![](https://vijaykarnataka.com/photo/86036709/photo-86036709.jpg)
ಅತ್ತ ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್ನಲ್ಲಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಮಾದಕ ವಸ್ತುಗಳನ್ನು ಸೇವಿಸಿರುವುದು ಎಫ್ಎಸ್ಎಲ್ ವರದಿಯಲ್ಲಿ ದೃಢಪಟ್ಟಿದ್ದರೆ, ಇತ್ತ ಡ್ರಗ್ಸ್ ಕೇಸ್ನಲ್ಲಿ ನಿರೂಪಕಿ ಹೆಸರು ಮತ್ತೆ ತಳುಕು ಹಾಕಿಕೊಂಡಿದೆ.
‘’ಅನುಶ್ರೀ ಡ್ರಗ್ಸ್ ಸೇವಿಸುತ್ತಿದ್ದರು. ನಮಗೆ ಅವರೇ ಡ್ರಗ್ಸ್ ತೆಗೆದುಕೊಂಡು ಬರುತ್ತಿದ್ದರು’’ ಎಂದು ಪೊಲೀಸರ ಮುಂದೆ ಕಿಶೋರ್ ಅಮನ್ ಶೆಟ್ಟಿ ನೀಡಿರುವ ಹೇಳಿಕೆ ಚಾರ್ಜ್ ಶೀಟ್ನಲ್ಲಿ ಉಲ್ಲೇಖವಾಗಿದೆ. ಪೊಲೀಸರಿಗೆ ಕಿಶೋರ್ ಅಮನ್ ಶೆಟ್ಟಿ ಕೊಟ್ಟಿರುವ ಹೇಳಿಕೆ ಮತ್ತು ಸಹಿ ಹಾಕಿರುವ ಪ್ರತಿ ಮಾಧ್ಯಮಗಳಿಗೆ ಲಭ್ಯವಾಗಿದೆ. ಇದು ಜಗಜ್ಜಾಹೀರಾದ ಕೂಡಲೆ, ‘’ನಾನು ಅನುಶ್ರೀ ಬಗ್ಗೆ ಆ ರೀತಿ ಹೇಳಿಯೇ ಇಲ್ಲ’’ ಎಂದು ಕಿಶೋರ್ ಅಮನ್ ಶೆಟ್ಟಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.
ಈ ಮಧ್ಯೆ ಕೂಡ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿದ್ದಾರೆ. ‘’ಮಂಗಳೂರು ಡ್ರಗ್ಸ್ ಕೇಸ್ಅನ್ನು ಮರು ತನಿಖೆ ಮಾಡಬೇಕು. ಮರು ತನಿಖೆ ಮಾಡಿದರೆ ಖಂಡಿತ ಅನುಶ್ರೀ ಕಂಬಿ ಹಿಂದೆ ಹೋಗುತ್ತಾರೆ. ಮಂಗಳೂರು ಡ್ರಗ್ಸ್ ವಿಚಾರಬಿಟ್ಟು ಬೆಂಗಳೂರು ಕೇಸ್ ಬಗ್ಗೆ ಮಾತ್ರ ಫೋಕಸ್ ಮಾಡುವಂತೆ ರಾಜಕಾರಣಿಯೊಬ್ಬರಿಂದ ಫೋನ್ ಕಾಲ್ ಬಂದಿತ್ತು. ಈ ಆಡಿಯೋ ಕ್ಲಿಪ್ಅನ್ನು ಆದಷ್ಟು ಬೇಗ ಬಿಡುಗಡೆ ಮಾಡುತ್ತೇನೆ’’ ಎಂದು ಮಾಧ್ಯಮಗಳಿಗೆ ಪ್ರಶಾಂತ್ ಸಂಬರಗಿ ತಿಳಿಸಿದ್ದಾರೆ.
ಪ್ರಶಾಂತ್ ಸಂಬರಗಿ ಹೇಳಿದ್ದೇನು?
