ಪೆಗಾಸಸ್ ಬೇಹುಗಾರಿಕೆ: ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ, ವಿಚಾರಣೆಗೆ ಪರಿಣತರ ಸಮಿತಿ ರಚನೆ

ಪೆಗಾಸಸ್ ಬೇಹುಗಾರಿಕೆ ಆರೋಪದ ಅರ್ಜಿಗಳಿಗೆ ಸಂಬಂಧಿಸಿದಂತೆ ಸರ್ಕಾರ ನೀಡಿರುವ ಅಫಿಡವಿಟ್ ಅಸ್ಪಷ್ಟವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್, ಈ ಕುರಿತಾದ ತನಿಖೆ ನಡೆಸಲು ಮೂವರು ಪರಿಣತರ ಸಮಿತಿ ರಚನೆ ಮಾಡಿದೆ.

ಪೆಗಾಸಸ್ ಬೇಹುಗಾರಿಕೆ: ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ, ವಿಚಾರಣೆಗೆ ಪರಿಣತರ ಸಮಿತಿ ರಚನೆ
Linkup
ಹೊಸದಿಲ್ಲಿ: ಸಾಫ್ಟ್‌ವೇರ್ ಬಳಸಿ ನಡೆಸಿರುವ ಆರೋಪವು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ್ದಾಗಿದೆ ಮತ್ತು ಧಮನಕಾರಿ ಪರಿಣಾಮ ಬೀರಬಹುದಾಗಿದೆ ಎಂದು ಬುಧವಾರ ಅಭಿಪ್ರಾಯಪಟ್ಟಿದೆ. ಈ ವಿವಾದದ ಕುರಿತು ತನಿಖಾ ಸಮಿತಿ ರಚಿಸುವ ಸರ್ಕಾರದ ಮನವಿಗೆ ಅದು ಅನುಮತಿ ನೀಡಿದೆ. 'ನಾವು ಸರ್ಕಾರಕ್ಕೆ ನೋಟಿಸ್ ನೀಡಿದ್ದೆವು. ತಾನು ತೆಗೆದುಕೊಂಡ ಎಲ್ಲ ಕ್ರಮಗಳ ಬಗ್ಗೆ ವಿವರ ನೀಡಲು ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶ ನೀಡಿದ್ದೆವು. ಆದರೂ ಪುನರಾವರ್ತಿತ ಅವಕಾಶಗಳ ನಡುವೆಯೂ ಅವರು ಸ್ಪಷ್ಟತೆ ಇಲ್ಲದ ಸೀಮಿತ ಅಫಿಡವಿಟ್ ಸಲ್ಲಿಸಿದ್ದಾರೆ. ಅವರು ಸ್ಪಷ್ಟವಾಗಿ ತಿಳಿಸಿದ್ದರೆ, ನಮ್ಮ ಮೇಲಿನ ಭಾರವನ್ನು ಕಡಿಮೆ ಮಾಡಬಹುದಾಗಿತ್ತು. ಆದರೆ ಪ್ರತಿ ಬಾರಿ ರಾಷ್ಟ್ರೀಯ ಭದ್ರತಾ ವಿಚಾರ ಎದುರಾದಾಗ ಸರ್ಕಾರ ಯಾವಾಗಲೂ ಮುಕ್ತವಾಗಿರುತ್ತದೆ ಎಂದಲ್ಲ' ಎಂದು ತೀಕ್ಷ್ಣವಾಗಿ ಹೇಳಿದೆ. 'ರಾಷ್ಟ್ರೀಯ ಭದ್ರತೆಯ ವಿಚಾರವನ್ನು ನ್ಯಾಯಾಲಯ ಅತಿಕ್ರಮಿಸುವುದಿಲ್ಲ. ಆದರೆ ಹಾಗೆಂದು ಕೋರ್ಟ್ ಮೂಕ ಪ್ರೇಕ್ಷಕನಾಗಿಯೂ ಇರುವುದಿಲ್ಲ. ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬಂತಹ ಸ್ವರೂಪದ ಆರೋಪಗಳಿವೆ. ಇದು ಧಮನಕಾರಿ ಪರಿಣಾಮಗಳನ್ನು ಹೊಂದಿರಬಹುದು. ವಿದೇಶಿ ಸಂಸ್ಥೆಗಳು ಕೂಡ ಭಾಗಿಯಾಗಿವೆ ಎಂಬ ಆರೋಪಗಳೂ ಇವೆ' ಎಂದು ನ್ಯಾಯಾಲಯ ಹೇಳಿದೆ. ಸರ್ಕಾರದ ಅಸ್ಪಷ್ಟ ನಿರಾಕರಣೆ ಸಾಕಾಗುವುದಿಲ್ಲ. ಆರಂಭದಲ್ಲಿ ಕೆಲವು ಅರ್ಜಿಗಳು ಪತ್ರಿಕೆಗಳ ವರದಿ ಆಧರಿಸಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದವು. ಅವುಗಳ ಬಗ್ಗೆ ತೃಪ್ತಿ ಇರಲಿಲ್ಲ. ಅರ್ಜಿದಾರರಲ್ಲಿ ಕೆಲವರು ಪೆಗಾಸಸ್‌ನ ನೇರ ಬಲಿಪಶುಗಳು. ಅಂತಹ ತಂತ್ರಜ್ಞಾನವನ್ನು ಬಳಸುವುದರ ಬಗ್ಗೆ ಗಂಭೀರ ಪರಿಗಣನೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಹೀಗಾಗಿ ಈ ಎಲ್ಲ ಆರೋಪಗಳ ಬಗ್ಗೆ ತನಿಖೆ ನಡೆಯಬೇಕಿದೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ಉಸ್ತುವಾರಿಯಲ್ಲಿ ಈ ಬೇಹುಗಾರಿಕೆ ಆರೋಪಗಳ ಬಗ್ಗೆ ತನಿಖೆ ನಡೆಸಲಿದೆ ಎಂದು ಕೋರ್ಟ್ ಹೇಳಿತು. ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ, ಸಿಪಿಎಂ ಸಂಸದ ಜಾನ್ ಬ್ರಟ್ಟಾಸ್, ಸುಪ್ರೀಂಕೋರ್ಟ್ ವಕೀಲ ಎಂಎಲ್ ಶರ್ಮಾ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹಾಗೂ ಕೆಲವು ಪತ್ರಕರ್ತರು ಸೇರಿದಂತೆ ಹಲವಾರು ಮಂದಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್‌ವಿ ರವೀಂದ್ರನ್ ಅವರು ಪರಿಣತರ ಸಮಿತಿಯ ಉಸ್ತುವಾರಿ ವಹಿಸಲಿದ್ದಾರೆ. ಅಲೋಕ್ ಜೋಶಿ ಮತ್ತು ಸಂದೀಪ್ ಒಬೆರಾಯ್ ಇತರೆ ಸದಸ್ಯರಾಗಿರುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಹೇಳಿದರು. ತಮ್ಮ ಹಕ್ಕುಗಳ ಖಾಸಗಿತನದ ಉಲ್ಲಂಘನೆಯಿಂದ ದೇಶದ ಪ್ರತಿ ಪ್ರಜೆಯನ್ನೂ ರಕ್ಷಿಸಬೇಕು. ನಾಗರಿಕರ ಖಾಸಗಿತನದ ಹಕ್ಕಿನ ಸ್ವಚ್ಛದ ಉಲ್ಲಂಘನೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ಪೆಗಾಸಸ್ ಬೇಹುಗಾರಿಕೆ ಆರೋಪಗಳು ಭಯ ಹುಟ್ಟಿಸುವಂತಿವೆ. ನ್ಯಾಯಾಲಯ ಸತ್ಯವನ್ನು ತಿಳಿಯಬೇಕಿದೆ. ಖಾಸಗಿತನವು ಪತ್ರಕರ್ತರು ಮತ್ತು ರಾಜಕಾರಣಿಗಳಿಗೆ ಮಾತ್ರ ಸಂಬಂಧಿಸಿಲ್ಲ. ಅದು ಪ್ರತಿಯೊಬ್ಬರ ಹಕ್ಕು. ಆದರೆ ಎಲ್ಲ ನಿರ್ಧಾರಗಳನ್ನೂ ಸಾಂವಿಧಾನಿಕ ಪ್ರಕ್ರಿಯೆ ಅಡಿ ನಡೆಸಬೇಕು ಎಂದು ಹೇಳಿದೆ. ಪೆಗಾಸಸ್ ಬೇಹುಗಾರಿಕೆ ಕುರಿತಾತ ಅರ್ಜಿಗಳಲ್ಲಿ ಪ್ರಸ್ತಾಪಿಸಿರುವ ಆರೋಪಗಳನ್ನು ಮೇಲ್ನೋಟಕ್ಕೆ ಒಪ್ಪಿಕೊಳ್ಳುತ್ತೇವೆ. ಈ ಪ್ರಕರಣದ ಆಳವನ್ನು ಅರಿಯಲು ಸಮಿತಿ ರಚಿಸಲಾಗುವುದು. ಪರಿಣತರ ಸಮಿತಿಯು ಈ ಆರೋಪಗಳನ್ನು ಕೂಲಂಕಷವಾಗಿ ಪರಿಶೀಲಿಸಲಿದೆ. ಮತ್ತು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ ಎಂದ ನ್ಯಾಯಪೀಠ, ಎಂಟು ವಾರಗಳ ಬಳಿಕ ಮುಂದಿನ ವಿಚಾರಣೆ ನಿಗದಿಪಡಿಸಿತು.