ಸಿಧು ಆಪ್ತರ ವಿರುದ್ಧ ಕ್ರಮಕ್ಕೆ ಅಮರೀಂದರ್‌ ಆಪ್ತರ ಒತ್ತಾಯ, ಸಿಎಂ ಬದಲಾವಣೆಗೆ ಸಿಧು ಆಪ್ತರ ಪಟ್ಟು!

ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಹಾಗೂ ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ನಡುವೆ ಸಂಧಾನವಾದರೂ, ಮುಸುಕಿನ ಗುದ್ದಾಟ ಮಾತ್ರ ನಿಲ್ಲುವಂತೆ ಕಾಣಿಸುತ್ತಿಲ್ಲ.

ಸಿಧು ಆಪ್ತರ ವಿರುದ್ಧ ಕ್ರಮಕ್ಕೆ ಅಮರೀಂದರ್‌ ಆಪ್ತರ ಒತ್ತಾಯ, ಸಿಎಂ ಬದಲಾವಣೆಗೆ ಸಿಧು ಆಪ್ತರ ಪಟ್ಟು!
Linkup
ಚಂಡೀಗಢ: 'ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ' ಎಂಬ ಮಾತಿನಂತೆ ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಹಾಗೂ ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ (ಪಿಪಿಸಿಸಿ) ಅಧ್ಯಕ್ಷ ಮಧ್ಯೆ ಸಂಧಾನವಾದರೂ, ಮುಸುಕಿನ ಗುದ್ದಾಟ ಮಾತ್ರ ನಿಲ್ಲುತ್ತಿಲ್ಲ. ನವಜೋತ್‌ ಸಿಂಗ್‌ ಸಿಧು ಸಲಹೆಗಾರರು ಜಮ್ಮು-ಕಾಶ್ಮೀರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಅಮರೀಂದರ್‌ ಸಿಂಗ್‌ ಅವರು ಖಂಡಿಸಿದ ಬೆನ್ನಲ್ಲೇ ಸಿಧು ಆಪ್ತರಾದ ಶಾಸಕರು ಹಾಗೂ ಸಚಿವರು ಸೇರಿ ಸಿಎಂ ವಜಾಕ್ಕಾಗಿ ಪಟ್ಟು ಹಿಡಿದಿದ್ದಾರೆ. ಅತ್ತ, ಕ್ಯಾಪ್ಟನ್‌ ಬಣವೂ ರಾಜಕೀಯ ಮೇಲಾಟದಲ್ಲಿ ತೊಡಗಿದ್ದು, ಕಾಶ್ಮೀರ ಕುರಿತು ಹೇಳಿಕೆ ನೀಡಿದ ಸಿಧು ಆಪ್ತರ ವಿರುದ್ಧ ಕ್ರಮ ತೆಗೆದುಕೊಳ್ಳಿ, ವಜಾಗೊಳಿಸಿ ಎಂದು ಹೈಕಮಾಂಡ್‌ ಅನ್ನು ಒತ್ತಾಯಿಸಿದ್ದಾರೆ. ಸಿಧು ಆಪ್ತರಾದ ತೃಪ್ತ್‌ ರಾಜಿಂದರ್‌ ಬಜ್ವಾ, ಸುಖ್‌ಜಿಂದರ್‌ ಸಿಂಗ್‌ ರಾಂಧ್ವಾ, ಚರಣ್‌ಜಿತ್‌ ಸಿಂಗ್‌ ಚನ್ನಿ, ಸುಖ್‌ಬಿಂದರ್‌ ಸಿಂಗ್‌ ಸರ್ಕಾರಿಯಾ, ರಾಜ್ಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪರ್ಗತ್‌ ಸಿಂಗ್‌ ಅವರು ಮಂಗಳವಾರ ಸಭೆ ನಡೆಸಿದ್ದು, ಕ್ಯಾಪ್ಟನ್‌ ಅಮೆರಿಂದರ್‌ ಸಿಂಗ್‌ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಮತ್ತೆ ಹೈಕಮಾಂಡ್‌ಗೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಕ್ಯಾಪ್ಟನ್‌ರನ್ನು ಕೆಳಗಿಳಿಸಬೇಕು ಎಂದು ಈ ಹಿಂದೆ ಸಹ ಒಮ್ಮೆ ಸಿಧು ಆಪ್ತರು ಹೈಕಮಾಂಡ್‌ಗೆ ಒತ್ತಾಯಿಸಿದ್ದರು. ಕಾಶ್ಮೀರ ಕುರಿತು ಸಿಧು ಆಪ್ತರು ಹಾಗೂ ಸಲಹೆಗಾರರಾದ ಪ್ಯಾರೆ ಲಾಲ್‌ ಗರ್ಗ್‌ ಮತ್ತು ಮಲ್ವಿಂದರ್‌ ಸಿಂಗ್‌ ಮಾಲಿ ಅವರು ''ಕಾಶ್ಮೀರವನ್ನು ಭಾರತ ಆಕ್ರಮಿಸಿಕೊಂಡಿದೆ,'' ಎಂದು ಹೇಳಿದ್ದು ಭಾರಿ ಟೀಕೆಗೆ ಗುರಿಯಾಗಿತ್ತು. ಅಮರೀಂದರ್‌ ಸಿಂಗ್‌ ಅವರು ಹೇಳಿಕೆಯನ್ನು ನೇರವಾಗಿಯೇ ಖಂಡಿಸಿದ್ದರು.