರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಸಮಸ್ಯೆ ಅನುಭವಿಸಿದರು. ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿದಾಗ ಮಾತ್ರ ನಿರ್ಮಾಪಕರಿಗೆ ಲಾಭ ಆಗುತ್ತದೆ. ಎಲ್ಲವೂ ಸರಾಗವಾಗಿ ನಡೆಯುತ್ತದೆ. ಟಿಕೆಟ್ ಸೇಲ್ ಆಗದಿದ್ದರೆ ಹಾಕಿದ ಬಂಡವಾಳವೂ ಬರುವುದಿಲ್ಲ. ಆಗ ಎಲ್ಲಾ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ನಟನೆ ಮಾಡಬಹುದು, ನಿರ್ದೇಶಿಸಲೂ ಬಹುದು. ಎಡಿಟ್ ಕೂಡ ಮಾಡಿ ರೆಡಿ ಇಟ್ಟುಕೊಳ್ಳಬಹುದು. ಆದ್ರೆ, ಜನರೇ ಚಿತ್ರಮಂದಿರಗಳಿಗೆ ಬಾರದಿದ್ದರೆ ಏನು ಪ್ರಯೋಜನ ಆಗಲ್ಲ" ಎಂದು ತಿಳಿಸಿದರು. "ನಮ್ಮ ಮನೆಯಲ್ಲಿ ಐದು ಜನ ಇದ್ದೇವೆ. ಎಲ್ಲರ ಕೈಯಲ್ಲಿಯೂ ಮೊಬೈಲ್. ಅವರವರ ಪ್ರಪಂಚದಲ್ಲಿರುತ್ತಾರೆ. ನಮ್ಮನೆಯೊಳಗೆ ಮಗ ಏನು ನೋಡ್ತಾನೆ, ಮಗಳು ಯಾವುದನ್ನು ನೋಡ್ತಾಳೆ ಗೊತ್ತಾಗುವುದಿಲ್ಲ. ತಪ್ಪಾಗಿ ಏನಾದರೂ ಆದರೆ ಅನಾಹುತ ಸೃಷ್ಟಿಸುತ್ತದೆ. ಇದೇ ಚಿತ್ರದ ಕಥೆಯ ಜೀವಾಳ. ಇಡೀ ಪ್ರಪಂಚ ಆನ್ ಲೈನ್ ಬಳಕೆ ಮಾಡುತ್ತಿದೆ. ಎಲ್ಲರೂ ಸೋಷಿಯಲ್ ಮೀಡಿಯಾ ಬಳಕೆ ಮಾಡುತ್ತಿದ್ದಾರೆ. ಎಲ್ಲರೂ ಮನೆಯಲ್ಲಿರುವ ಸಮಸ್ಯೆ ಒಂದೇ. ಫೋನ್ ಇಲ್ಲದಿದ್ರೆ ಇರೋಕೆ ಆಗೋಲ್ವಾ ಎಂಬ ಪ್ರಶ್ನೆ ಕೇಳಿ ಬರುತ್ತದೆ. ಆ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಈ ಸಿನಿಮಾದಲ್ಲಿ ಮಾಡಲಾಗಿದೆ. ಟೆಕ್ನಾಲಜಿ, ಸೋಷಿಯಲ್ ಮೀಡಿಯಾ ಯಾರ ಕೈಯಲ್ಲಿದೆ ಎಂಬುದು ಮುಖ್ಯ. ಕತ್ತಿ, ಬೆಂಕಿ ಸರಿಯಾದ ಕೈಯಲ್ಲಿದ್ದವರ ಕೈಗೆ ಇದ್ದರೆ ರುಚಿಕರವಾದ ಅಡುಗೆ ಆಗುತ್ತದೆ. ತಪ್ಪಾದವರ ಕೈಗೆ ಸಿಕ್ಕರೆ ರಕ್ತದ ಹೊಳೆ ಹರಿಯುತ್ತೆ. ಬೆಂಕಿ ಕಾಡೇ ನಾಶ ಮಾಡುತ್ತೆ. ಸೋಷಿಯಲ್ ಮೀಡಿಯಾ ತಪ್ಪಾದವರ ಕೈಯಲ್ಲಿ ಸಿಕ್ಕರೆ ಏನೆಲ್ಲಾ ಕೆಟ್ಟ ಪರಿಣಾಮ ಬೀರುತ್ತೆ ಎಂಬುದು ಗೊತ್ತಾಗುತ್ತದೆ" ಎಂದು ಮಾಹಿತಿ ನೀಡಿದರು.