ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತ: ಭೀಕರ ಅವಘಡದಲ್ಲಿ ಐವರು ಕಾರ್ಮಿಕರ ದುರ್ಮರಣ

ಮಹಾರಾಷ್ಟ್ರದ ಪುಣೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಗುರುವಾರ ತಡ ರಾತ್ರಿ ಕುಸಿದ ಪರಿಣಾಮ, ಅಲ್ಲಿ ಕೆಲಸ ಮಾಡುತ್ತಿದ್ದ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ. ಇನ್ನೂ ಐದು ಮಂದಿ ಕಾರ್ಮಿಕರಿಗೆ ಗಾಯಗಳಾಗಿವೆ.

ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತ: ಭೀಕರ ಅವಘಡದಲ್ಲಿ ಐವರು ಕಾರ್ಮಿಕರ ದುರ್ಮರಣ
Linkup
ಪುಣೆ: ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದು ಐವರು ಮೃತಪಟ್ಟ ದುರಂತ ಮಹಾರಾಷ್ಟ್ರದ ಪುಣೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಯೆರವಾಡ ಪ್ರದೇಶದ ಶಾಸ್ತ್ರಿನಗರ ಎಂಬಲ್ಲಿ ಈ ಭೀಕರ ದುರ್ಘಟನೆ ಸಂಭವಿಸಿದೆ. ಅವಘಡದಲ್ಲಿ ಇನ್ನೂ ಐದು ಮಂದಿ ಗಾಯಗೊಂಡಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬೇಸ್‌ಮೆಂಟ್‌ನಲ್ಲಿನ ಸ್ಲ್ಯಾಬ್ ಕುಸಿದಿದ್ದರಿಂದ ಈ ಅನಾಹುತ ಉಂಟಾಗಿದೆ. ಮೃತರು ಹಾಗೂ ಗಾಯಾಳುಗಳೆಲ್ಲರೂ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರಾಗಿದ್ದಾರೆ. ಗುತ್ತಿಗೆದಾರನ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದ್ದು, ಐವರ ಮರಣ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತಾ ತಿಳಿಸಿದ್ದಾರೆ. ಗಾಯಗೊಂಡ ಐದು ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು ಇಬ್ಬರ ಸ್ಥಿತಿ ಗಂಭೀರವಾಗಿದೆ. ಕಟ್ಟಡ ಬೇಸ್‌ಮೆಂಟ್ ಮಹಡಿ ಏಕಾಏಕಿ ಕುಸಿದಿದ್ದರಿಂದ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಟ್ಟಡಕ್ಕೆ ಹಾಕಿದ್ದ ಕಬ್ಬಿಣದ ಸರಳುಗಳ ನಡುವೆ ಹತ್ತು ಕಾರ್ಮಿಕರು ಸಿಕ್ಕಿಕೊಂಡಿದ್ದರು. ಅವರನ್ನು ಕಾರ್ಯಾಚರಣೆ ಮೂಲಕ ಹೊರತೆಗೆಯಲಾಯಿತು. ಅವರಲ್ಲಿ ಐವರು ಮೃತಪಟ್ಟಿದ್ದರು. ಈ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ. 'ಪುಣೆಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಉಂಟಾದ ಅವಘಡದಿಂದ ನೋವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಈ ದುರಂತದಲ್ಲಿ ಗಾಯಗೊಂಡ ಎಲ್ಲರೂ ಆದಷ್ಟು ಶೀಘ್ರವೇ ಗುಣಮುಖರಾಗಲಿದ್ದಾರೆ ಎಂದು ಆಶಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ. ಕಟ್ಟಡದ ನೆಲಗಟ್ಟಿಗೆ ನೀಡಿದ ಬೆಂಬಲವು ವಿಫಲವಾದ ಹಾಗೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ನಾವು ನಿಖರ ಕಾರಣ ಪತ್ತೆ ಮಾಡಲು ತಾಂತ್ರಿಕ ನೆರವು ಪಡೆಯುತ್ತಿದ್ದೇವೆ. ಪ್ರಕರಣದ ಕುರಿತು ತನಿಖೆ ನಡೆಸಲು ಹಿರಿಯ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲು ಆದೇಶ ಹೊರಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಅವಶೇಷಗಳನ್ನು ತೆರವುಗೊಳಿಸಿ, ಅಡಿಯಲ್ಲಿ ಸಿಲುಕಿದ್ದ ಜನರನ್ನು ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಿರ್ಮಾಣ ಸ್ಥಳದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸದ ಕಾರಣ ಕಬ್ಬಿಣದ ರಾಡ್‌ಗಳ ರಚನೆ ಕುಸಿದು ಬಿದ್ದಿದೆ ಎಂದು ಉಪ ಪೊಲೀಸ್ ಆಯುಕ್ತ ರೊಹಿದಾಸ್ ಪವಾರ್ ತಿಳಿಸಿದ್ದಾರೆ. 'ಈ ನಿರ್ಮಾಣ ಜಾಗದಲ್ಲಿ ದಿನದ 24 ಗಂಟೆಯೂ ಸತತವಾಗಿ ನಿರ್ಮಾಣ ಕೆಲಸಗಳು ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಹೀಗಾಗಿ ಈ ಕಾರ್ಮಿಕರು ಎಷ್ಟು ಸಮಯದಿಂದ ಕೆಲಸ ಮಾಡುತ್ತಿದ್ದರು ಎನ್ನುವುದು ಗೊತ್ತಾಗಿಲ್ಲ. ಅವರಿಗೆ ಕೆಲಸ ಮಾಡಿ ಸುಸ್ತಾಗಿರಬಹುದು. ದುರಂತಕ್ಕೆ ಅದೇ ಕಾರಣ ಇರಬಹುದು. ಇಲ್ಲಿರುವ ಇತರೆ ಕಾರ್ಮಿಕರು, ಗಾಯಾಳುಗಳು ಬಿಹಾರ ಮೂಲದವರು ಎಂದು ತಿಳಿಸಿದ್ದಾರೆ' ಎಂದು ಶಾಸಕ ಸುನಿಲ್ ತಿಂಗ್ರೆ ತಿಳಿಸಿದ್ದಾರೆ.