'ಕಾಂಗ್ರೆಸ್ ಟೂಲ್ಕಿಟ್' ಪ್ರಕರಣ: ಬೆಂಗಳೂರಿನಲ್ಲಿ ಟ್ವಿಟ್ಟರ್ ಮುಖ್ಯಸ್ಥನ ವಿಚಾರಣೆ ನಡೆಸಿದ್ದ ದಿಲ್ಲಿ ಪೊಲೀಸರು
'ಕಾಂಗ್ರೆಸ್ ಟೂಲ್ಕಿಟ್' ಪ್ರಕರಣ: ಬೆಂಗಳೂರಿನಲ್ಲಿ ಟ್ವಿಟ್ಟರ್ ಮುಖ್ಯಸ್ಥನ ವಿಚಾರಣೆ ನಡೆಸಿದ್ದ ದಿಲ್ಲಿ ಪೊಲೀಸರು
ಕಾಂಗ್ರೆಸ್ ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ದಿಲ್ಲಿ ಮತ್ತು ಗುರುಗ್ರಾಮಗಳಲ್ಲಿ ಟ್ವಿಟ್ಟರ್ ಅಧಿಕಾರಿಗಳಿಗಾಗಿ ಹುಡುಕಾಟ ನಡೆಸಿದ್ದ ದಿಲ್ಲಿ ಪೊಲೀಸರು, ಮೇ 31ರಂದು ಬೆಂಗಳೂರಿಗೆ ಬಂದು ಟ್ವಿಟ್ಟರ್ ಇಂಡಿಯಾ ಮುಖ್ಯಸ್ಥರನ್ನು ವಿಚಾರಣೆಗೆ ಒಳಪಡಿಸಿತ್ತು.
ಹೊಸದಿಲ್ಲಿ: 'ಕಾಂಗ್ರೆಸ್ ಟೂಲ್ಕಿಟ್'ಗೆ ಸಂಬಂಧಿಸಿದಂತೆ ದಕ್ಷಿಣ ದಿಲ್ಲಿ ಮತ್ತು ಗುರುಗ್ರಾಮದಲ್ಲಿ ಕಳೆದ ತಿಂಗಳು ಸತತ ಹುಡುಕಾಟ ನಡೆಸಿದ್ದ ದಿಲ್ಲಿ ಪೊಲೀಸರು, ಬೆಂಗಳೂರಿಗೆ ಬಂದು ಇಂಡಿಯಾದ ಮುಖ್ಯಸ್ಥ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು ಎನ್ನುವುದು ಬಹಿರಂಗವಾಗಿದೆ.
ಆರೋಪಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ಇಂಡಿಯಾದ ಮುಖ್ಯಸ್ಥ ಮನೀಶ್ ಅವರನ್ನು ವಿಚಾರಣೆಗೆ ಒಳಪಡಿಸುವ ಸಲುವಾಗಿ ದಿಲ್ಲಿ ಪೊಲೀಸರ ವಿಶೇಷ ಘಟಕವು ಮೇ 24ರಂದು ದಕ್ಷಿಣ ದಿಲ್ಲಿ ಮತ್ತು ಗುರುಗ್ರಾಮಗಳಲ್ಲಿ ಹುಡುಕಾಟ ನಡೆಸಿತ್ತು. ಕಾಂಗ್ರೆಸ್ ಟೂಲ್ಕಿಟ್ ತನಿಖೆ ಕುರಿತಾದ ಟ್ವಿಟ್ಟರ್ ಹೇಳಿಕೆಯನ್ನು ತಿರಸ್ಕರಿಸಿ, ಕಾನೂನು ಸಂಸ್ಥೆಗಳೊಂದಿಗೆ ಸಹಕರಿಸುವಂತೆ ದಿಲ್ಲಿ ಪೊಲೀಸರು ಸೂಚನೆ ನೀಡಿದ ನಾಲ್ಕು ದಿನಗಳ ಬಳಿಕ, ಅಂದರೆ ಮೇ 31ರಂದು ಬೆಂಗಳೂರಿಗೆ ಭೇಟಿ ನೀಡಿದ್ದರು.
