ಜಂತರ್ ಮಂತರ್‌ನಲ್ಲಿ ರೈತರ ಪ್ರತಿಭಟನೆ: ಗಡಿ ಭಾಗಗಳಲ್ಲಿ ಭಾರಿ ಭದ್ರತೆ

ಮುಂಗಾರು ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಗಮನ ಸೆಳೆಯಲು ರೈತ ಸಂಘಟನೆಗಳು ಜಂತರ್ ಮಂತರ್‌ನಲ್ಲಿ ಗುರುವಾರ ಪ್ರತಿಭಟನೆ ಆಯೋಜಿಸಿವೆ. ಪೊಲೀಸರು ಗಡಿಯಲ್ಲಿ ಬಿಗಿ ಭದ್ರತೆ ಆಯೋಜಿಸಿದ್ದಾರೆ.

ಜಂತರ್ ಮಂತರ್‌ನಲ್ಲಿ ರೈತರ ಪ್ರತಿಭಟನೆ: ಗಡಿ ಭಾಗಗಳಲ್ಲಿ ಭಾರಿ ಭದ್ರತೆ
Linkup
ಹೊಸದಿಲ್ಲಿ: ಮುಂಗಾರು ಅಧಿವೇಶನದ ನಡುವೆ ಕೇಂದ್ರ ಸರಕಾರದ ಹೊಸ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ಗುರುವಾರ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ರದ್ದತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ರೈತರಿಗೆ ಪೊಲೀಸರು ಅನುಮತಿ ನೀಡಿದ್ದಾರೆ. ಕಾಯ್ದೆಗಳ ವಿರುದ್ಧ ದಿಲ್ಲಿಯ ಸುತ್ತಮುತ್ತಲೂ ಅನೇಕ ಭಾಗಗಳಲ್ಲಿ ನಡೆಯುತ್ತಿವೆ. ಈ ವಿಭಿನ್ನ ಪ್ರತಿಭಟನಾ ಸ್ಥಳಗಳಿಂದ ರೈತರು ಸಿಂಘು ಗಡಿಯಲ್ಲಿ ಸೇರಲಿದ್ದು, ಅಲ್ಲಿಂದ ಜಂತರ್ ಮಂತರ್‌ನತ್ತ ಮೆರವಣಿಗೆ ಸಾಗಲಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮತ್ತು ಜಂತರ್ ಮಂತರ್ ಪ್ರದೇಶದಲ್ಲಿ ಭಾರಿ ಭದ್ರತೆ ನಿಯೋಜಿಸಲಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸುವ ಜನರ ಸಂಖ್ಯೆಗೆ ಮಿತಿ ಹೇರಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾದ (ಎಸ್‌ಕೆಎಂ) ಗರಿಷ್ಠ 200 ಸದಸ್ಯರು, ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ (ಕೆಎಂಎಸ್‌ಸಿ) ಗರಿಷ್ಠ ಆರು ಮಂದಿಗಿಂತ ಹೆಚ್ಚಿಲ್ಲದಂತೆ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಲಾಗಿದೆ. ಪ್ರತಿ ದಿನ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಕೋವಿಡ್ 19 ಶಿಷ್ಟಾಚಾರಗಳನ್ನು ಪಾಲಿಸಬೇಕು ಎಂಬ ಷರತ್ತಿನೊಂಡಿಗೆ ದಿಲ್ಲಿ ಸರಕಾರ ಕೂಡ ರೈತರ ಪ್ರತಿಭಟನೆಗೆ ಅನುಮತಿ ನೀಡಿದೆ. ಸಿಂಘು ಗಡಿಯಿಂದ ಬಸ್‌ಗಳಲ್ಲಿ ಜಂತರ್ ಮಂತರ್‌ನ ಸೂಚಿತ ಪ್ರತಿಭಟನಾ ಸ್ಥಳಕ್ಕೆ ರೈತರನ್ನು ಬೆಂಗಾವಲಿನಲ್ಲಿ ಕರೆತರಲಾಗುವುದು. ಗುರುತಿನ ಚೀಟಿ ಹೊಂದಿರುವ ರೈತರಿಗೆ ಮಾತ್ರವೇ ಪ್ರತಿಭಟನಾ ಸ್ಥಳಕ್ಕೆ ಪ್ರವೇಶ ನೀಡಲಾಗುವುದು. ಸಂಜೆ 5 ಗಂಟೆಯ ವೇಳೆಗೆ ರೈತರನ್ನು ಪುನಃ ಪೊಲೀಸರ ಬೆಂಗಾವಲಿನಲ್ಲಿ ಮರಳಿ ಕರೆದುಕೊಂಡು ಹೋಗಲಾಗುವುದು ಎಂದು ದಿಲ್ಲಿ ಪೊಲೀಸರ ಹೇಳಿಕೆ ತಿಳಿಸಿದೆ.