ಪ್ರಧಾನಿ ಮೋದಿಯನ್ನು ಟೀಕಿಸಿ ದೆಹಲಿಯ ಹಲವೆಡೆ ಬಿತ್ತಿಪತ್ರ: 15 ಮಂದಿ ಬಂಧನ

ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ನಿಭಾಯಿಸಿದ ರೀತಿಯನ್ನು ಟೀಕಿಸಿ ದೆಹಲಿ ನಗರದ ಅನೇಕ ಕಡೆ ಬಿತ್ತಿಪತ್ರಗಳನ್ನು ಅಂಟಿಸಿದ್ದ ಆರೋಪದಲ್ಲಿ ದೆಹಲಿ ಪೊಲೀಸರು 15 ಮಂದಿಯನ್ನು ಬಂಧಿಸಿದ್ದಾರೆ.

ಪ್ರಧಾನಿ ಮೋದಿಯನ್ನು ಟೀಕಿಸಿ ದೆಹಲಿಯ ಹಲವೆಡೆ ಬಿತ್ತಿಪತ್ರ: 15 ಮಂದಿ ಬಂಧನ
Linkup
ಹೊಸದಿಲ್ಲಿ: ಲಸಿಕೆ ಕಾರ್ಯಕ್ರಮವನ್ನು ಪ್ರಧಾನಿ ನಿಭಾಯಿಸುತ್ತಿರುವ ಬಗೆಯನ್ನು ಟೀಕಿಸಿ ರಾಜಧಾನಿ ದೆಹಲಿಯ ವಿವಿಧ ಭಾಗಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಿದ್ದ ಆರೋಪದಲ್ಲಿ ಕನಿಷ್ಠ 15 ಜರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಹಲವು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. 'ಪ್ರಧಾನಿ ಮೋದಿ ನಮ್ಮ ಮಕ್ಕಳ ಲಸಿಕೆಗಳನ್ನು ಏಕೆ ವಿದೇಶಕ್ಕೆ ಕಳುಹಿಸಿದ್ದೀರಿ?' ಎಂದು ಬರೆದ ಬಿತ್ತಿಪತ್ರಗಳನ್ನು ನಗರದ ಅನೇಕ ಭಾಗಗಳಲ್ಲಿ ಅಂಟಿಸಲಾಗಿತ್ತು. ಗುರುವಾರ ರಾತ್ರಿ ನಗರದ ವಿವಿಧ ಭಾಗಗಳ ಗೋಡೆಗಳಲ್ಲಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಕುರಿತು ಅವರು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದರು. ಐಪಿಸಿ ಸೆಕ್ಷನ್ 188ರ (ಸಾರ್ವಜನಿಕ ಸೇವಕರ ಆದೇಶಕ್ಕೆ ಅವಿಧೇಯತೆ ಪ್ರದರ್ಶಿಸುವುದು) ಅಡಿ ಈವರೆಗೂ ಪೊಲೀಸರು 17 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಜತೆಗೆ ಸೆಕ್ಷನ್ 3 (ಆಸ್ತಿ ವಿರೂಪ ತಡೆ ಕಾಯ್ದೆ) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿ ದೆಹಲಿಯ ವಿವಿಧ ಜಿಲ್ಲೆಗಳಲ್ಲಿ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 'ಈ ಸಂಬಂಧ ಮತ್ತಷ್ಟು ದೂರುಗಳು ದಾಖಲಾದರೆ ಇನ್ನೂ ಎಫ್‌ಐಆರ್‌ಗಳನ್ನು ನೋಂದಾಯಿಸುವ ಸಾಧ್ಯತೆ ಇದೆ. ಯಾರ ಪರವಾಗಿ ಈ ಪೋಸ್ಟರ್‌ಗಳನ್ನು ನಗರದೆಲ್ಲೆಡೆ ಅಂಟಿಸಲಾಗಿದೆ ಎಂಬುದನ್ನು ತಿಳಿಯಲು ತನಿಖೆ ಮುಂದುವರಿದಿದೆ. ಅದಕ್ಕೆ ಅನುಗುಣವಾಗಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಶಾನ್ಯ ದೆಹಲಿಯಲ್ಲಿ ಮೂರು ಎಫ್‌ಐಆರ್ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಪೂರ್ವ ಭಾಗ ಹಾಗೂ ಹೊರವಲಗಳಲ್ಲಿ ತಲಾ ಮೂರು ಎಫ್‌ಐಆರ್ ದಾಖಲಿಸಲಾಗಿದೆ. ಉತ್ತರ ದೆಹಲಿಯಲ್ಲಿ ಬಂಧಿನಕ್ಕೆ ಒಳಗಾಗಿರುವ ಆರೋಪಿಯು, ವ್ಯಕ್ತಿಯೊಬ್ಬರು ಈ ಪೋಸ್ಟರ್‌ಗಳನ್ನು ಅಂಟಿಸುವಂತೆ ತನಗೆ 500 ರೂಪಾಯಿ ನೀಡಿದ್ದಾಗಿ ತಿಳಿಸಿದ್ದಾನೆ. ಪೋಸ್ಟರ್ ಪತ್ತೆಯಾಗಿರುವ ಎಲ್ಲ ಪ್ರದೇಶಗಳಲ್ಲಿಯೂ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.