'ಪದ್ಮಶ್ರೀ' ಪುರಸ್ಕೃತ ನಟ ನಾಸಿರುದ್ದೀನ್ ಶಾ ಆಸ್ಪತ್ರೆಗೆ ದಾಖಲು; ಆರೋಗ್ಯದ ಮಾಹಿತಿ ನೀಡಿದ ಮ್ಯಾನೇಜರ್

ಭಾರತೀಯ ಚಿತ್ರರಂಗಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿರುವ ನಾಸಿರುದ್ದೀನ್ ಶಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಮಾಧ್ಯಮವೊಂದಕ್ಕೆ ಅವರ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.

'ಪದ್ಮಶ್ರೀ' ಪುರಸ್ಕೃತ ನಟ ನಾಸಿರುದ್ದೀನ್ ಶಾ ಆಸ್ಪತ್ರೆಗೆ ದಾಖಲು; ಆರೋಗ್ಯದ ಮಾಹಿತಿ ನೀಡಿದ ಮ್ಯಾನೇಜರ್
Linkup
ಚಿತ್ರರಂಗಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿರುವ ನಟ ಅವರನ್ನು ಕಳೆದ ಎರಡು ದಿನಗಳ ಹಿಂದೆ ಮುಂಬೈನ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ನ್ಯುಮೋನಿಯಾ ಇರುವುದು ಪತ್ತೆಯಾಗಿದೆ ಮತ್ತು ಅವರ ಶ್ವಾಸಕೋಶದಲ್ಲಿ ಒಂದು ತೊಂದರೆ ಕಂಡುಬಂದಿದ್ದು, ಅದಕ್ಕಾಗಿ ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಸಿರುದ್ದೀನ್ ಶಾ ಪತ್ನಿ ರತ್ನಾ ಪಾಠಕ್ ಶಾ ಹಾಗೂ ಮಕ್ಕಳು ಅವರ ಜೊತೆಯಲ್ಲಿದ್ದಾರೆ. ಇಂದು ರಾಜ್‌ ಕೌಶಲ್ ನಿಧನದ ಸುದ್ದಿ ಬರುತ್ತಿದ್ದಂತೆ ನಾಸಿರುದ್ದೀನ್ ಬಗ್ಗೆಯೂ ನಕಾರಾತ್ಮಕ ಗಾಸಿಪ್ ಕೇಳಿ ಬಂತು. ಈ ಹಿಂದೆ ಕೂಡ ಅವರ ಆರೋಗ್ಯದ ಬಗ್ಗೆ ಸುಳ್ಳು ಸುಳ್ಳಾಗಿ ವದಂತಿ ಹಬ್ಬಿಸಲಾಗಿತ್ತು. ಆ ಸಮಯದಲ್ಲೆಲ್ಲ ಅವರ ಆರೋಗ್ಯ ಚೆನ್ನಾಗಿತ್ತು. ಈ ಬಾರಿ ನಾಸಿರುದ್ದೀನ್ ಶಾ ಅವರ ಆರೋಗ್ಯದಲ್ಲಿ ಹದಗೆಟ್ಟಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಸಿರುದ್ದೀನ್ ಶಾ ಅವರ ಮ್ಯಾನೇಜರ್‌ 'ಮುಂಬೈ ಟೈಮ್ಸ್' ಜೊತೆಗೆ ಮಾತನಾಡಿದ್ದು, "ನಾಸಿರುದ್ದೀನ್ ಅವರನ್ನು ಕಳೆದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ಸೇರಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾಸಿರುದ್ದೀನ್‌ಗೆ ನ್ಯುಮೋನಿಯಾ ಇದೆ. ಶ್ವಾಸಕೋಶದಲ್ಲಿ ತೊಂದರೆಯಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಬೇಕಾಯ್ತು. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಚಿಕಿತ್ಸೆಗೆ ನಾಸಿರುದ್ದೀನ್ ಶಾ ಸ್ಪಂದಿಸುತ್ತಿದ್ದಾರೆ" ಎಂದು ಹೇಳಿದ್ದಾರೆ. ರಂಗಭೂಮಿ, ಹಿಂದಿ ಸಿನಿಮಾಗಳಲ್ಲಿ ನಾಸಿರುದ್ದೀನ್ ಶಾ ಕೊಡುಗೆ ದೊಡ್ಡದಿದೆ. ಚೇತನ್‌ ಕುಮಾರ್‌ ನಿರ್ದೇಶನದ 'ಜೇಮ್ಸ್‌' ಚಿತ್ರದಲ್ಲಿ ಹಿಂದಿ ಚಿತ್ರರಂಗದ ಹಿರಿಯ ನಟ ನಾಸಿರುದ್ದೀನ್‌ ಶಾ ನಟಿಸಲಿದ್ದಾರೆ ಎಂಬ ಕುರಿತು ಚರ್ಚೆಯಾಗಿತ್ತು. ಭಾರತ ಸರ್ಕಾರದಿಂದ 'ಪದ್ಮಶ್ರೀ', 'ಪದ್ಮ ಭೂಷಣ' ಪ್ರಶಸ್ತಿ ಪಡೆದ ನಾಸಿರುದ್ದೀನ್ ಅವರಿಗೆ ರಾಷ್ಟ್ರ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿ ಕೂಡ ಸಿಕ್ಕಿವೆ. ಹಿರಿಯ ನಟರಾದ ದಿಲೀಪ್ ಕುಮಾರ್, ರಾಜೇಶ್ ಖನ್ನಾ, ಅನುಪಮ್ ಖೇರ್ ಅವರ ವಿಮರ್ಶೆ ಮಾಡಿ ನಾಸಿರುದ್ದೀನ್ ಶಾ ವಿವಾದಕ್ಕೆ ಒಳಗಾಗಿದ್ದರು.