ಹಾಲು ಖರೀದಿ ದರ ₹1.50 ಕಡಿತಕ್ಕೆ ಖಂಡನೆ: ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ!

ಒಕ್ಕೂಟವು ನಷ್ಟದ ನೆಪದಲ್ಲಿ ಹಾಲು ಖರೀದಿ ದರ 1.50 ರೂ. ಖಡಿತಗೊಳಿಸುವ ಆದೇಶ ವಾಪಸ್‌ ಪಡೆದು, ನಷ್ಟಕ್ಕೆ ಕಾರಣ ಪತ್ತೆ ಹಚ್ಚಲು ವಿಶೇಷ ತಂಡ ರಚಿಸುವಂತೆ ಆಗ್ರಹಿಸಿ ರೈತ ಸಂಘದಿಂದ ತಲೆ ಮೇಲೆ ಕಲ್ಲು ಹೊತ್ತು ಒಕ್ಕೂಟದ ಎದುರು ಪ್ರತಿಭಟನೆ ನಡೆಸಲಾಯಿತು.

ಹಾಲು ಖರೀದಿ ದರ ₹1.50 ಕಡಿತಕ್ಕೆ ಖಂಡನೆ: ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ!
Linkup
ಕೋಲಾರ: ಒಕ್ಕೂಟವು ನಷ್ಟದ ನೆಪದಲ್ಲಿ ಹಾಲು ಖರೀದಿ ದರ 1.50 ರೂ. ಖಡಿತಗೊಳಿಸುವ ಆದೇಶ ವಾಪಸ್‌ ಪಡೆದು, ನಷ್ಟಕ್ಕೆ ಕಾರಣ ಪತ್ತೆ ಹಚ್ಚಲು ವಿಶೇಷ ತಂಡ ರಚಿಸುವಂತೆ ಆಗ್ರಹಿಸಿ ರೈತ ಸಂಘದಿಂದ ತಲೆ ಮೇಲೆ ಕಲ್ಲು ಹೊತ್ತು ಒಕ್ಕೂಟದ ಎದುರು ನಡೆಸಲಾಯಿತು. ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಪಶು ಆಹಾರ ಮತ್ತು ಮೇವು ಒಕ್ಕೂಟದಿಂದ ಉಚಿತವಾಗಿ ನೀಡಿ ಆ ನಂತರ ಬೆಲೆ ಕಡಿಮೆ ಮಾಡಲಿ. ಅದನ್ನು ಬಿಟ್ಟು, ನಷ್ಟದ ನೆಪದಲ್ಲಿ ರೈತರೊಂದಿಗೆ ಒಕ್ಕೂಟ ಚಲ್ಲಾಟವಾಡುತ್ತಿರುವುದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಒಕ್ಕೂಟ ನಷ್ಟದಲ್ಲಿದ್ದರೆ ಅದಕ್ಕೆ ಹೈನುಗಾರಿಕೆ ನಡೆಸುತ್ತಿರುವವರು ಕಾರಣರಲ್ಲ. ರೈತರ ಹಾಲು ಖರೀದಿಸುವ ಡೇರಿಯವರು ಗುಣಮಟ್ಟದ ನೆಪದಲ್ಲಿ ಹಾಲಿನ ದರ ಖಡಿತ ಮಾಡುವುದು ಒಂದು ಕಡೆಯಾದರೆ, ಒಕ್ಕೂಟ ನಷ್ಟದಲ್ಲಿದೆ ಎಂದು ಒಕ್ಕೂಟದ ಆಡಳಿತ ಮಂಡಳಿ ತಮಗೆ ಇಷ್ಟ ಬಂದ ರೀತಿ ರೈತರಿಗೆ ಕೊಡುವ ದರ ಖಡಿತ ಮಾಡುತ್ತಿದ್ದಾರೆ. ಕೇಳಿದರೆ, ನಷ್ಟದ ನೆಪ ಹೇಳುತ್ತಿದ್ದಾರೆಂದು ಒಕ್ಕೂಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಒಕ್ಕೂಟದ ನಷ್ಟಕ್ಕೆ ಕಾರಣ ತಿಳಿಯಲು ವಿಶೇಷ ತಂಡ ರಚಿಸಿ ಬಿ.ಎಂ.ಸಿ.ಗಳಿಗೆ ಬರುವ ವಾಹನಗಳಿಗೆ ಕಡ್ಡಾಯವಾಗಿ ಜಿ.ಪಿ.ಆರ್‌.ಎಸ್‌. ಅಳವಡಿಸಿ ಒಕ್ಕೂಟದ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಅದನ್ನು ಬಿಟ್ಟು ರೈತರ ಹಾಲಿನ ಖರೀದಿ ದರ ಇಳಿಸಲು ಮುಂದಾದರೆ ಜಾನುವಾರುಗಳ ಸಮೇತ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡುವ ಎಚ್ಚರಿಕೆ ನೀಡಿದರು. ಮನವಿ ಸ್ವೀಕರಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ ಒಕ್ಕೂಟ 32ಕೋಟಿ ರೂ.ನಷ್ಟದಲ್ಲಿದೆ. ಇದರಿಂದ ರೈತರಿಗೆ ಸಮರ್ಪಕವಾದ ಹಣ ನೀಡಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಬೆಲೆ ಖಡಿತ ಮಾಡಿದ್ದೇವೆ. ಅಧ್ಯಕ್ಷರ ಜತೆ ಚರ್ಚೆ ಮಾಡಿ ಬೆಲೆ ಇಳಿಕೆ ಆದೇಶ ವಾಪಸ್‌ ಪಡೆಯುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್‌, ಹಸಿರು ಸೇನೆ ತಾ.ಅಧ್ಯಕ್ಷ ವೇಣು, ನವೀನ್‌, ಕೇಶವ, ವಕ್ಕಲೇರಿ ಹನುಮಯ್ಯ, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್‌, ಬಂಗಾರಪೇಟೆ ತಾ.ಅಧ್ಯಕ್ಷ ಐತಂಡಹಳ್ಳಿ ಮುನ್ನ, ಮಂಗಸಂದ್ರ ತಿಮ್ಮಣ್ಣ, ನಗರ ಸಂಚಾಲಕ ಮಂಗಸಂದ್ರ ನಾಗೇಶ್‌ ಮುಂತಾದವರಿದ್ದರು.