ಮೂಲಸೌಲಭ್ಯ ಕಲ್ಪಿಸುವ ಕಾಮಗಾರಿ ವಿಳಂಬ! ನಿವೇಶನದಾರರಿಗೆ ವೆಚ್ಚ ಏರಿಕೆ ಆತಂಕ!

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಲಭ್ಯ ಕಲ್ಪಿಸುವ ಕಾಮಗಾರಿ ವಿಳಂಬವಾಗುತ್ತಿದ್ದು, ಕಾಮಗಾರಿಯ ವೆಚ್ಚ ವಾರ್ಷಿಕ ಶೇ.15ರಷ್ಟು ಏರಿಕೆಯಾಗುತ್ತಿದೆ. ಹೀಗಿದ್ದರೂ ಬಿಡಿಎ ವಿಳಂಬ ಧೋರಣೆ ಬಿಟ್ಟಿಲ್ಲ. ಇದು ನಿವೇಶನದಾರರನ್ನು ಆತಂಕಕ್ಕೆ ಸಿಲುಕಿಸಿದೆ.

ಮೂಲಸೌಲಭ್ಯ ಕಲ್ಪಿಸುವ ಕಾಮಗಾರಿ ವಿಳಂಬ! ನಿವೇಶನದಾರರಿಗೆ ವೆಚ್ಚ ಏರಿಕೆ ಆತಂಕ!
Linkup
ಎಚ್‌.ಪಿ. ಪುಣ್ಯವತಿ, ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಲಭ್ಯ ಕಲ್ಪಿಸುವ ಕಾಮಗಾರಿ ವಿಳಂಬವಾಗುತ್ತಿದ್ದು, ಕಾಮಗಾರಿಯ ವೆಚ್ಚ ವಾರ್ಷಿಕ ಶೇ.15ರಷ್ಟು ಏರಿಕೆಯಾಗುತ್ತಿದೆ. ಹೀಗಿದ್ದರೂ ಬಿಡಿಎ ವಿಳಂಬ ಧೋರಣೆ ಬಿಟ್ಟಿಲ್ಲ. ಇದು ನಿವೇಶನದಾರರನ್ನು ಆತಂಕಕ್ಕೆ ಸಿಲುಕಿಸಿದೆ. ಪೆಟ್ರೊಲ್‌, ಡೀಸೆಲ್‌ ಬೆಲೆ ಏರಿಕೆಯಾದಂತೆ ಕಬ್ಬಿಣ, ಸಿಮೆಂಟ್‌, ಪೈಪ್‌ ಇತ್ಯಾದಿಗಳ ಬೆಲೆ ಏರಿಕೆಯಾಗುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದೀಚೆಗೆ ಈ ಸಾಮಗ್ರಿಗಳ ದರ ಮೂರು ಪಟ್ಟು ಏರಿಕೆಯಾಗಿದೆ. ಇದೀಗ ಬಿಡಿಎ ಕೆಂಪೇಗೌಡ ಲೇಔಟ್‌ನಲ್ಲಿ ಬಾಕಿ ಕೆಲಸಗಳಿಗೆ 1500 ಕೋಟಿ ರೂ. ಬೇಕು ಎಂದು ಅಂದಾಜಿಸಲಾಗಿದೆ. ಆದರೆ ಕಾಮಗಾರಿ ಪೂರೈಸಲು ಒಂದು ವರ್ಷ ವಿಳಂಬ ಮಾಡಿದರೂ 225 ಕೋಟಿ ರೂ.(ಶೇ.15) ಹೊರೆ ಹೆಚ್ಚಾಗುತ್ತಾ ಹೋಗುತ್ತದೆ. ಈಗಾಗಲೇ ಮೂಲಸೌಕರ್ಯ ಕಾಮಗಾರಿಗೆ ಹಣ ಒದಗಿಸಲು ಪರದಾಡುತ್ತಿರುವ ಬಿಡಿಎ, ಹೆಚ್ಚುವರಿ ಹೊರೆಯನ್ನು ಹೇಗೆ ನಿಬಾಯಿಸಲಿದೆ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನದಾರರು ಆತಂಕಿತರಾಗಿದ್ದಾರೆ. ಬಿಡಿಎ 2021ರ ಡಿಸೆಂಬರ್‌ಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕೊನೆಯ ಅವಕಾಶ ಎಂದು ರೇರಾ ಹೇಳಿತ್ತು. ಆದರೆ ಈವರೆಗೆ ಶೇ.50-60ರಷ್ಟು ಕಾಮಗಾರಿಯೂ ಪೂರ್ಣಗೊಳಿಸಿಲ್ಲ. 2640 ಎಕರೆ ಜಾಗದಲ್ಲಿ ಬಾಕಿ ಕೆಲಸಗಳಿಗಾಗಿ ಬಿಡಿಎ ಇನ್ನೂ 1,500 ಕೋಟಿ ಖರ್ಚು ಮಾಡಬೇಕಾಗುತ್ತದೆ. ಈ ವೆಚ್ಚ ವರ್ಷಕ್ಕೆ ಸರಾಸರಿ ಶೇ.15ರಷ್ಟು ಹೆಚ್ಚಳವಾಗುತ್ತದೆ. ಹೆಚ್ಚುವರಿ ಕಾಮಗಾರಿಗಳು, ವಿದ್ಯುತ್‌ ಉಪಕೇಂದ್ರಗಳು, ತಾತ್ಕಾಲಿಕ ವಿದ್ಯುತ್‌ ಸರಬರಾಜು ಕೆಲಸಗಳಿಗೆ ಹಾಗೂ ಡಾಂಬರೀಕರಣಕ್ಕೆ ಇನ್ನೂ ಅನುಮೋದನೆ ಸಿಕ್ಕಿಲ್ಲ. ಭೂಸ್ವಾಧೀನದ ತೊಡಕಿನಿಂದಾಗಿ ನೀರು ಸರಬರಾಜು ಕೊಳವೆ ಅಳವಡಿಸಿಲ್ಲ. ಅಗತ್ಯ ಅನುದಾನವಿಲ್ಲದೆ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ನಿವೇಶನದಾರರು ದೂರಿದ್ದಾರೆ. ಎರಡು ಸಂಸ್ಥೆಗಳಿಗೆ ಟೆಂಡರ್‌ ಈ ಬಡಾವಣೆಯ 10 ಬ್ಲಾಕ್‌ಗಳಿಗೆ ಕುಡಿಯುವ ನೀರು, ಒಳಚರಂಡಿ ಹಾಗೂ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾಮಗಾರಿಗಳ ಗುತ್ತಿಗೆ ನೀಡಲಾಗಿದೆ. 10 ಬ್ಲಾಕ್‌ಗಳ ಪೈಕಿ ಐದು ಬ್ಲಾಕ್‌ಗಳ ಕೆಲಸವನ್ನು ಎಲ್‌ ಆ್ಯಂಡ್‌ ಟಿ ಕಂಪನಿಗೆ ಹಾಗೂ ಐದು ಬ್ಲಾಕ್‌ಗಳ ಕಾಮಗಾರಿ ಟೆಂಡರ್‌ ಅನ್ನು ಎಸ್‌ಪಿಎಂಎಲ್‌ ಅಮೃತ್‌ ಕಂಪನಿಗೂ ವಹಿಸಲಾಗಿದೆ. ಹೆಚ್ಚುವರಿ ಕಾಮಗಾರಿಗಳಿಗೆ 672 ಕೋಟಿ ರೂ. ವೆಚ್ಚ ತಗಲುತ್ತದೆ ಎಂದು ಅಂದಾಜಿಸಲಾಗಿದೆ. ಈ ಹಣ ಬಿಡುಗಡೆಗೆ ಬಿಡಿಎ ಆಡಳಿತ ಮಂಡಳಿಯ ಸಮ್ಮತಿ ಸಿಕ್ಕಿಲ್ಲ. ಹಾಗಾಗಿ ಬಡಾವಣೆಯ ಮೂಲಸೌಕರ್ಯ ಕಾಮಗಾರಿಗಳು ಅರೆಬರೆ ಅನುಷ್ಠಾನಗೊಂಡಿವೆ. ಸಾಲ ಕಟ್ಟುವುದು ತಪ್ಪಿಲ್ಲ, ಮನೆಯೂ ಆಗಿಲ್ಲ 2016ರ ಡಿಸೆಂಬರ್‌ ಮತ್ತು 2018ರ ಮಾರ್ಚ್ನಲ್ಲಿ ಎರಡು ಹಂತಗಳಲ್ಲಿ ಹಂಚಿಕೆ ಮಾಡಲಾಗಿದೆ. ಪ್ರತಿ ನಿವೇಶನಕ್ಕೆ 12 ಲಕ್ಷ ರೂ.ಯಿಂದ 86 ಲಕ್ಷ ರೂ.ವರೆಗೆ ನಿವೇಶನ ದರವಿದೆ. ಹಲವು ಹಂಚಿಕೆದಾರರು ಸಾಲ ಪಡೆದು ಇಎಂಐ ಕಟ್ಟುತ್ತಿದ್ದಾರೆ. ಆದರೆ, ಮೂಲಸೌಕರ್ಯವಿಲ್ಲದೆ ಮನೆ ಕಟ್ಟಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿವೇಶನದಾರರು ನಿವೇಶನ ದರದ ಪೂರ್ಣ ಮೌಲ್ಯವನ್ನು ಪಾವತಿಸಿ ಆರು ವರ್ಷಗಳ ಹಿಂದೆಯೇ ನಿವೇಶನ ಖರೀದಿಸಿದ್ದಾರೆ. ನಿವೇಶನ ಸಾಲದ ಮೇಲೆ ಬಡ್ಡಿ, ಮನೆ ಬಾಡಿಗೆ ಕಟ್ಟುತ್ತಾ ಸಮಸ್ಯೆಗೆ ಸಿಲುಕುವಂತಾಗಿದೆ. ಅಷ್ಟೇ ಅಲ್ಲದೆ ಬಿಡಿಎ ವಿಳಂಬದಿಂದ ಮುಂದೆ ಮನೆ ಕಟ್ಟುವ ಸಾಮಗ್ರಿಗಳ ಹೆಚ್ಚುವರಿ ದರದ ಹೊರೆ ನಮ್ಮನ್ನು ಮತ್ತಷ್ಟು ಬಾಸಲಿದೆ. - ಸೂರ್ಯಕಿರಣ್‌, ಕಾರ್ಯದರ್ಶಿ, ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನದಾರರ ಮುಕ್ತ ವೇದಿಕೆ