ಮದುವೆಯ ನಾಟಕವಾಡಿ 180 ಗ್ರಾಂ ಚಿನ್ನ, 2.5 ಲಕ್ಷ ರೂ. ಪಡೆದು ಕಲಾವಿದೆಗೆ ವಂಚನೆ; ದೂರು ದಾಖಲು

ಮಹಿಳೆ ಒಬ್ಬಂಟಿಯಾಗಿರುವ ವಿಚಾರ ತಿಳಿದ ಹರೀಶ್‌ ಆಕೆಯನ್ನು ಪ್ರೀತಿಸುವ ನಾಟಕವಾಡಿ ಆಕೆಯ ಮನೆಯಲ್ಲೇ ತಾಳಿ ಕಟ್ಟಿ ವಿವಾಹವಾಗಿದ್ದ. ನಂತರ ಮಹಿಳೆಯ ಬಳಿಯಿದ್ದ 180 ಗ್ರಾಂ ಚಿನ್ನ, 2.5 ಲಕ್ಷ ರೂ. ತೆಗೆದುಕೊಂಡು ಹೋಗಿ ಮತ್ತೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಬಗ್ಗೆ ಮಹಿಳೆ ವಿಚಾರಿಸಿದಾಗ ಹರೀಶ್‌ಗೆ ಈಗಾಗಲೇ ವಿವಾಹವಾಗಿ ಇಬ್ಬರು ಮಕ್ಕಳಿರುವ ಸಂಗತಿ ಗೊತ್ತಾಗಿತ್ತು.

ಮದುವೆಯ ನಾಟಕವಾಡಿ 180 ಗ್ರಾಂ ಚಿನ್ನ, 2.5 ಲಕ್ಷ ರೂ. ಪಡೆದು ಕಲಾವಿದೆಗೆ ವಂಚನೆ; ದೂರು ದಾಖಲು
Linkup
ಬೆಂಗಳೂರು: ಕುಖ್ಯಾತ ರೌಡಿ ಕುಣಿಗಲ್‌ ಗಿರಿ ಸಹೋದರ ಪ್ರೀತಿಸುವ ನಾಟಕವಾಡಿ, ವಿವಾಹವಾಗಿ 180 ಗ್ರಾಂ ಚಿನ್ನಾಭರಣ, 2.5 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಿ ಸಹ ಕಲಾವಿದೆಯೊಬ್ಬರು ರಾಜಗೋಪಾಲನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಹೆಗ್ಗನಹಳ್ಳಿಯ ನಿವಾಸಿ 26 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇರೆಗೆ ಕುಣಿಗಲ್‌ ಗಿರಿ ಸಹೋದರ ಹರೀಶ್‌ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಒಂದು ವರ್ಷದ ಹಿಂದೆ ಹರೀಶ್‌ ದೂರುದಾರ ಮಹಿಳೆಗೆ ಪರಿಚಯವಾಗಿದ್ದ. ಮಹಿಳೆ ಒಬ್ಬಂಟಿಯಾಗಿರುವ ವಿಚಾರ ತಿಳಿದ ಹರೀಶ್‌ ಆಕೆಯನ್ನು ಪ್ರೀತಿಸುವ ನಾಟಕವಾಡಿ ಆಕೆಯ ಮನೆಯಲ್ಲೇ ತಾಳಿ ಕಟ್ಟಿ ವಿವಾಹವಾಗಿದ್ದ. ನಂತರ ಮಹಿಳೆಯ ಬಳಿಯಿದ್ದ 180 ಗ್ರಾಂ ಚಿನ್ನ, 2.5 ಲಕ್ಷ ರೂ. ತೆಗೆದುಕೊಂಡು ಹೋಗಿ ಮತ್ತೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಬಗ್ಗೆ ಮಹಿಳೆ ವಿಚಾರಿಸಿದಾಗ ಹರೀಶ್‌ಗೆ ಈಗಾಗಲೇ ವಿವಾಹವಾಗಿ ಇಬ್ಬರು ಮಕ್ಕಳಿರುವ ಸಂಗತಿ ಗೊತ್ತಾಗಿತ್ತು. ಹರೀಶ್‌ ಪತ್ನಿ ಮತ್ತು ಅತ್ತೆಯ ಬಳಿ ನಡೆದ ಸಂಗತಿ ವಿವರಿಸಿ ಒಡವೆ ಕೇಳಲು ಹೋದಾಗ ಅವರು ಹಲ್ಲೆ ಮಾಡಿ ಮಹಿಳೆಯನ್ನು ಕಳುಹಿಸಿದ್ದರು. ನಂತರ ಮಹಿಳೆ ರಾಜಗೋಪಾಲನಗರದ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದರು. ಠಾಣೆಗೆ ಹರೀಶ್‌ನನ್ನು ಕರೆಸಿದ ಪೊಲೀಸರು, ಆತನಿಂದ ಒಡವೆ ಬದಲಿಗೆ 1 ಲಕ್ಷ ರೂ. ಚೆಕ್‌ ಅನ್ನು ಮಹಿಳೆಗೆ ಕೊಡಿಸಿದ್ದರು. ಜೀವ ಬೆದರಿಕೆ: ಚೆಕ್‌ ಅನ್ನು ಬ್ಯಾಂಕ್‌ಗೆ ಹಾಕಿದಾಗ ಖಾತೆಯಲ್ಲಿ ಹಣವಿಲ್ಲದೆ ಬೌನ್ಸ್‌ ಆಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಹರೀಶ್‌ ಗಲಾಟೆ ಮಾಡಿ ಮೂರು ಮೊಬೈಲ್‌ ಒಡೆದು ಹಾಕಿದ್ದ. ಪತ್ನಿಯಿಂದ ಕರೆ ಮಾಡಿಸಿ 'ನನ್ನ ಮೈದುನ ಕುಣಿಗಲ್‌ ಗಿರಿಗೆ ಹೇಳಿ ನಿನ್ನನ್ನು ಕೊಲೆ ಮಾಡಿಸುವೆ' ಎಂದು ಪ್ರಾಣ ಬೆದರಿಕೆ ಒಡ್ಡಲಾಗಿದೆ. ಕೆಲ ಹೊತ್ತಿನ ಬಳಿಕ ಅಪರಿಚಿತ ನಂಬರ್‌ನಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ತನ್ನನ್ನು ಕುಣಿಗಲ್‌ ಗಿರಿ ಎಂದು ಪರಿಚಯಿಸಿಕೊಂಡು, ಠಾಣೆಗೆ ನೀಡಿದ ದೂರು ಹಿಂಪಡೆಯದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.