'ಆ' ನಿರ್ದೇಶಕನನ್ನು ಕಂಡರೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ಗೆ ಸಿಕ್ಕಾಪಟ್ಟೆ ಅಸೂಯೆ! ಯಾರವರು?
'ಆ' ನಿರ್ದೇಶಕನನ್ನು ಕಂಡರೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ಗೆ ಸಿಕ್ಕಾಪಟ್ಟೆ ಅಸೂಯೆ! ಯಾರವರು?
'ಮಗಧೀರ', 'ಬಾಹುಬಲಿ', 'ವಿಕ್ರಮಾರ್ಕುಡು', 'ತಲೈವಿ', 'ಆರ್ಆರ್ಆರ್' ಹೀಗೆ ಬಿಗ್ ಬಜೆಟ್ ಸಿನಿಮಾಗಳಿಗೆ ಕಥೆ ಬರೆಯುವುದರಲ್ಲಿ ನಿರ್ದೇಶಕ ರಾಜಮೌಳಿ ತಂದೆ, ಬರಹಗಾರ ಕೆ.ವಿ. ವಿಜಯೇಂದ್ರ ಪ್ರಸಾದ್ ನಿಷ್ಣಾತರು. ಇಂತಹ ಜನಪ್ರಿಯ ಬರಹಗಾರನಿಗೆ ತೆಲುಗಿನ ಒಬ್ಬ ನಿರ್ದೇಶಕನನ್ನು ಕಂಡರೆ ತುಂಬ ಅಸೂಯೆಯಂತೆ!
ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ, ಇಡೀ ಭಾರತೀಯ ಚಿತ್ರರಂಗದಲ್ಲೇ ಸ್ಕ್ರಿಪ್ಟ್ ರೈಟರ್ ವಿಜಯೇಂದ್ರ ಪ್ರಸಾದ್ಗೆ ತುಂಬ ಬೇಡಿಕೆ ಇದೆ. ಪುತ್ರ ಅವರ 'ಬಾಹುಬಲಿ' ಸೇರಿದಂತೆ ಬಹುತೇಕ ಸಿನಿಮಾಗಳಿಗೆ ಕಥೆ ನೀಡಿರುವುದೇ ಅವರು. ಜೊತೆಗೆ ಬಾಲಿವುಡ್ನ 'ಭಜರಂಗಿ ಭಾಯಿಜಾನ್', 'ಮಣಿಕರ್ಣಿಕಾ'ಗೂ ಕಥೆ ಬರೆದಿದ್ದು ಇದೇ ವಿಜಯೇಂದ್ರ ಪ್ರಸಾದ್. ತಾವು ದೊಡ್ಡ ರೈಟರ್ ಆಗಿದ್ದರೂ, ಪುತ್ರ ದೇಶ ಕಂಡ ಅತ್ಯುತ್ತಮ ನಿರ್ದೇಶಕ ಆಗಿದ್ದರೂ ವಿಜಯೇಂದ್ರ ಪ್ರಸಾದ್ಗೆ ತೆಲುಗಿನ ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ ಅವರನ್ನು ಕಂಡರೆ ಸಿಕ್ಕಾಪಟ್ಟೆ ಅಸೂಯೆಯಂತೆ!
ವಿಜಯೇಂದ್ರ ಪ್ರಸಾದ್ ಮೊಬೈಲ್ಗೆ ಪುರಿ ವಾಲ್ಪೇಪರ್
ಅಸೂಯೆ ಎಂದಕೂಡಲೇ ನೆಗೆಟಿವ್ ಆಗಿ ಥಿಂಕ್ ಮಾಡಬೇಡಿ. ಪುರಿ ಜಗನ್ ಮೇಲಿರುವ ಅಸೂಯೆಗೆ ಕಾರಣ, ಅವರ ಪ್ರತಿಭೆ. ಹೌದು, ಈಚೆಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ವಿಜಯೇಂದ್ರ ಪ್ರಸಾದ್ ಹೇಳಿಕೊಂಡಿದ್ದಾರೆ. ಬಗ್ಗೆ ಎಷ್ಟೊಂದು ಪ್ರೀತಿ ಇದೆ ಎಂದರೆ, ತಮ್ಮ ಮೊಬೈಲ್ಗೆ ಅವರದ್ದೇ ವಾಲ್ಪೇಪರ್ ಹಾಕಿಕೊಂಡಿದ್ದಾರೆ. ಜಗನ್ ಪ್ರತಿಭೆಯನ್ನು ಮನಸಾರೆ ಹೊಗಳುತ್ತಾರೆ ಅವರು. ಪುತ್ರ ದೊಡ್ಡ ಡೈರೆಕ್ಟರ್ ಆಗಿದ್ದರೂ, ಪುತ್ರನ ಸಮಕಾಲೀನ ನಿರ್ದೇಶಕನ ಮೇಲೆ ವಿಜಯೇಂದ್ರ ಪ್ರಸಾದ್ ಪ್ರೀತಿ ಇಟ್ಟುಕೊಂಡಿರುವುದು ವಿಶೇಷ.
