ಸೋಂಕು ಹೆಚ್ಚಿದರೆ ಬೆಂಗಳೂರಿನಲ್ಲೂ ವೀಕೆಂಡ್ ಕರ್ಫ್ಯೂ?: 3ನೇ ಅಲೆ ತಡೆಗೆ ಕಠಿಣ ಕ್ರಮ!
ಸೋಂಕು ಹೆಚ್ಚಿದರೆ ಬೆಂಗಳೂರಿನಲ್ಲೂ ವೀಕೆಂಡ್ ಕರ್ಫ್ಯೂ?: 3ನೇ ಅಲೆ ತಡೆಗೆ ಕಠಿಣ ಕ್ರಮ!
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಿದರೆ ಇಲ್ಲೂ ಕೂಡ ವಿಕೇಂಡ್ ಕರ್ಫ್ಯೂ ಜಾರಿಗೊಳಿಸುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸದ್ಯ ಕೇಸ್ಗಳು ಕಡಿಮೆಯಾಗಿದೆ, ಆದರೆ ಜಾಸ್ತಿಯಾದರೆ ವಿಕೇಂಡ್ ಕರ್ಫ್ಯೂನಂತಹ ನಿರ್ಬಂಧ ಅನಿವಾರ್ಯ ಎಂದಿದ್ದಾರೆ. ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಈ ಕ್ರಮ ಎಂದು ತಿಳಿಸಿದ್ದಾರೆ.
ಬೆಂಗಳೂರು: ಮೂರನೇ ಆಲೆಯ ಮುನ್ಸೂಚನೆ ಹೊರತಾಗಿಯೂ ರಾಜಧಾನಿಯಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿರುವುದು ಸ್ವಲ್ಪ ಮಟ್ಟಿಗೆ ನಿರಾಳ ಭಾವ ಮೂಡಿಸಿದೆ. ಆದರೆ, ಇದೇ ಕಾರಣಕ್ಕಾಗಿ ಮೈಮರೆತರೆ ಮತ್ತೆ ಅಪಾಯ ಎದುರಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಸದ್ಯಕ್ಕೆ ಬೆಂಗಳೂರಿನ ದಿನದ ಸೋಂಕು ಐನೂರರ ಆಸುಪಾಸಿನಲ್ಲಿದೆ. ಇದು ಕಡಿಮೆಯಾಗುತ್ತಾ ಸಾಗಿದರೆ ಅಪಾಯವಿಲ್ಲ. ಅದು ಬಿಟ್ಟು ಹೆಚ್ಚಳವಾದರೆ ಗಡಿ ಜಿಲ್ಲೆಗಳಂತೆ ಇಲ್ಲೂ ವೀಕೆಂಡ್ ಕರ್ಫ್ಯೂ ವಿಧಿಸುವ ಸಾಧ್ಯತೆ ದಟ್ಟವಾಗಿದೆ.
ಕೇರಳ ಮತ್ತು ಮಹಾರಾಷ್ಟ್ರದಲ್ಲಿಈಗಾಗಲೇ ಕೊರೊನಾ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಇದು ದಕ್ಷಿಣ ಕನ್ನಡ ಸೇರಿದಂತೆ ಕೆಲವು ಗಡಿ ಜಿಲ್ಲೆಗಳಲ್ಲಿ ತೀವ್ರ ಪರಿಣಾಮ ಬೀರಿದ್ದು, ಕೇಸು ಮತ್ತು ಸಾವಿನ ಸಂಖ್ಯೆ ಅಲ್ಲಿ ಹೆಚ್ಚುತ್ತಿದೆ. ಹೀಗಾಗಿ ಗಡಿ ಭಾಗದ ಎಂಟು ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂವನ್ನು ವಿಧಿಸಲಾಗಿದೆ.
ಜತೆಗೆ ರಾಜ್ಯವಿಡೀ ಕಠಿಣ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಭಾನುವಾರ ಬೆಂಗಳೂರಿನಲ್ಲಿ 348 ಪ್ರಕರಣ ದಾಖಲಾದರೆ, ದಕ್ಷಿಣ ಕನ್ನಡದಲ್ಲಿ 438 ಕೇಸು ದಾಖಲಾಗಿದೆ. ಸಾವು ಬೆಂಗಳೂರಿನಲ್ಲಿ 1, ದಕ್ಷಿಣ ಕನ್ನಡದಲ್ಲಿ ಆರು ಇತ್ತು. ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆಗಸ್ಟ್ ಕೊನೆ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಸೋಂಕು ಹೆಚ್ಚಾಗಬಹುದು ಎಂದು ತಜ್ಞರು ಅಂದಾಜಿಸಿದ್ದು, ಸೋಂಕು ಮಿತಿ ಮೀರಿದರೆ ಮತ್ತೆ ಲಾಕ್ಡೌನ್ ಅಥವಾ ವೀಕೆಂಡ್ ಕರ್ಫ್ಯೂ ವಿಧಿಸುವ ಸಾಧ್ಯತೆ ಇದೆ ಎನ್ನುತ್ತಿವೆ ಸರಕಾರದ ಮೂಲಗಳು.