ತೌಕ್ತೆ ಚಂಡಮಾರುತದ ಪ್ರಹಾರಕ್ಕೆ ನಲುಗಿದ ಗುಜರಾತ್‌, ಮಹಾರಾಷ್ಟ್ರದಲ್ಲಿ 6 ಸಾವು

ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ ತೌಕ್ತೆ ಚಂಡಮಾರುತ ಸೋಮವಾರ ಮಹಾರಾಷ್ಟ್ರ, ಗುಜರಾತ್‌ ತೀರ ಪ್ರದೇಶಗಳನ್ನು ಜರ್ಝರಿತಗೊಳಿಸಿದ್ದು, ಮಹಾರಾಷ್ಟ್ರದಲ್ಲಿ ಮಳೆ ಸುರಿಸಿದ ಸೈಕ್ಲೋನ್‌ ಪ್ರತ್ಯೇಕ ಪ್ರಕರಣಗಳಲ್ಲಿ 6 ಮಂದಿಯನ್ನು ಬಲಿ ಪಡೆದಿದೆ.

ತೌಕ್ತೆ ಚಂಡಮಾರುತದ ಪ್ರಹಾರಕ್ಕೆ ನಲುಗಿದ ಗುಜರಾತ್‌, ಮಹಾರಾಷ್ಟ್ರದಲ್ಲಿ 6 ಸಾವು
Linkup
ಅಹಮದಾಬಾದ್‌/ಮುಂಬಯಿ: ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ ಚಂಡಮಾರುತ ಸೋಮವಾರ ಮತ್ತು ತೀರ ಪ್ರದೇಶಗಳನ್ನು ಜರ್ಝರಿತಗೊಳಿಸಿದೆ. ಸೋಮವಾರ ರಾತ್ರಿ ಗುಜರಾತ್‌ ತೀರಕ್ಕೆ ಗಂಟೆಗೆ 185 ಕಿ.ಮೀ. ವೇಗದಲ್ಲಿ ಅಪ್ಪಳಿಸಿದೆ. ಬೆಳಗಿನಿಂದಲೇ ಮಹಾರಾಷ್ಟ್ರದ ಕೊಂಕಣ, ಸೌರಾಷ್ಟ್ರ ಪ್ರದೇಶಗಳಲ್ಲಿ ಭಾರಿ ಬಿರುಗಾಳಿ ಮತ್ತು ಮಳೆ ಸುರಿಸಿದ ಸೈಕ್ಲೋನ್‌ ಪ್ರತ್ಯೇಕ ಪ್ರಕರಣಗಳಲ್ಲಿ 6 ಮಂದಿಯನ್ನು ಬಲಿ ಪಡೆದಿದೆ. ಮುಂಬಯಿ ನಗರವೂ ಮಹಾಮಳೆಗೆ ತತ್ತರಿಸಿದೆ. ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸಾವಿರಾರು ಮರಗಳು, ವಿದ್ಯುತ್‌ ಕಂಬಗಳು ಧರಾಶಾಹಿಯಾಗಿವೆ. ಕಟ್ಟಡಗಳು ಕುಸಿದಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ರೈಲು ಮತ್ತು ವಿಮಾನ ಸೇವೆ ಸ್ಥಗಿತಗೊಂಡಿದೆ. ಗುಜರಾತ್‌ನಲ್ಲಿ 1.5 ಲಕ್ಷ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಮಹಾರಾಷ್ಟ್ರದಲ್ಲಿ ತೌಕ್ತೆ ಅಬ್ಬರ ಕೋವಿಡ್‌ ಸೋಂಕು ಹಾವಳಿಯಿಂದ ಜರ್ಝರಿತಗೊಂಡಿರುವ ಮಹಾರಾಷ್ಟ್ರದಲ್ಲಿ ಸೋಮವಾರ ತೌಕ್ತೆ ಮರಣ ಮೃದಂಗ ಬಾರಿಸಿತು. ಕೊಂಕಣ ಪ್ರದೇಶದಲ್ಲಿ ಚಂಡಮಾರುತದ ರುದ್ರ ನರ್ತನಕ್ಕೆ ಆರು ಮಂದಿ ಬಲಿಯಾಗಿದ್ದಾರೆ. ಕಡಲ ಒಡಲಲ್ಲಿ ಎರಡು ದೋಣಿಗಳು ಮುಳುಗಿದ್ದು, ಮೂವರು ನಾವಿಕರು ಕಣ್ಮರೆಯಾಗಿದ್ದಾರೆ. ಕುಂಭದ್ರೋಣ ಮಳೆಗೆ ಮುಂಬಯಿ ಮಹಾನಗರ ಮುದುಡಿ ಹೋಗಿದೆ. ಗೋವಾ ಕಿನಾರೆಯಿಂದ ಗಂಟೆಗೆ 105 ಕಿ.ಮೀ ವೇಗದಲ್ಲಿ ನುಗ್ಗಿ ಬಂದ ತೌಕ್ತೆ, ಭಾನುವಾರ ಮಧ್ಯೆ ರಾತ್ರಿ ವೇಳೆಗೆ ಮಹಾರಾಷ್ಟ್ರ ಕರಾವಳಿಗೆ ಲಗ್ಗೆ ಹಾಕಿತು. ರಕ್ಕಸ ಅಲೆಗಳ ರಭಸಕ್ಕೆ ಕಡಲ ತಡೆಗೋಡೆಗಳು ಚಿಂದಿಯಾದವು. ಮಳೆ ಮತ್ತು ಬಿರುಗಾಳಿಯ ಆರ್ಭಟಕ್ಕೆ ಸಿಲುಕಿದ ಸಾವಿರಾರು ಮರಗಳು ಧರೆಗುರುಳಿದವು. ರಾಯಗಢ ಜಿಲ್ಲೆಯಲ್ಲಿ ಮರ ಮತ್ತು ವಿದ್ಯುತ್‌ ಕಂಬಗಳು ಮುರಿದು ಬಿದ್ದು ಮೂವರು ಮೃತಪಟ್ಟಿದ್ದಾರೆ. ಸಿಂಧುದುರ್ಗ ಜಿಲ್ಲೆಯಲ್ಲಿ ನಾವಿಕನೊಬ್ಬ ಕೊಚ್ಚಿ ಹೋಗಿದ್ದಾರೆ. ನವಿ ಮುಂಬಯಿ ಮತ್ತು ಉಲ್ಲಾಸ್‌ ನಗರ ಪ್ರದೇಶಗಳಲ್ಲಿ ಮರಗಳು ಉರುಳಿ ಬಿದ್ದು ಇಬ್ಬರು ಅಸುನೀಗಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ರಾಯಗಢ ಜಿಲ್ಲೆಯ ಕರಾವಳಿ ಭಾಗ ಅತಿ ಹೆಚ್ಚು ಬಾಧಿತಗೊಂಡಿದೆ. ಈ ಜಿಲ್ಲೆಯಲ್ಲಿ 2 ಸಾವಿರ ಮನೆಗಳು ಜಖಂಗೊಂಡಿವೆ. ಐದು ಮನೆಗಳು ಸಂಪೂರ್ಣ ನಾಶ ಹೊಂದಿವೆ. ಜಿಲ್ಲೆಯಿಂದ 2299 ಕುಟುಂಬಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ತಿಳಿಸಿದ್ದಾರೆ. "ಸಂಕಷ್ಟ ಪೀಡಿತ ಪ್ರದೇಶಗಳಲ್ಲಿ ಸಮರೋಪಾದಿ ಪರಿಹಾರ ಕಾರ್ಯಗಳು ನಡೆದಿವೆ. ಹೆಚ್ಚುವರಿ ರಕ್ಷಣಾ ತಂಡಗಳನ್ನು ಕಳಿಸಿಕೊಡಲಾಗಿದೆ. ಅಪಾಯದ ದಡದಲ್ಲಿರುವ ಜನರನ್ನು ರಕ್ಷಣೆ ಮಾಡುವ ಕೆಲಸಕ್ಕೆ ಆದ್ಯತೆ ನೀಡಲಾಗಿದೆ,'' ಎಂದು ಪವಾರ್‌ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಪರಿಸ್ಥಿತಿಯ ಮಾಹಿತಿ ಪಡೆದರು.