ಡಿಸಿಪಿ ಪ್ರಮೋದ್ ಕುಶ್ವಾಹ ನೇತೃತ್ವದ ತಂಡವು ಬೆಂಗಳೂರಿಗೆ ಆಗಮಿಸಿತ್ತು. ಕೋವಿಡ್ 19 ಸಾಂಕ್ರಾಮಿಕದ ಕಾರಣದಿಂದ ಪೊಲೀಸರ ಮುಂದೆ ಹಾಜರಾಗಲು ಸಮಯ ಕೋರಿ ಮನೀಶ್ ಮಹೇಶ್ವರಿ ಅವರು ದಿಲ್ಲಿ ಪೊಲೀಸರಿಗೆ ಪತ್ರ ಬರೆದಿದ್ದರು. ಸಾಧ್ಯವಾದರೆ ಬೆಂಗಳೂರಿನಲ್ಲಿ ವಿಚಾರಣೆ ಎದುರಿಸಲು ಸಿದ್ಧರಿರುವುದಾಗಿ ಹೇಳಿದ್ದರು.
ಮನೀಶ್ಗೆ 40 ಪ್ರಶ್ನೆಗಳುಹೀಗಾಗಿ ಬೆಂಗಳೂರಿಗೆ ದೌಡಾಯಿಸಿದ್ದ ತಂಡವು ಮನೀಶ್ ಅವರಿಗೆ ಕನಿಷ್ಠ 40 ಪ್ರಶ್ನೆಗಳನ್ನು ಕೇಳಿದೆ. ಇದರಲ್ಲಿ ಮಾಹಿತಿಯನ್ನು ತಿರುಚಲಾಗಿದೆ ಎಂದು ಟ್ವೀಟ್ಗಳಿಗೆ ಗುರುತು ನಮೂದಿಸುವ ಕುರಿತಾದ ಟ್ವಿಟ್ಟರ್ ನೀತಿಗಳ ಬಗ್ಗೆ ಮೊದಲ ಪ್ರಶ್ನೆ ಕೇಳಲಾಗಿತ್ತು. ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು 'ಟೂಲ್ಕಿಟ್' ಕುರಿತು ಉಲ್ಲೇಖಿಸಿ ಮಾಡಿದ್ದ ಟ್ವೀಟ್ ಅನ್ನು 'ತಿರುಚಲಾಗಿದೆ' ಎಂದು ಗುರುತಿಸಲು ಕಂಪೆನಿ ನಡೆಸಿರಬಹುದಾದ ತನಿಖೆ ಬಗ್ಗೆ ಪ್ರಶ್ನಿಸಲಾಗಿತ್ತು. ಅದರ ಅಧಿಕೃತತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಸಂಸ್ಥೆಯು ಕಾಂಗ್ರೆಸ್ನ ಹಿರಿಯ ನಾಯಕರ ಜತೆ ಸಂಪರ್ಕದಲ್ಲಿತ್ತೇ ಎಂದು ಕೂಡ ಕೇಳಲಾಗಿದೆ.
ಕಾಂಗ್ರೆಸ್ ನೀಡಿದ್ದ ದೂರುಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಹಾಗೂ ಸಂಶೋಧನಾ ಘಟಕಗಳ ರೋಹನ್ ಗುಪ್ತಾ ಮತ್ತು ರಾಜೀವ್ ಗೌಡ ಅವರು ಸಲ್ಲಿಸಿದ ದೂರುಗಳ ಆಧಾರದಲ್ಲಿ ದಿಲ್ಲಿ ಪೊಲೀಸರು ಟೂಲ್ಕಿಟ್ ಪ್ರಕರಣದ ವಿಚಾರಣೆ ಆರಂಭಿಸಿದ್ದರು. ಮನೀಶ್ ಮಹೇಶ್ವರಿ ಅವರಿಗೆ ನೀಡಲಾಗಿದ್ದ ಮೊದಲ ಎರಡು ನೋಟಿಸ್ಗಳಲ್ಲಿ ಅಸ್ಪಷ್ಟ ಉತ್ತರ ಬಂದಿತ್ತು. ಇದರ ಬಳಿಕ ಪೊಲೀಸರ ತಂಡಗಳು ಟ್ವಿಟ್ಟರ್ ಅಧಿಕಾರಿಗಳಿಗಾಗಿ ಲಾಡೊ ಸರೈ ಹಾಗೂ ಗುರುಗ್ರಾಮದ ಕಚೇರಿಗಳಿಗೆ ತೆರಳಿತ್ತು.