ಪಶ್ಚಿಮ ಬಂಗಾಳದ ಸಚಿವರಿಬ್ಬರನ್ನು ಬಂಧಿಸಿದ ಸಿಬಿಐ, ತನಿಖಾ ದಳದ ಕಚೇರಿಗೆ ದೌಡಾಯಿಸಿದ ದೀದಿ

ನಾರದಾ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪಶ್ಚಿಮ ಬಂಗಾಳದ ಇಬ್ಬರು ಸಚಿವರಾದ ಫಿರ್ಹಾದ್‌ ಹಕೀಮ್‌ ಮತ್ತು ಸುಬ್ರತಾ ಮುಖರ್ಜಿಯನ್ನು ಬಂಧಿಸಿದೆ. ಘಟನೆಯಿಂದ ಕೆರಳಿರುವ ಮಮತಾ ಬ್ಯಾನರ್ಜಿ ಸಿಬಿಐ ಕಚೇರಿಗೇ ದೌಡಾಯಿಸಿದ್ದಾರೆ.

ಪಶ್ಚಿಮ ಬಂಗಾಳದ ಸಚಿವರಿಬ್ಬರನ್ನು ಬಂಧಿಸಿದ ಸಿಬಿಐ, ತನಿಖಾ ದಳದ ಕಚೇರಿಗೆ ದೌಡಾಯಿಸಿದ ದೀದಿ
Linkup
ಹೊಸದಿಲ್ಲಿ: ನಾರದಾ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಇಬ್ಬರು ಸಚಿವರಾದ ಫಿರ್ಹಾದ್‌ ಹಕೀಮ್‌ ಮತ್ತು ಸುಬ್ರತಾ ಮುಖರ್ಜಿಯನ್ನು ಸೋಮವಾರ ಬಂಧಿಸಿದೆ. ಈ ಘಟನೆಯಿಂದ ಕೆರಳಿರುವ ಸಿಎಂ ಕೊಲ್ಕೊತ್ತಾದಲ್ಲಿರುವ ಸಿಬಿಐ ಕಚೇರಿಗೆ ದೌಡಾಯಿಸಿದ್ದಾರೆ. ನಿಜಾಮ್‌ ಪ್ಯಾಲೇಸ್‌ನಲ್ಲಿರುವ ಸಿಬಿಐ ಕಚೇರಿಯಲ್ಲಿ 45 ನಿಮಿಷಗಳ ಕಾಲ ಇದ್ದ ದೀದಿ, "ಸರಿಯಾದ ಕಾರ್ಯವಿಧಾನವಿಲ್ಲದೆ ಅವರನ್ನು ಬಂಧಿಸಿರುವ ರೀತಿಯಲ್ಲೇ ಸಿಬಿಐ ನನ್ನನ್ನು ಸಹ ಬಂಧಿಸಬೇಕಾಗುತ್ತದೆ,” ಎಂದು ಗುಡುಗಿದ್ದಾರೆ ಎಂದು ತಿಳಿದು ಬಂದಿದೆ. ಸಚಿವರು ಬಂಧಿತರಾಗುತ್ತಿದ್ದಂತೆ ಸಿಬಿಐ ಕಚೇರಿಯ ಹೊರಗಡೆ ತೃಣಮೂಲ ಕಾಂಗ್ರೆಸ್‌ ಬೆಂಲಿಗರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಒಂದು ಹಂತದಲ್ಲಿ ಕಲ್ಲು ತೂರಾಟವೂ ಆರಂಭಗೊಂಡಿತು. ಬೆನ್ನಿಗೆ ಟ್ಟೀಟ್‌ ಮಾಡಿದ ರಾಜ್ಯಪಾಲ ಜಗದೀಪ್‌ ಧನ್‌ಕರ್‌, ರಾಜ್ಯದಲ್ಲಿ ಕಾನೂನುಬಾಹಿರತೆ ಮತ್ತು ಅರಾಜಕತೆ ಸೃಷ್ಟಿಯಾಗಿದೆ. ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ನಂತರ ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್‌ ಬ್ಯಾನರ್ಜಿ ಶಾಂತಿ ಕಾಪಾಡುವಂತೆ ಅಭಿಮಾನಿಗಳಿಗೆ ಮನವಿ ಮಾಡಿದರು. ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದ್ದು, ಇದನ್ನು ಕಾನೂನಿನ ಮೂಲಕವೇ ಎದುರಿಸಲಾಗುವುದು ಎಂದು ಹೇಳಿದರು. ಸೋಮವಾರ ಬೆಳಿಗ್ಗೆ ಕೇಂದ್ರ ಭದ್ರತಾ ಪಡೆಗಳು ಸಚಿವರಿಬ್ಬರ ನಿವಾಸದ ಮುಂದೆ ಬಂದಿಳಿದಿದ್ದವು. ನಂತರ ಇಬ್ಬರನ್ನೂ ಸಿಬಿಐ ವಶಕ್ಕೆ ಪಡೆದುಕೊಂಡಿತ್ತು. ಇವರ ಜತೆಗೆ ಟಿಎಂಸಿ ಶಾಸಕ ಮದನ್‌ ಮಿತ್ರ ಹಾಗೂ ಟಿಎಂಸಿ ಮಾಜಿ ನಾಯಕ ಸೋವನ್‌ ಚಟರ್ಜಿಯನ್ನೂ ಬಂಧಿಸಲಾಗಿದೆ. ಕೋಲ್ಕೊತ್ತಾ ಮೇಯರ್‌ ಆಗಿದ್ದ ಚಟರ್ಜಿ 2019ರಲ್ಲಿ ಬಿಜೆಪಿ ಸೇರಿದ್ದರು. ನಂತರ ಮಾರ್ಚ್‌ನಲ್ಲಿ ಬಿಜೆಪಿಯನ್ನೂ ತೊರೆದಿದ್ದರು. ಈಗ ಬಿಜೆಪಿಯ ನಾಯಕರಾಗಿರುವ ಮುಕುಲ್‌ ರಾಯ್‌ ಮತ್ತು ಸುವೇಂದು ಅಧಿಕಾರಿ ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದಿದ್ದರು ಎನ್ನಲಾಗಿದೆ. ಆಗ ಸಂಸತ್‌ ಸದಸ್ಯರಾಗಿದ್ದ ಇಬ್ಬರೂ ನಂತರ ಬಿಜೆಪಿ ಸೇರಿದರು. ಈಗ ಅವರಿಬ್ಬರು ಬಿಜೆಪಿ ಶಾಸಕರಾಗಿದ್ದಾರೆ. ಆದರೆ ಇವರಿಬ್ಬರ ಮೇಲೆ ಕ್ರಮ ಕೈಗೊಳ್ಳಲು ಒಪ್ಪಿಗೆ ನೀಡಿಲ್ಲ. ಈ ತಿಂಗಳ ಆರಂಭದಲ್ಲಿ ಈಗ ಬಂಧಿತರಾಗಿರುವ ನಾಲ್ವರ ಮೇಲೆ ಮಾತ್ರ ಕ್ರಮ ಕೈಗೊಳ್ಳಲು ರಾಜ್ಯಪಾಲರು ಒಪ್ಪಿಗೆ ನೀಡಿದ್ದರು. ಸಾಮಾನ್ಯವಾಗಿ ಸ್ಪೀಕರ್‌ ವಿಚಾರಣೆಗೆ, ತನಿಖೆಗೆ ಅನುಮತಿ ನೀಡಬೇಕು. ಆದರೆ ಸ್ಪೀಕರ್‌ರನ್ನು ಬಿಟ್ಟು ನೇರವಾಗಿ ರಾಜ್ಯಪಾಲರನ್ನು ಸಿಬಿಐ ಜನವರಿಯಲ್ಲಿ ಸಂಪರ್ಕಿಸಿತು. ಸಿಬಿಐ ಮನವಿ ಮೇರೆಗೆ ತಿಂಗಳ ಆರಂಭದಲ್ಲಿ ರಾಜ್ಯಪಾಲರು ತನಿಖೆಗೆ ಒಪ್ಪಿಗೆ ನೀಡಿದ್ದರು. ತಮ್ಮಿಂದ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರಿಂದ ತಮಗೆ ಹೀಗೆ ಒಪ್ಪಿಗೆ ನೀಡುವ ಅಧಿಕಾರವಿದೆ ಎಂದು ರಾಜ್ಯಪಾಲರು ವಾದಿಸಿದ್ದರು. ಈ ಹಿಂದಿನ ಅವಧಿಯಲ್ಲಿ ಈ ನಾಲ್ವರೂ ಮಮತಾ ಸಂಪುಟದಲ್ಲಿ ಸಚಿವರಾಗಿದ್ದರು. ಹೀಗೆ ಸಚಿವರಾಗಿದ್ದಾಲೇ 2014ರಲ್ಲಿ ಈ ಲಂಚ ಪ್ರಕರಣದ ಟೇಪ್‌ ಹೊರಬಿದ್ದಿತ್ತು. ಫಿರ್ಹಾದ್‌ ಹಕೀಂ ಮತ್ತು ಸುಬ್ರತಾ ಮುಖರ್ಜಿ ಇದೀಗ ಮತ್ತೆ ಮಮತಾ ಸಂಪುಟದಲ್ಲಿ ಸಚಿವರಾಗಿ ನೇಮಕಗೊಂಡಿದ್ದಾರೆ. 2014ರಲ್ಲಿ ನಾರದಾ ನ್ಯೂಸ್‌ ಪೋರ್ಟಲ್‌ ಕುಟುಕು ಕಾರ್ಯಾಚರಣೆ ಮಾಡಿದಾಗ ಈ ಎಲ್ಲಾ ಬಂಧಿತರು 4-5 ಲಕ್ಷ ರೂ. ಲಂಚ ಸ್ವೀಕರಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ನಾಲ್ವರು ಬಂಧಿತರಾಗಿದ್ದು, ಇವರ ಬಂಧನದ ಸಮಯ-ಸಂದರ್ಭವನ್ನು ಟಿಎಂಸಿ ಸೇರಿ ಹಲವು ಪಕ್ಷಗಳು ಪ್ರಶ್ನೆ ಮಾಡಿವೆ. ಕೊರೊನಾ ಬಿಕ್ಕಟ್ಟು ಉಲ್ಬಣಿಸಿರುವಾಗ ಹಾಗೂ ಭಾರಿ ಜಯದೊಂದಿಗೆ ಬಂಗಾಳದಲ್ಲಿ ಮೂರನೇ ಬಾರಿಗೆ ಮಮತಾ ಬ್ಯಾನರ್ಜಿ ಅಧಿಕಾರಕ್ಕೇರಿದ ನಂತರ ಬಿಜೆಪಿ-ಟಿಎಂಸಿ ನಡುವಿನ ತಿಕ್ಕಾಟ ಜೋರಾಗಿರುವಾಗಲೇ ಈ ಬಂಧನದ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಒಟ್ಟು 7 ಸಂಸದರು, ನಾಲ್ಕು ಜನ ಸಚಿವರು, ಓರ್ವ ಶಾಸಕ ಹಾಗೂ ಓರ್ವ ಪೊಲೀಸ್‌ ಅಧಿಕಾರಿಗೆ ಸಂಬಂಧಿಸಿದಂತೆ ಸ್ಟಿಂಗ್‌ ಆಪರೇಷನ್‌ ವಿಡಿಯೋಗಳು ಬಿಡುಗಡೆಯಾಗಿದ್ದವು. ಸಿಬಿಐ ಸೌಗತಾ ರಾಯ್‌, ಕಕೋಲಿ ಘೋಷ್‌ ದಸ್ತಿದಾರ್‌, ಪ್ರಸುನ್‌ ಬ್ಯಾನರ್ಜಿ ಮತ್ತು ಅಪರೂಪ ಪೊದ್ದಾರ್‌ ವಿರುದ್ಧದ ತನಿಖೆಗೂ ಅನುಮತಿ ಕೇಳಿತ್ತು. ಆದರೆ ಲೋಕಸಭಾ ಸ್ಪೀಕರ್‌ ಇವರ ವಿರುದ್ಧದ ತನಿಖೆಗೆ ಅನುಮತಿ ನೀಡಿಲ್ಲ.