ಬೆಂಗಳೂರಿನ ಜನತಾ ಬಜಾರ್‌ ಕಟ್ಟಡ ತೆರವು ಪ್ರಕರಣ: ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್‌ ಚಾಟಿ

ಬಿಡಿಎ ಕರಡು ಪರಿಷ್ಕೃತ ಮಾಸ್ಟರ್‌ ಪ್ಲಾನ್‌-2031ರಲ್ಲಿ ಜನತಾ ಬಜಾರ್‌ ಕಟ್ಟಡವನ್ನು ಪಾರಂಪರಿಕ ಕಟ್ಟಡ ಎಂದು ಗುರುತಿಸಲಾಗಿದೆ. ಪಾರಂಪರಿಕ ಕಟ್ಟಡಗಳು ಸಂರಕ್ಷಿತ ಕಟ್ಟಡಗಳ ಪಟ್ಟಿಗೆ ಸೇರಲಿದ್ದು, ಅವುಗಳನ್ನು ತೆರವುಗೊಳಿಸಲು ಅವಕಾಶವಿಲ್ಲ.

ಬೆಂಗಳೂರಿನ ಜನತಾ ಬಜಾರ್‌ ಕಟ್ಟಡ ತೆರವು ಪ್ರಕರಣ: ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್‌ ಚಾಟಿ
Linkup
: ಬೆಂಗಳೂರಿನ ಕೆ. ಜಿ. ರಸ್ತೆಯ ಪಾರಂಪರಿಕ ಜನತಾ ಬಜಾರ್‌ ಕಟ್ಟಡ ತೆರವು ಸಂಬಂಧ ಎರಡು ವರ್ಷವಾದರೂ ಆಕ್ಷೇಪಣೆ ಸಲ್ಲಿಸದ ಮತ್ತು ವಿರುದ್ಧ ಹೈಕೋರ್ಟ್‌ ಬುಧವಾರ ಕಿಡಿಕಾರಿದೆ. ಕೋರ್ಟ್‌ನಿಂದ ಪದೇ ಪದೇ ಅವಕಾಶ ಪಡೆದರೂ ಆಕ್ಷೇಪಣೆ ಸಲ್ಲಿಸದ್ದಕ್ಕೆ ಗರಂ ಆದ ನ್ಯಾಯಪೀಠ, ಸರಕಾರದ ಮುಖ್ಯ ಕಾರ್ಯದರ್ಶಿ ಈ ಸಂಬಂಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನ್ಯಾಯಾಲಯವೇ ಆದೇಶ ಹೊರಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಬಹುಮಹಡಿ ಕಟ್ಟಡ ನಿರ್ಮಾಣ ಮಾಡುವ ಉದ್ದೇಶದಿಂದ ಜನತಾ ಬಜಾರ್‌ ಕಟ್ಟಡ ತೆರವುಗೊಳಿಸಲು ಸರಕಾರ ಹೊರಡಿಸಿರುವ ಆದೇಶ ರದ್ದು ಕೋರಿ ಇಂಡಿಯನ್‌ ನ್ಯಾಷನಲ್‌ ಟ್ರಸ್ಟ್‌ ಫಾರ್‌ ಆರ್ಟ್‌ ಆ್ಯಂಡ್‌ ಕಲ್ಚರ್‌ ಹೆರಿಟೇಜ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಅಗ ಸರಕಾರಿ ವಕೀಲರು, ಆಕ್ಷೇಪಣೆ ಸಲ್ಲಿಸಲು ಸ್ವಲ್ಪ ಸಮಯ ನೀಡಬೇಕು. ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದರೂ ಮಾಹಿತಿ ನೀಡುತ್ತಿಲ್ಲ. ಹಾಗಾಗಿ ಕಾಲಾವಕಾಶ ನೀಡಿದರೆ ಮಾಹಿತಿ ಪಡೆದು ವಿವರ ಸಲ್ಲಿಸುವುದಾಗಿ ಹೇಳಿದರು. ಆಗ ಹಿಂದಿನ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, 2020ರ ಜನವರಿಯಲ್ಲಿಯೇ ಆಕ್ಷೇಪಣೆ ಸಲ್ಲಿಕೆಗೆ ಮೂರು ವಾರ ಕಾಲಾವಕಾಶ ನೀಡಲಾಗಿತ್ತು. ಆನಂತರ ಹಲವು ಬಾರಿ ಸಮಯ ಪಡೆದುಕೊಳ್ಳಲಾಗಿದೆ. ಆದರೂ ಸಹ ಆಕ್ಷೇಪಣೆ ಸಲ್ಲಿಸಿಲ್ಲ. ಆ ಬಗ್ಗೆ ಮಾಹಿತಿಯೂ ನೀಡುತ್ತಿಲ್ಲ. ಇದು ಸ್ಸಾರಿ ಸ್ಟೇಟ್‌ ಆಫ್‌ ಅಫೇರ್ಸ್ ಎಂದು ಸರಕಾರದ ಕಾರ್ಯವೈಖರಿಗೆ ಅತೃಪ್ತಿ ಹೊರಹಾಕಿತು. ಅಲ್ಲದೆ, ಕೋರ್ಟ್‌ ಆದೇಶಗಳ ಪಾಲನೆಯಲ್ಲಿ ಸರಕಾರ ಅತ್ಯಂತ ನಿರ್ಲಕ್ಷ್ಯ ವಹಿಸುತ್ತಿದೆ. ಇಂತಹ ಧೋರಣೆಯನ್ನು ಸಹಿಸಲಾಗದು. ಹಾಗಾಗಿ ಕೂಡಲೇ ಸರಕಾರದ ಮುಖ್ಯ ಕಾರ್ಯದರ್ಶಿ ಈ ಬಗ್ಗೆ ಗಮನಹರಿಸಬೇಕು. ಇಲ್ಲವಾದರೆ ನ್ಯಾಯಾಲಯವೇ ಕಠಿಣ ಆದೇಶಗಳನ್ನು ಹೊರಡಿಸಬೇಕಾಗುತ್ತದೆ ಎಂದು ಆದೇಶಿಸಿ, ಆದೇಶದ ಪ್ರತಿಯನ್ನು ಸಿಎಸ್‌ಗೆ ಕಳುಹಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು. ಜತೆಗೆ ನೋಟಿಸ್‌ ನೀಡಿ, ಎರಡು ವರ್ಷಕ್ಕೂ ಅಧಿಕ ಸಮಯ ಕಳೆದರೂ ಸಹ ಬಿಬಿಎಂಪಿ ವಕೀಲರು ಹಾಜರಾಗಿಲ್ಲ, ಆಕ್ಷೇಪಣೆಯನ್ನೂ ಸಹ ಸಲ್ಲಿಸಿಲ್ಲ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು. ಈ ಹಿಂದೆ ಕೆಂಪೇಗೌಡ ರಸ್ತೆಯಲ್ಲಿರುವ ಏಷಿಯಾಟಿಕ್‌ ಕಟ್ಟಡ (ಜನತಾ ಬಜಾರ್‌) ತೆರವುಗೊಳಿಸದಂತೆ ನೀಡಿದ್ದ ಮಧ್ಯಂತರ ಆದೇಶವನ್ನು ಮುಂದುವರಿಸಿತು. ಏಷಿಯಾಟಿಕ್‌ ಕಟ್ಟಡ ಶಿಥಿಲಗೊಂಡಿದ್ದು, ವಾಸಯೋಗ್ಯವಲ್ಲ ಎಂಬ ಕಾರಣ ನೀಡಿ, ಅದನ್ನು ತೆರವುಗೊಳಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ 2016ರ ಡಿಸೆಂಬರ್ 27ರಂದು ಸರಕಾರ ಆದೇಶ ಹೊರಡಿಸಿತ್ತು. ಆದರೆ, ಬಿಡಿಎ ಕರಡು ಪರಿಷ್ಕೃತ ಮಾಸ್ಟರ್‌ ಪ್ಲಾನ್‌-2031ರಲ್ಲಿ ಜನತಾ ಬಜಾರ್‌ ಕಟ್ಟಡವನ್ನು ಪಾರಂಪರಿಕ ಕಟ್ಟಡ ಎಂದು ಗುರುತಿಸಲಾಗಿದೆ. ಪಾರಂಪರಿಕ ಕಟ್ಟಡಗಳು ಸಂರಕ್ಷಿತ ಕಟ್ಟಡಗಳ ಪಟ್ಟಿಗೆ ಸೇರಲಿದ್ದು, ಅವುಗಳನ್ನು ತೆರವುಗೊಳಿಸಲು ಅವಕಾಶವಿಲ್ಲ. ಹಾಗಾಗಿ ಕಟ್ಟಡ ನೆಲಸಮಗೊಳಿಸಲು ಸರಕಾರ ಹೊರಡಿಸಿರುವ ಆದೇಶ ರದ್ದುಪಡಿಸಲು ಹಾಗೂ ಕರಡು ಪರಿಷ್ಕೃತ ಮಾಸ್ಟರ್‌ ಪ್ಲಾನ್‌- 2031 ಅಂತಿಮಗೊಳಿಸುವವರೆಗೆ ಕಟ್ಟಡ ತೆರವುಗೊಳಿಸಬಾರದೆಂದು ಅರ್ಜಿದಾರರು ಮನವಿ ಮಾಡಿದ್ದಾರೆ.