ಖ್ಯಾತ ಚಿತ್ರಕಥಾ ಬರಹಗಾರ ಮಾಡಂಪು ಕುಂಜುಕುಟ್ಟನ್‌ ಕೊರೊನಾದಿಂದ ನಿಧನ

ಮಲಯಾಳಂ ಚಿತ್ರರಂಗದ ಜನಪ್ರಿಯ ನಿರ್ದೇಶಕ, ಚಿತ್ರಕಥಾ ಬರಹಗಾರ, ನಟ ಡೆನ್ನಿಸ್‌ ಜೋಸೆಫ್ ಅವರು ಸೋಮವಾರವಷ್ಟೇ ಹೃದಯಾಘಾತದಿಂದ ನಿಧನರಾದರು. ಇದೀಗ ಮತ್ತೋರ್ವ ಜನಪ್ರಿಯ ಚಿತ್ರಕಥಾ ಬರಹಗಾರ ಕುಂಜುಕುಟ್ಟನ್ ಅವರು ಕೊರೊನದಿಂದ ನಿಧನರಾಗಿದ್ದಾರೆ.

ಖ್ಯಾತ ಚಿತ್ರಕಥಾ ಬರಹಗಾರ ಮಾಡಂಪು ಕುಂಜುಕುಟ್ಟನ್‌ ಕೊರೊನಾದಿಂದ ನಿಧನ
Linkup
ಕೊರೊನಾ ಎರಡನೇ ಅಲೆಯ ಚಿತ್ರರಂಗಕ್ಕೆ ಶಾಪವಾಗಿ ಪರಿಣಮಿಸಿದೆ. ಅದರಲ್ಲೂ ಮಲಯಾಳಂ ಚಿತ್ರರಂಗದ ಕೆಲ ಗಣ್ಯರು ಕೊರೊನಾದಿಂದ ನಿಧನರಾಗುತ್ತಿದ್ದಾರೆ. ಸೋಮವಾರವಷ್ಟೇ (ಮೇ 10) ಮಾಲಿವುಡ್‌ನ ಖ್ಯಾತ ನಿರ್ದೇಶಕ ಡೆನ್ನಿಸ್ ಜೋಸೆಫ್ ಹೃದಯಾಘಾತದಿಂದ ನಿಧನರಾದರು. ಅವರ ಸಾವಿನ ನೋವನ್ನು ಚಿತ್ರರಂಗ ಇನ್ನೂ ಅನುಭವಿಸುತ್ತಿರುವಾಗಲೇ, ಹೆಸರಾಂತ ಸ್ಕ್ರೀನ್‌ಪ್ಲೇ ರೈಟರ್‌, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಾಡಂಪು ಕುಂಜುಕುಟ್ಟನ್ ಅವರು ಕೊರೊನಾದಿಂದ ನಿಧನರಾಗಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಅವರನ್ನು ತ್ರಿಶೂರ್‌ನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರು ಎಳೆದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಜನಪ್ರಿಯ ಚಿತ್ರಕಥೆ ಬರಹಗಾರ ಕುಂಜುಕುಟ್ಟನ್‌ ಅವರು ಮಾಲಿವುಡ್‌ನ್‌ ಜನಪ್ರಿಯ ಚಿತ್ರಕಥೆ ಬರಹಗಾರರಾಗಿದ್ದರು. 1978ರಲ್ಲಿ ತೆರೆಕಂಡ ಅಶ್ವತ್ಥಾಮ ಸಿನಿಮಾದ ಮೂಲಕ ಅವರು ಚಿತ್ರಕಥೆ ಬರವಣಿಗೆ ಶುರು ಮಾಡಿದ್ದರು. 2000ರಲ್ಲಿ ತೆರೆಕಂಡ 'ಕರುಣಂ' ಸಿನಿಮಾದ ಸ್ಕ್ರೀನ್‌ಪ್ಲೇ ಬರವಣಿಗೆಗಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿಯೂ ದೊರಕಿತ್ತು. ಅಗ್ನಿಸಾಕ್ಷಿ, ದೇಶದನಂ, ಸಫಲಂ, ಅಟ್ಟಕಥಾ, ವೀರಾಲಿಪಟ್ಟು, ಪರಿಣಾಮಂ ಸೇರಿದಂತೆ ಅನೇಕ ಸಿನಿಮಾಗಳಿಗೆ ಚಿತ್ರಕಥೆ ಬರೆದಿದ್ದರು. 1983ರಲ್ಲಿ ಪ್ರಕಟಗೊಂಡ ಅವರ ಮಹಾಪ್ರಸ್ಥಾನಂ ಕಾದಂಬರಿಗೆ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿತ್ತು. ತ್ರಿಶೂರ್ ಜಿಲ್ಲೆಯ ಕಿರಲೂರು ಗ್ರಾಮದಲ್ಲಿ 1941ರ ಜೂನ್‌ 23ರಂದು ಕುಂಜುಕುಟ್ಟನ್ ಜನಿಸಿದರು. ಕೆಲ ಕಾಲ ಅವರು ಸಂಸ್ಕೃತ ಶಿಕ್ಷಕರಾಗಿಯು, ದೇವಸ್ಥಾನದಲ್ಲಿ ಅರ್ಚಕರಾಗಿಯೂ ಕೆಲಸ ಮಾಡಿದ್ದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇನ್ನು, ಕುಂಜುಕುಟ್ಟನ್ ನಿಧನಕ್ಕೆ ಮಲಯಾಳಂ ಚಿತ್ರರಂಗ ಸಂತಾಪ ಸೂಚಿಸಿದೆ. 'ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಮಾಡಂಪು ಕುಂಜುಕುಟ್ಟನ್ ಸರ್‌.. ಸೋಶಿಯ್ ಮೀಡಿಯಾ ಟೈಮ್‌ಲೈನ್‌ಗಳು ನಿಧನವಾರ್ತೆಯ ಕಾಲಂ ಆಗುತ್ತಿವೆ. ಶೀಘ್ರವೇ ಈ ಸಮಯವೂ ಬದಲಾಗಲಿ' ಎಂದು ಬೇಸರದಿಂದ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ ನಟ ಪೃಥ್ವಿರಾಜ್ ಸುಕುಮಾರನ್.