Mundra Port Drug Case: ಅಫ್ಘಾನಿಸ್ತಾನ, ಪಾಕಿಸ್ತಾನ, ಇರಾನ್‌ನಿಂದ ಬರುವ ಹಡಗುಗಳಿಗೆ ಅದಾನಿ ನಿಷೇಧ

ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಭಾರಿ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾದ ಸುಮಾರು ಒಂದು ತಿಂಗಳ ಬಳಿಕ ಅದಾನಿ ಪೋರ್ಟ್ಸ್, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್‌ನಿಂದ ಬರುವ ಸರಕು ಹಡಗುಗಳ ಮೇಲೆ ನಿರ್ಬಂಧ ವಿಧಿಸಿದೆ.

Mundra Port Drug Case: ಅಫ್ಘಾನಿಸ್ತಾನ, ಪಾಕಿಸ್ತಾನ, ಇರಾನ್‌ನಿಂದ ಬರುವ ಹಡಗುಗಳಿಗೆ ಅದಾನಿ ನಿಷೇಧ
Linkup
ಅಹಮದಾಬಾದ್: ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಅಂದಾಜು 20,000 ಕೋಟಿ ರೂ ಮೌಲ್ಯದ 2,998 ಕೆಜಿ ಹೆರಾಯಿನ್ ಪತ್ತೆಯಾದ ಸುಮಾರು ಒಂದು ತಿಂಗಳ ಬಳಿಕ, ಈ ಬಂದರನ್ನು ನಿರ್ವಹಣೆ ಮಾಡುತ್ತಿರುವ ಮತ್ತು ವಿಶೇಷ ಆರ್ಥಿಕ ವಲಯ (ಎಪಿಎಸ್‌ಇಜೆಡ್) ಮಹತ್ವದ ಪ್ರಕಟಣೆ ಮಾಡಿದೆ. ನವೆಂಬರ್ 15 ರಿಂದ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಇರಾನ್ ದೇಶಗಳಿಂದ ಹೊರಡುವ ಯಾವುದೇ ಕಂಟೇನರ್ ಸರಕು ಸಾಗಣೆ ಹಡಗಿನ ನಿರ್ವಹಣೆ ಮಾಡುವುದಿಲ್ಲ ಎಂದು ಸೋಮವಾರ ತಿಳಿಸಿದೆ. ಅದಾನಿ ಪೋರ್ಟ್ಸ್ ಸೋಮವಾರ ಈ ವ್ಯಾಪಾರ ಸಲಹಾ ಸೂಚನೆ ಹೊರಡಿಸಿದೆ. 'ಯಾವುದೇ ಎಪಿಎಸ್‌ಇಜೆಡ್ ಬಂದರಿನ ಮೂರನೇ ವ್ಯಕ್ತಿಗಳಿಂದ ನಿರ್ವಹಣೆ ಮಾಡಲಾಗುತ್ತಿರುವ ಟರ್ಮಿನಲ್ ಸೇರಿದಂತೆ ಎಪಿಎಸ್‌ಇಜೆಡ್ ನಿರ್ವಹಿಸುವ ಎಲ್ಲ ಟರ್ಮಿನಲ್‌ಗಳಿಗೂ ಈ ಸೂಚನೆ ಮುಂದಿನ ಆದೇಶದವರೆಗೂ ಅನ್ವಯವಾಗಲಿದೆ' ಎಂದು ಅದಾನಿ ಸಮೂಹ ಕಂಪೆನಿ ತಿಳಿಸಿದೆ. ಕಳೆದ ತಿಂಗಳು ರಾಜ್ಯದಲ್ಲಿನ ಮುಂದ್ರಾ ಬಂದರಿನಲ್ಲಿ 38 ಚೀಲಗಳಿರುವ ಎರಡು ದೊಡ್ಡ ಕಂಟೇನರ್‌ಗಳಲ್ಲಿ ಪತ್ತೆಯಾಗಿತ್ತು. ಗಾಂಧಿಧಾಮದ ಕಂದಾಯ ಬೇಹುಗಾರಿಕೆ ನಿರ್ದೇಶನಾಲಯ (ಡಿಆರ್‌ಐ) ಅವುಗಳನ್ನು ವಶಪಡಿಸಿಕೊಂಡಿತ್ತು. ಅಫ್ಘಾನಿಸ್ತಾನದಿಂದ ಹೊರಟು, ಇರಾನ್‌ನ ಬಂದರ್ ಅಬ್ಬಾಸ್ ಬಂದರಿನ ಮೂಲಕ ಭಾರತಕ್ಕೆ ಬಂದಿರುವ 'ಅಲ್ಪ ಸಂಸ್ಕರಿತ ಟಾಲ್ಕಂ ಕಲ್ಲುಗಳು' ಎಂದೇ ಮೊದಲು ನಂಬಲಾಗಿತ್ತು. ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಅನುಮಾನದಲ್ಲಿ ಎರಡೂ ಕಂಟೇನರ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಸೆಪ್ಟೆಂಬರ್ 13ರಂದು ಡಿಆರ್‌ಐ ಪ್ರಕರಣ ದಾಖಲಿಸಿಕೊಂಡಿತ್ತು. ಬಳಿಕ ಮುಂದ್ರಾ ಬಂದರಿನಲ್ಲಿ ಭಾರಿ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಎನ್‌ಐಎ ಇತ್ತೀಚೆಗಷ್ಟೇ ವಹಿಸಿಕೊಂಡಿತ್ತು. ಮಾತ್ರವಲ್ಲದೆ, ಅದಾನಿ ಪೋರ್ಟ್ಸ್ ದೇಶದಲ್ಲಿ ಇನ್ನೂ ಅನೇಕ ಬಂದರುಗಳನ್ನು ನಿರ್ವಹಣೆ ಮಾಡುತ್ತಿದೆ. ಗುಜರಾತ್‌ನ ಹಾಜಿರಾ ಬಂದರು, ಆಂಧ್ರಪ್ರದೇಶದ ಕೃಷ್ಣಪಟ್ಟಣಂ, ತಮಿಳುನಾಡಿನ ಕಟ್ಟುಪಲ್ಲಿ ಮತ್ತು ಎನ್ನೋರ್, ಮಹಾರಾಷ್ಟ್ರದ ಡಿಘಿ ಬಂದರು ಹಾಗೂ ಕೇರಳದ ವಿಳಿಂಜಮ್ ಬಂದರು ಎಪಿಎಸ್‌ಇಜೆಡ್‌ನ ನಿರ್ವಹಣೆಯಲ್ಲಿದೆ. ಮುಂದ್ರಾ ಪೋರ್ಟ್‌ನಲ್ಲಿ 2020ರ ಜನವರಿಯಿಂದ ಡಿಸೆಂಬರ್‌ವರೆಗೂ ಅಫ್ಘಾನಿಸ್ತಾನ ಮತ್ತು ಇರಾನ್‌ಗಳಿಂದ 24,483 ಟನ್ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ವಾಣಿಜ್ಯ ಗುಪ್ತಚರ ಮತ್ತು ಸಾಂಖ್ಯಿಕ ಪ್ರಧಾನ ನಿರ್ದೇಶಕರ ದಾಖಲೆಗಳು ತಿಳಿಸುತ್ತವೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ಹಿಡಿತಕ್ಕೆ ಪಡೆದುಕೊಂಡ ಬಳಿಕ ಅಲ್ಲಿಂದ ಬರುವ ಆಮದು ಸರಕುಗಳು ಬಹುತೇಕ ಸ್ಥಗಿತಗೊಂಡಿವೆ. ಅದೇ ರೀತಿ ಪಾಕಿಸ್ತಾನದ ಆಮದು ಕೂಡ ಭಾರತ ಸರ್ಕಾರವು ಶೇ 200ರಷ್ಟು ಸುಂಕ ವಿಧಿಸಿದ ಬಳಿಕ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮುಂದ್ರಾ ಬಂದರಿನಲ್ಲಿ ಮಾದಕ ವಸ್ತುಗಳನ್ನು ಹೊಂದಿರುವ ಕಂಟೇನರ್ ಪತ್ತೆಯಾದ ಪ್ರಕರಣ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ವಿರೋಧ ಪಕ್ಷಗಳು ನೇರವಾಗಿ ಅದಾನಿ ಸಮೂಹವೇ ಇದಕ್ಕೆ ಹೊಣೆ ಎಂದು ಬೊಟ್ಟು ಮಾಡಿದ್ದವು. ಅದಾನಿ ನಿರ್ವಹಣೆ ಬಂದರಿನಿಂದ ಭಾರಿ ಪ್ರಮಾಣದಲ್ಲಿ ಮಾದಕ ವಸ್ತುಗಳು ಭಾರತಕ್ಕೆ ಕಳ್ಳಸಾಗಣೆಯಾಗುತ್ತಿದೆ ಎಂದು ಆರೋಪಿಸಿದ್ದವು. ಈ ಹಿನ್ನೆಲೆಯಲ್ಲಿ ಅದಾನಿ ಸಮೂಹ ಈ ಕಠಿಣ ನಿರ್ಧಾರಕ್ಕೆ ಮುಂದಾಗಿದೆ.