ಕರ್ನಾಟಕ ಸರ್ಕಾರಕ್ಕೆ ಆ ಅಧಿಕಾರವಿದೆ!: ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್

ದಕ್ಷಿಣ ಕನ್ನಡಕ್ಕೆ ಪ್ರವೇಶಿಸಲು ಕೇರಳದ ಜನರು ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ತರಬೇಕೆಂಬ ಕರ್ನಾಟಕ ಸರ್ಕಾರ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದೆ.

ಕರ್ನಾಟಕ ಸರ್ಕಾರಕ್ಕೆ ಆ ಅಧಿಕಾರವಿದೆ!: ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್
Linkup
ತಿರುವನಂತಪುರಂ: ಕಾಸರಗೋಡು ಮತ್ತು ಮಂಗಳೂರು ಗಡಿ ಮೂಲಕ ಪ್ರವೇಶಿಸಲು ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರವೇ ಅವಕಾಶ ನೀಡಲಾಗುವುದು ಎಂಬ ಸರ್ಕಾರದ ನಿರ್ಬಂಧವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳನ್ನು ವಜಾಗೊಳಿಸಿದೆ. ಅಂತಹ ಆದೇಶಗಳನ್ನು ಹೊರಡಿಸಲು ನೆರೆಯ ರಾಜ್ಯಕ್ಕೆ ಅಧಿಕಾರವಿದೆ ಎಂದು ಅದು ಹೇಳಿದೆ. ಕೇರಳದಿಂದ ಕರ್ನಾಟಕಕ್ಕೆ ತೆರಳಲು ಸಾಧ್ಯವಾಗದಂತೆ ಯಾವುದೇ ರಸ್ತೆ ತಡೆ ನಿರ್ಬಂಧವನ್ನು ವಿಧಿಸಿಲ್ಲ ಎಂಬ ವಾಸ್ತವವನ್ನು ಪರಿಗಣಿಸಲಾಗುವುದು. ಆರ್‌ಟಿ-ಪಿಸಿಆರ್ ಪ್ರಮಾಣಪತ್ರದಂತಹ ನಿರ್ಬಂಧಗಳನ್ನು, ಕೇರಳದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಅತ್ಯಧಿಕವಾಗಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ವಿಧಿಸಲಾಗಿದೆ ಎಂದು ಅದು ಹೇಳಿದೆ. 'ಹೀಗಾಗಿ, ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ, ಅಂತಹ ಯಾವುದೇ ಸಂದರ್ಭಗಳಲ್ಲಿ ರೋಗದ ವಿರುದ್ಧದ ಹೋರಾಟದಲ್ಲಿ ಯಾವುದೇ ಸಕಾರಣ ನಿರ್ಬಂಧಗಳನ್ನು ವಿಧಿಸಲು ರಾಜ್ಯಗಳಿಗೆ ಅಧಿಕಾರ ಮತ್ತು ಜವಾಬ್ದಾರಿ ನೀಡಲಾಗಿದೆ' ಎಂದು ಕೋರ್ಟ್ ಹೇಳಿದೆ. 'ಕೇಂದ್ರ ಸರ್ಕಾರ ಹೊರಡಿಸಿರುವ ವಿವಿಧ ಮಾರ್ಗಸೂಚಿಗಳಿಗೆ ಪೂರಕವಾಗಿ ಕರ್ನಾಟಕ ಸರ್ಕಾರಕ್ಕೆ ವಿಪತ್ತು ನಿರ್ವಹಣಾ ಕಾಯ್ದೆ, 2005ರ ಅಡಿ ಅಂತಹ ಸುತ್ತೋಲೆ, ಆದೇಶ ಅಥವಾ ಮಾರ್ಗಸೂಚಿಗಳನ್ನು ಹೊರಡಿಸಲು ಅಧಿಕಾರವಿದೆ' ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಮಾಣಿಕ್ ಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಲಿ ಅವರನ್ನು ಒಳಗೊಂಡ ನ್ಯಾಯಪೀಠ ಆದೇಶದಲ್ಲಿ ಹೇಳಿದೆ. ಮಂಜೇಶ್ವರದ ಐಯುಎಂಎಲ್ ಶಾಸಕ ಎಕೆಎಂ ಅಶ್ರಫ್ ಮತ್ತು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಜಯಾನಂದ ಕೆಆರ್ ಅವರು ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ಕೋರ್ಟ್ ವಜಾಗೊಳಿಸಿದೆ. ನೆರೆಯ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿನ ಸನ್ನಿವೇಶವನ್ನು ಗಣನೆಗೆ ತೆಗೆದುಕೊಂಡು ಅಂತಹ ಅಗತ್ಯ ಸುತ್ತೋಲೆಗಳನ್ನು ಕರ್ನಾಟಕ ಸರ್ಕಾರಕ್ಕೆ ಅಧಿಕಾರವಿದೆ. ಕೇರಳದ ಜನರು ಕರ್ನಾಟಕಕ್ಕೆ ತೆರಳಲು ಬೇರೆ ಯಾವುದೇ ರೀತಿಯ ನಿರ್ಬಂಧಗಳನ್ನು ವಿಧಿಸಿಲ್ಲ. ಕರ್ನಾಟಕ ರಾಜ್ಯದ ಒಳಗೆ ವಿಧಿಸಲಾಗಿರುವ ನಿರ್ಬಂಧಗಳು ಸೂಕ್ತವಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ಆಯಾ ವ್ಯಾಪ್ತಿಯಲ್ಲಿನ ಹೈಕೋರ್ಟ್ ನಿರ್ಧರಿಸಬೇಕಾಗುತ್ತದೆ ಎಂದು ಕೋರ್ಟ್ ತನ್ನ 100 ಪುಟಗಳ ತೀರ್ಪಿನಲ್ಲಿ ಹೇಳಿದೆ.