'ನಾನೂ ಪತ್ರಕರ್ತನಾಗಿದ್ದೆ': ಸುಪ್ರೀಂಕೋರ್ಟ್ ಕಲಾಪ ನೇರಪ್ರಸಾರದ ಬಗ್ಗೆ ಸಿಜೆಐ ರಮಣ ಒಲವು

ಸುಪ್ರೀಂಕೋರ್ಟ್‌ನ ಕಲಾಪಗಳನ್ನು ವರದಿ ಮಾಡಲು ಅನುಕೂಲ ಕಲ್ಪಿಸುವ ಆಪ್‌ ಅನ್ನು ಸಿಜೆಐ ಎನ್‌ವಿ ರಮಣ ಬಿಡುಗಡೆ ಮಾಡಿದರು. ಈ ವೇಳೆ ಅವರು ನ್ಯಾಯಾಲಯ ಕಲಾಪದ ನೇರ ಪ್ರಸಾರದ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.

'ನಾನೂ ಪತ್ರಕರ್ತನಾಗಿದ್ದೆ': ಸುಪ್ರೀಂಕೋರ್ಟ್ ಕಲಾಪ ನೇರಪ್ರಸಾರದ ಬಗ್ಗೆ ಸಿಜೆಐ ರಮಣ ಒಲವು
Linkup
ಹೊಸದಿಲ್ಲಿ: ಸುಪ್ರೀಂಕೋರ್ಟ್‌ನ ಕಲಾಪಗಳನ್ನು ಮಾಧ್ಯಮಗಳಲ್ಲಿ ನೇರ ಪ್ರಸಾರ ಮಾಡುವ ಪ್ರಸ್ತಾವವನ್ನು ತಾವು ಸಕ್ರಿಯವಾಗಿ ಪರಿಗಣಿಸುತ್ತಿರುವುದಾಗಿ ಮುಖ್ಯ ನ್ಯಾಯಮೂರ್ತಿ ಗುರುವಾರ ತಿಳಿಸಿದ್ದಾರೆ. ಆದರೆ, ಈ ಸಂಬಂಧ ಅಂತಿಮ ಹೆಜ್ಜೆ ಇಡುವ ಮುನ್ನ, ಸುಪ್ರೀಂಕೋರ್ಟ್‌ನಲ್ಲಿನ ತಮ್ಮ ಸಹೋದ್ಯೋಗಿಗಳ ಸಾಮಾನ್ಯ ಒಪ್ಪಿಗೆಯನ್ನು ಕೇಳುವುದಾಗಿ ಅವರು ತಿಳಿಸಿದ್ದಾರೆ. ಪ್ರತಿನಿಧಿಗಳಿಗೆ ಆನ್‌ಲೈನ್ ಕಲಾಪಗಳಿಗೆ ಪ್ರವೇಶ ಒದಗಿಸುವ ಅಪ್ಲಿಕೇಷನ್‌ನ ಬಿಡುಗಡೆ ಸಂದರ್ಭದಲ್ಲಿ ನ್ಯಾ. ರಮಣ ಮಾತನಾಡಿದರು. ತಾವು ಪತ್ರಕರ್ತರಾಗಿದ್ದ ದಿನಗಳನ್ನು ನೆನಪಿಸಿಕೊಂಡಿರುವ ನ್ಯಾ. ಎನ್‌ವಿ ರಮಣ, ವರದಿಗಾರಿಕೆಯಲ್ಲಿ ಮಾಧ್ಯಮಗಳು ಬಹುದೊಡ್ಡ ಸವಾಲುಗಳನ್ನು ಎದುರಿಸುತ್ತಿವೆ ಮತ್ತು ನ್ಯಾಯಾಲಯದ ಕಲಾಪಗಳ ಕುರಿತು ವಿವರಗಳನ್ನು ಪಡೆಯಲು ವಕೀಲರನ್ನು ಅವಲಂಬಿಸಬೇಕಾಗಿದೆ. ಹೀಗಾಗಿ ಪತ್ರಿಕೆಗಳೂ ಕಲಾಪಕ್ಕೆ ಹಾಜರಾಗಲು ಅವಕಾಶ ನೀಡುವ ವ್ಯವಸ್ಥೆಯೊಂದನ್ನು ಸೃಷ್ಟಿಸಲು ಮನವಿಗಳು ಬಂದಿವೆ ಎಂದು ಹೇಳಿದ್ದಾರೆ. 'ನಾನು ಕೂಡ ಕೆಲವು ಸಮಯ ಪತ್ರಕರ್ತನಾಗಿದ್ದೆ. ಆ ಸಮಯದಲ್ಲಿ ನಮ್ಮ ಬಳಿ ಕಾರ್ ಅಥವಾ ಬೈಕ್ ಇರಲಿಲ್ಲ. ಬಸ್‌ನಲ್ಲಿಯೇ ಓಡಾಡಬೇಕಿತ್ತು. ಹಾಗೆಯೇ ಕಾರ್ಯಕ್ರಮ ಆಯೋಜಕರಿಂದ ಭತ್ಯೆ ಪಡೆಯಬಾರದು ಎಂದು ಸೂಚಿಸುತ್ತಿದ್ದರು' ಎಂದು ಸ್ಮರಿಸಿಕೊಂಡಿದ್ದಾರೆ. ಮಾಧ್ಯಮಗಳು ಆಪ್ ಸಂಪನ್ಮೂಲವನ್ನು ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿರುವ ಅವರು, ಹೊಸದಾಗಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನವು ಬಹಳ ಸೂಕ್ಷ್ಮವಾಗಿದೆ ಮತ್ತು ಆರಂಭದ ದಿನಗಳಲ್ಲಿ ಬಳಸುವಾಗ ಕೆಲವು ತೊಂದರೆಗಳು ಎದುರಾಗಬಹುದು ಎಂದಿದ್ದಾರೆ. 'ಕೆಲವು ಸಣ್ಣಪುಟ್ಟ ತೊಂದರೆಗಳು ಎದುರಾಗಬಹುದು. ಅವುಗಳನ್ನು ಅನಗತ್ಯವಾಗಿ ವೈಭವೀಕರಿಸಬಾರದು. ಎಲ್ಲರೂ ತಾಳ್ಮೆಯಿಂದ ಇರುವಂತೆ ಕೋರುತ್ತೇನೆ. ಈ ವ್ಯವಸ್ಥೆಯು ಸರಿಯಾದ ರೂಪ ಪಡೆಯಲು ಹಾಗೂ ವಿಸ್ತರಣೆಯಾಗಲು ಸಮಯ ಬೇಕಾಗುತ್ತದೆ' ಎಂದು ಹೇಳಿದ್ದಾರೆ.