‘’ಮಂಗಳೂರು ಡ್ರಗ್ಸ್ ಪ್ರಕರಣವನ್ನು ಪೊಲೀಸರು ಮರು ತನಿಖೆ ಮಾಡಬೇಕು. ಮರು ತನಿಖೆ ಮಾಡಿದರೆ, ಖಂಡಿತ ಅನುಶ್ರೀ ಕಂಬಿ ಹಿಂದೆ ಹೋಗುವ ಸಾಧ್ಯತೆ ಇದೆ. ಅನುಶ್ರೀ ಮುಖವಾಡ ಇವತ್ತು ಕಳಚಿ ಬಿದ್ದಿದೆ. ಕಿಶೋರ್ ಕೊಟ್ಟಿರುವ ಹೇಳಿಕೆ ಸುಳ್ಳು ಅಂತ ಹೇಳಬಹುದು. ಆದರೆ, ಮನಃಸಾಕ್ಷಿ ಅನ್ನೋದು ಇದ್ದೇ ಇರುತ್ತದೆ. ಅವರ 12 ಕೋಟಿಯ ಮಂಗಳೂರು ಮನೆ, 4 ಕೋಟಿಯ ಬೆಂಗಳೂರು ಮನೆ.. ಎಲ್ಲವೂ ಟಿವಿ ಲೋಕದಿಂದಲೇ ಬಂದಿದ್ದರೆ ನಾನು ಶಭಾಷ್ ಹೇಳುತ್ತೇನೆ’’
‘’ನನಗೆ ರಾಜಕಾರಣಿಯೊಬ್ಬರಿಂದ ಫೋನ್ ಬಂದಿತ್ತು. ಬೆಂಗಳೂರು ಕೇಸ್ ಫೋಕಸ್ ಮಾಡಿ, ಮಂಗಳೂರು ಕೇಸ್ ಬೇಡ ಅಂತ ಹೇಳಿದ್ದರು. ಈಗ ನಾನು ಆ ದೂರವಾಣಿ ಕರೆಯನ್ನು ಬಿಡುಗಡೆ ಮಾಡುವ ಪರಿಸ್ಥಿತಿ ಉದ್ಭವವಾಗಿದೆ. ಸದ್ಯದಲ್ಲೇ 28 ಸೆಕೆಂಡ್ಗಳ ಆಡಿಯೋ ಬಾಂಬ್ ಸಿಡಿಸುತ್ತೇನೆ’’
‘’ಪಂಜಾಬ್ನಲ್ಲಿ ಡ್ರಗ್ಸ್ ನಿಂದ ಆಗಿರುವ ಅನಾಹುತವನ್ನ ಎಲ್ಲರೂ ನೋಡಿದ್ದೀರಾ. ಕರ್ನಾಟಕ ಆ ರೀತಿ ಆಗುವುದು ಬೇಡ ಅಂತ ನಾನು ಹೋರಾಟ ಮಾಡುತ್ತಿದ್ದೇನೆ. ಇದು ಪಬ್ಲಿಸಿಟಿ ಸ್ಟಂಟ್ ಅಲ್ಲ. ಡ್ರಗ್ಸ್ ಪ್ರಕರಣವನ್ನು ರೀ-ಓಪನ್ ಮಾಡಿ. ಕೊರೊನಾ ಬಂದಿರಲಿಲ್ಲ ಅಂದ್ರೆ ‘ಉಡ್ತಾ ಕರ್ನಾಟಕ’ ಆಗಿರುತ್ತಿತ್ತು. ಸ್ಕೂಲ್, ಕಾಲೇಜ್ ಓಪನ್ ಆಗದೇ ಇರೋದಕ್ಕೆ ಡ್ರಗ್ಸ್ ವ್ಯವಹಾರ ಕಡಿಮೆ ಆಗಿದೆ. ಡ್ರಗ್ಸ್ನಿಂದ ಹೊರಬಂದಿರುವವರನ್ನು ನಾನು ನಿಮ್ಮೆಲ್ಲರ ಮುಂದೆ ಕೂರಿಸುತ್ತೇನೆ. ನಾನು ಬರೆದಿರುವ ‘ಶುಗರ್ ಡ್ಯಾಡಿ’ ಪುಸ್ತಕವನ್ನು ನವೆಂಬರ್ 1 ರಂದು ಬಿಡುಗಡೆ ಮಾಡುತ್ತೇನೆ. ನಾಗೇಂದ್ರ ಪ್ರಸಾದ್ ಬರೆದಿರುವ ‘ನಶೆ ನಶೆ ಎಂದರೆ..’ ಹಾಡು ಕೂಡ ಅಂದೇ ಬಿಡುಗಡೆಯಾಗುತ್ತದೆ. ಅವತ್ತೇ ನಾನು ಆಡಿಯೋ ಬಾಂಬ್ ಸಿಡಿಸುತ್ತೇನೆ. ನಾನು ಮಾತಿಗೆ ತಪ್ಪಿಲ್ಲ. ತಪ್ಪುವುದೂ ಇಲ್ಲ. ನನಗೆ ಬಂದಿರುವ ಕಾಲ್ನಲ್ಲಿನ ವಾಯ್ಸ್ ಕೇಳಿಸಿಕೊಂಡರೆ ಚಿಕ್ಕಮಕ್ಕಳೂ ಕೂಡ ಕಂಡುಹಿಡಿಯುತ್ತಾರೆ. ಅದು 28 ಸೆಕೆಂಡ್ನ ಆಡಿಯೋ ಕ್ಲಿಪ್’’ ಎಂದು ಮಾಧ್ಯಮಗಳ ಮುಂದೆ ಪ್ರಶಾಂತ್ ಸಂಬರಗಿ ಹೇಳಿದರು.
ಇನ್ನೂ, ‘’ಮುಂದಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯ ದೊಡ್ಡ ಬೇಟೆಯಾಡಲಿದೆ. ಅದು ಕರ್ನಾಟಕದಲ್ಲಿ ದೊಡ್ಡ ನ್ಯೂಸ್ ಆಗಲಿದೆ. ಇನ್ನು ಹತ್ತು ದಿನಗಳಲ್ಲಿ ಜಾರಿ ನಿರ್ದೇಶನಾಲಯ ಒಬ್ಬರನ್ನು ಅರೆಸ್ಟ್ ಮಾಡುತ್ತಾರೆ’’ ಅಂತಲೂ ಪ್ರಶಾಂತ್ ಸಂಬರಗಿ ತಿಳಿಸಿದರು.