ಪುರಿ ಬಗ್ಗೆ ವಿಜಯೇಂದ್ರ ಪ್ರಸಾದ್ ಹೇಳುವುದೇನು?
'ನಾಯಕ ಮತ್ತು ಖಳ ನಾಯಕನ ಮಧ್ಯೆ ಜಗಳ ಶುರು ಮಾಡುವುದಕ್ಕೆ ಪುರಿಗೆ ಒಂದು ದೃಶ್ಯ ಸಾಕು. ಅದು ಕೂಡ ಪರಿಣಾಮಕಾರಿಯಾಗಿ ಇರುತ್ತದೆ. ಒಂದು ಫೈಟ್ ಸೀನ್ ಶುರುವಾಗುವುದಕ್ಕೂ ಮುನ್ನ ಕನಿಷ್ಠಪಕ್ಷ 2-3 ದೃಶ್ಯಗಳಾನ್ನಾದರೂ ರಾಜಮೌಳಿ ತೆಗೆಯುತ್ತಾನೆ. ಆದರೆ, ಪುರಿಗೆ ಅದು ಬಹಳ ಸಲೀಸು. ಅದಕ್ಕಾಗಿಯೇ ನಾನು ಪುರಿ ಪ್ರತಿಭೆ ಕಂಡು ತುಂಬ ಅಸೂಯೆ ಪಡುತ್ತೇನೆ. ಇದನ್ನು ಪುರಿಗೂ ನಾನು ಹೇಳಿದ್ದೇನೆ ಎಂದುಕೊಳ್ಳುತ್ತೇನೆ' ಎಂದಿದ್ದಾರೆ ವಿಜಯೇಂದ್ರ ಪ್ರಸಾದ್.
ಸ್ಕ್ರಿಪ್ಟ್ಗೆ ಸಹಾಯ ಮಾಡುತ್ತಿರುವ ಪುರಿ
ರಾಜಮೌಳಿಯ 'ಆರ್ಆರ್ಆರ್'ಗೆ ಕಥೆ ಬರೆದುಕೊಟ್ಟಿರುವ ವಿಜಯೇಂದ್ರ ಪ್ರಸಾದ್, ಈಗ ಮಹೇಶ್ ಬಾಬು ಅವರಿಗಾಗಿ ಒಂದು ಕಥೆ ಬರೆಯುತ್ತಿದ್ದಾರೆ. ಇದು ರಾಜಮೌಳಿಯ ಮುಂದಿನ ಸಿನಿಮಾವಾಗಿದೆ. ಬಹಳ ವಿಶೇಷವಾದ ಸ್ಕ್ರಿಪ್ಟ್ ಬರೆಯುವುದಕ್ಕೆ ವಿಜಯೇಂದ್ರ ಪ್ರಸಾದ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಅವರು ಪುರಿ ಜಗನ್ನಾಥ್ ಸಹಾಯವನ್ನು ಪಡೆದುಕೊಂಡಿದ್ದಾರಂತೆ. ಮಹೇಶ್ ಜೊತೆಗೆ 'ಪೊಕಿರಿ', 'ಬಿಜಿನೆಸ್ಮೆನ್' ಥರದ ಸಿನಿಮಾಗಳನ್ನು ಮಾಡಿದ ಅನುಭವ ಪುರಿಗೆ ಇದೆ.