ಉಲ್ಫಾ ಬಂಡುಕೋರರನ್ನು ಶಾಂತಿ ಮಾತುಕತೆಗೆ ಆಹ್ವಾನಿಸಿದ ಅಸ್ಸಾಂನ ನೂತನ ಸಿಎಂ ಹಿಮಂತ ಬಿಸ್ವ ಶರ್ಮಾ

ರಾಜ್ಯದಲ್ಲಿನ ಎಲ್ಲ ಬಂಡುಕೋರರ ಸಂಘಟನೆಗಳು ಶಾಂತಿ ಮಾತುಕತೆಗೆ ಬರಬೇಕು ಎಂದು ಅಸ್ಸಾಂನ ನೂತನ ಸಿಎಂ ಹಿಮಂತ ಬಿಸ್ವಾ ಶರ್ಮಾ ಆಹ್ವಾನ ನೀಡಿದ್ದು, ಅದರಲ್ಲಿಯೂ ಉಲ್ಫಾ (ಐ) ಸಂಘಟನೆಯ ನಾಯಕ ಪರೇಶ್‌ ಬರುಹಾ ಅವರಿಗೆ ವಿಶೇಷ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಉಲ್ಫಾ ಬಂಡುಕೋರರನ್ನು ಶಾಂತಿ ಮಾತುಕತೆಗೆ ಆಹ್ವಾನಿಸಿದ ಅಸ್ಸಾಂನ ನೂತನ ಸಿಎಂ ಹಿಮಂತ ಬಿಸ್ವ ಶರ್ಮಾ
Linkup
ಗುವಾಹಟಿ: ಅಸ್ಸಾಂನ 15ನೇ ಮಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿಯ ಹಿಮಂತ ಬಿಸ್ವ ಶರ್ಮಾ ಅವರು, ಬಂಡುಕೋರರಿಗೆ ಶಾಂತಿ ಮಾತುಕತೆಯ ಆಹ್ವಾನ ನೀಡಿದ್ದಾರೆ. "ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಶಾಂತಿ ನೆಲೆಸಿದೆ. ಶಾಶ್ವತ ಶಾಂತಿ ನೆಲೆಗೊಳ್ಳುವಂತೆ ಮಾಡುವುದು ನಮ್ಮ ಉದ್ದೇಶ. ಹೀಗಾಗಿ ರಾಜ್ಯದಲ್ಲಿನ ಎಲ್ಲ ಬಂಡುಕೋರರ ಸಂಘಟನೆಗಳು ಶಾಂತಿ ಮಾತುಕತೆಗೆ ಬರಬೇಕೆಂದು ಆಹ್ವಾನ ನೀಡುತ್ತೇನೆ. ಅದರಲ್ಲಿಯೂ (ಐ) ಸಂಘಟನೆಯ ನಾಯಕ ಪರೇಶ್‌ ಬರುಹಾ ಅವರಿಗೆ ವಿಶೇಷ ಮನವಿ ಮಾಡುತ್ತೇನೆ,'' ಎಂದು ಹಿಮಂತ ಅವರು ಸುದ್ದಿಗಾರರಿಗೆ ತಿಳಿಸಿದರು. ಮಧ್ಯಾಹ್ನ ನಡೆದ ಸರಳ ಸಮಾರಂಭದಲ್ಲಿ 52 ವರ್ಷದ ಹಿಮಂತ ಬಿಸ್ವ ಶರ್ಮಾ ಅವರಿಗೆ ರಾಜ್ಯಪಾಲ ಜಗದೀಶ್‌ ಮುಖಿ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಅವರ ಜತೆ ಬಿಜೆಪಿಯ 10, ಗಣ ಪರಿಷತ್‌ (ಎಜಿಪಿ)ನ ಇಬ್ಬರು ಮತ್ತು ಯುಪಿಪಿಎಲ್‌ನ ಒಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹಿಂದಿನ ಸರಕಾರದಲ್ಲಿ ಸಚಿವರಾಗಿದ್ದ ಬಿಜೆಪಿಯ ನಾಲ್ವರು ಹಾಗೂ ಎಜಿಪಿಯ ಇಬ್ಬರಿಗೆ ಈ ಸಲವೂ ಸಂಪುಟದಲ್ಲಿ ಅವಕಾಶ ಲಭಿಸಿದೆ. ಬಿಜೆಪಿಯ ಅಜಂತಾ ನಿಯೋಗ್‌ ಸಂಪುಟದಲ್ಲಿರುವ ಏಕೈಕ ಮಹಿಳೆಯಾಗಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ನಿರ್ಗಮಿತ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್‌, ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್‌ ಮತ್ತು ರಮೇಶ್‌ ತೆಲಿ, ನಾಗಾಲ್ಯಾಂಡ್‌ ಮುಖ್ಯಮಂತ್ರಿ ನೈಫು ರಿಯೊ, ಅಸ್ಸಾಂ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರಿಪುನ್‌ ಬೊರಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಧಿಕಾರಿ ಪ್ರತಿಪಕ್ಷ ನಾಯಕಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಸುವೇಂದು ಅಧಿಕಾರಿ ಅವರನ್ನು ಆಯ್ಕೆ ಮಾಡಲಾಗಿದೆ. ಸೋಮವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಅಧಿಕಾರಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಒಂದು ಕಾಲದಲ್ಲಿ ತೃಣಮೂಲ ಕಾಂಗ್ರೆಸ್‌ ವರಿಷ್ಠೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಸುವೇಂದು ಅಧಿಕಾರಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ಅವರನ್ನು 1,900 ಮತಗಳ ಅಂತರದಿಂದ ಮಣಿಸಿದ್ದಾರೆ. ಪಳನಿಸ್ವಾಮಿಗೆ ಹೊಣೆತಮಿಳುನಾಡಿನಲ್ಲಿ ಮಾಜಿ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರನ್ನು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕರಾಗಿ ಸೋಮವಾರ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಪಳನಿಸ್ವಾಮಿ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿ ನೇಮಕವಾಗುವುದು ಬಹುತೇಕ ಖಚಿತವಾಗಿದೆ.