
ಹೊಸದಿಲ್ಲಿ: ಭಾರತ ಸರ್ಕಾರ ಜಾರಿಗೆ ತಂದಿರುವ ನವಮಾಧ್ಯಮ ಕಾನೂನುಗಳು () ವಾಟ್ಸಾಪ್ನ ಗೌಪ್ಯತಾ ನೀತಿ (end-to-end encryption)ಯನ್ನು ಉಲ್ಲಂಘಿಸುತ್ತದೆ ಎಂದು ವಾಟ್ಸಾಪ್ ಸಂಸ್ಥೆಯ ವಕ್ತಾರ ಹೇಳಿಕೆ ನೀಡಿದ್ದಾರೆ.
ಬುಧವಾರದಿಂದ ಜಾರಿಗೆ ಬರುತ್ತಿರುವ ಹೊಸ ಐಟಿ ನೀತಿ ವಿರುದ್ಧ ವಾಟ್ಸಾಪ್ ಸಂಸ್ಥೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿರುವ ಬೆನ್ನಲ್ಲೇ ಈ ಹೇಳಿಕೆ ನೀಡಿದೆ.
ಹೈಕೋರ್ಟ್ನಲ್ಲಿ ದಾವೆ ಸಲ್ಲಿಸಿರುವ ಕುರಿತು ಮಾಧ್ಯಮ ಸಂಸ್ಥೆಯೊಂದರ ಪ್ರಶ್ನೆಯೊಂದಕ್ಕೆ ಉತ್ತರಿಸಿ. ವಾಟ್ಸಾಪ್ ಸಂದೇಶಗಳನ್ನು ಟ್ರೇಸ್ ಮಾಡಲು ಅವಕಾಶ ಕೇಳಿರುವುದು, ಪ್ರತಿಯೊಬ್ಬರ ಫಿಂಗರ್ ಪ್ರಿಂಟ್ಗಳನ್ನು (ಬೆರಳಚ್ಚು) ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ಸಮ. ಇದು ಜನತೆಯ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿದ್ದಾರೆ.
ನಮ್ಮ ಗ್ರಾಹಕರ ಗೌಪ್ಯತೆಯ ಉಲ್ಲಂಘನೆ ವಿರುದ್ಧ ಹೋರಾಡಲು ಜಾಗತಿಕ ಮಟ್ಟದಲ್ಲಿ ತಜ್ಞರ ತಂಡವನ್ನೇ ಹೊಂದಿದ್ದೇವೆ. ಅಲ್ಲದೆ ಜನರ ಸುರಕ್ಷತೆ ಕಾಪಾಡಲು ಭಾರತ ಸರಕಾರದೊಂದಿಗೂ ಕೈಜೋಡಿಸಿದ್ದೇವೆ. ಸರಕಾರದ ಕಾನೂನಾತ್ಮ ವಿನಂತಿಗಳಿಗೆ ನಾವು ಸ್ಪಂದಿಸಿದ್ದೇವೆ ಎಂದು ವಾಟ್ಸಾಪ್ ವಕ್ತಾರರು ತಿಳಿಸಿದ್ದಾರೆ.
ಸರ್ಕಾರದ ಹೊಸ ಐಟಿ ನೀತಿ ವಿರುದ್ಧ ವಾಟ್ಸಾಪ್ ಸಂಸ್ಥೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಹೊಸ ನಿಯಮವು ತನ್ನ ಬಳಕೆದಾರರ ಖಾಸಗಿತನಕ್ಕೆ ಹಾನಿ ಮಾಡಲಿದೆ ಎಂದು ಫೇಸ್ಬುಕ್ ಮಾಲೀಕತ್ವದ ವಾಟ್ಸಾಪ್ ತನ್ನ ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಿದೆ.
ಭಾರತ ಸರಕಾರ ಕಳೆದ ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣಗಳು, ಒಟಿಟಿ ಮಾಧ್ಯಮಗಳಿಗೆ ಸಂಬಂಧಿಸಿ ನೀತಿ ಸಂಹಿತೆಯನ್ನು ರೂಪಿಸಿತ್ತು. ಅದರ ಜಾರಿಗೆ ಮೂರು ತಿಂಗಳಿನ ಗಡುವು ನೀಡಿತ್ತು. ಇದೀಗ ಗಡುವು ಮುಕ್ತಾಯವಾಗುತ್ತಿದ್ದು, ನಿಯಮಗಳನ್ನು ಪಾಲಿಸದಿದ್ದರೆ, ಭಾರತದಲ್ಲಿ ಅಂಥ ಸಂಸ್ಥೆಗಳ ಮಾನ್ಯತೆ ರದ್ದಾಗುವ ಸಾಧ್ಯತೆ ಇದೆ.